ಹಾವೇರಿ: ಸುರಕ್ಷಿತವಾಗಿ ವಾಹನ ಚಾಲನೆ ಮಾಡಲು ಕಣ್ಣುಗಳ ಪಾತ್ರ ಬಹಳ ಮುಖ್ಯವಾದದ್ದು. ಆದ್ದರಿಂದ ಎಲ್ಲರೂ 40 ವರ್ಷಗಳ ನಂತರ ಕಣ್ಣುಗಳ ತಪಾಸಣೆ ಮಾಡಿಸುವುದು ಮುಖ್ಯವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯ ಕಟೋಕರ ಹೇಳಿದರು.ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಾರಿಗೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇವರುಗಳ ಸಹಯೋಗದಲ್ಲಿ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಕುರಿತು ಆಯೋಜಿಸಲಾದ ನೇತ್ರ ತಪಾಸಣಾ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು, ವಾಹನ ಚಾಲನೆ ಸಮಯದಲ್ಲಿ ಕಣ್ಣುಗಳು ಮಹತ್ತರ ಪಾತ್ರ ವಹಿಸುತ್ತವೆ. ಆದ್ದರಿಂದ ಎಲ್ಲರೂ 40 ವರ್ಷಗಳ ನಂತರ ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡು ದೃಷ್ಟಿದೋಷ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಅದರಲ್ಲೂ ಎಲ್ಲಾ ವಾಹನಗಳ ಚಾಲಕರುಗಳು ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡು ಅವಶ್ಯವಿದ್ದಲ್ಲಿ ಕನ್ನಡಕ ಧರಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳನ್ನು ಸಹ ತಡೆಯಬಹುದಾಗಿದೆ ಸಾರ್ವಜನಿಕರು ಸದರಿ ಶಿಬಿರದ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೋಟಾರು ವಾಹನ ನಿರೀಕ್ಷಕ ಸುನೀಲಕುಮಾರ ಎಚ್, ನೇತ್ರಾಧಿಕಾರಿ ಸುನೀಲ್, ಜ್ಯೋತಿ, ನೇತ್ರಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ಇದ್ದರು.