ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ (ಕೊಡಿ ಹಬ್ಬ) ಪ್ರಯುಕ್ತ ದೇವಸ್ಥಾನದ ಶಾಂತಾರಾಮ ರಂಗಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೋಟೇಶ್ವರ ದೇವಳ ಕೊಡಿ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
ಕುಂದಾಪುರ: ಕಲಾರಾಧನೆ ಭಗವಂತನ ಸಾಕ್ಷಾತ್ಕಾರಕ್ಕೆ ದಾರಿ. ಭಗವಂತನಿಗೆ ಅತೀ ಪ್ರಿಯವಾದದ್ದು ಕಲಾ ಸೇವೆ. ಅದು ನೃತ್ಯ, ಯಕ್ಷಗಾನ ಅಥವಾ ಇನ್ನಾವುದೇ ರೂಪದಲ್ಲಿ ಇರಬಹುದು. ಕಲಾ ಸೇವೆಯಿಂದ ಮನುಷ್ಯ ಅತೀ ಉನ್ನತ ಸ್ಥಾನವನ್ನು ಏರ ಬಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.ಭಾನುವಾರ ಇಲ್ಲಿನ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ (ಕೊಡಿ ಹಬ್ಬ) ಪ್ರಯುಕ್ತ ದೇವಸ್ಥಾನದ ಶಾಂತಾರಾಮ ರಂಗಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀಕೃಷ್ಣನಿಗೆ ಯಕ್ಷಗಾನ, ಭಜನೆ, ನೃತ್ಯ ಮೊದಲಾದ ಕಲೆಗಳೆಂದರೆ ಅತಿ ಪ್ರಿಯವಾದದ್ದು, ಹೀಗಾಗಿ ಶ್ರೀ ಕೃಷ್ಣ ಮಠದಲ್ಲಿ ನಿತ್ಯ ಒಂದಲ್ಲ ಒಂದು ಪ್ರಕಾರದ ಕಲಾ ಸೇವೆ ನಡೆಯುತ್ತಿರುತ್ತದೆ. ರಾಜಾಂಗಣದಲ್ಲಿ ಚಿಟ್ಟಾಣಿ ಸಪ್ತಾಹ, ಧಾರೇಶ್ವರ ಅಷ್ಟಾಹ ಮೊದಲಾದ ಕಾರ್ಯಕ್ರಮಗಳನ್ನು ಪ್ರಾಯೋಜಿಸಿ ಕಲಾ ಸೇವೆ ನಡೆಸಲಾಗುತ್ತಿದೆ. ಅಲ್ಲದೆ ಯಕ್ಷಗಾನ, ಜಾನಪದ ಕ್ಷೇತ್ರದ ಕಲಾ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಕಲಾ ಸೇವೆಗೆ ಭಗವಂತ ಪ್ರಸನ್ನ ಅದನೇನೋ ಎಂಬಂತೆ ನನಗೆ ಕಲಾ ಸೇವೆ ಮಾಡಲು ಭಗವಂತ ಅನುಗ್ರಹಿಸಿದ್ದಾರೆ ಎಂದು ಅವರು ಹೇಳಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಗಿಣಿ ದೇವಾಡಿಗ, ಶ್ರೀ ಕೋಟಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ ಮೊದಲಾದವರು ಹಾಜರಿದ್ದರು.ಕೋಟೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ. ಶ್ರೀನಿವಾಸ್ ರಾವ್ ಹಾಗೂ ರಥ ಶಿಲ್ಪಿ ಜಗನ್ನಾಥ ಆಚಾರ್ಯ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.