- ಕೆಎಎಸ್ - ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಸಿದ್ಧತಾ ಕಾರ್ಯಾಗಾರ
ನಾಗರಿಕ ಸೇವಾ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ವಿದ್ಯಾರ್ಥಿಗಳಿಗೆ ಆಸ್ತಿ ಅಂತಸ್ತಿನ ಅರ್ಹತೆ ಬೇಕಿಲ್ಲ. ಅಪಾರ ಜ್ಞಾನ, ಸಾಧಿಸುವ ಛಲ, ಕಠಿಣ ಪರಿಶ್ರಮ ಹಾಗೂ ನಿಗಧಿತ ಗುರಿ ತಲುಪುವ ಹಠವಿರಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಹೇಳಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಕೆಎಎಸ್ ಮತ್ತು ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಜೀವನದಲ್ಲಿ ಮನುಷ್ಯನಿಗೆ ಪ್ರತಿ ಬಾರಿ ಗೆಲುವು ತೃಪ್ತಿ ನೀಡುವುದಿಲ್ಲ. ಸೋಲಿನ ಬಳಿಕ ಗೆಲುವಿನ ನಗೆ ಬೀರುವುದು ನಿಜ ವಾದ ಸಾಧನೆ. ವಿದ್ಯಾರ್ಥಿ ದೆಸೆಯಲ್ಲಿ ಸಣ್ಣ ಪುಟ್ಟ ಕನಸನ್ನು ಕಾಣದೇ, ಸಮಾಜ ಮುನ್ನಡೆಸುವ ಕೆಎಎಸ್ ಮತ್ತು ಐಎಎಸ್ ಹುದ್ದೆಗಳನ್ನು ಅಲಂಕರಿಸುವ ಬಹುದೊಡ್ಡ ಕನಸನ್ನು ಕಂಡು ಸತತವಾಗಿ ಈಡೇರಿಸುವ ಪ್ರಯತ್ನಕ್ಕೆ ಮುಂದಾಗಬೇಕು ಎಂದರು.
ರಾಜಧಾನಿಯಲ್ಲಿ ಉದ್ಯೋಗ, ಉದ್ಯಮಿ ಕ್ಷೇತ್ರ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಗೇಟ್ ಕಾಯುವವನಿಂದ, ಲಿಫ್ಟ್ ಕೆಲಸದ ವ್ಯಕ್ತಿವರೆಗೂ ಪರ ಭಾಷಿಗರ ಹಾವಳಿ ಹೆಚ್ಚಾಗಿ ಕನ್ನಡ ಮಕ್ಕಳು ದೂರಾಗುತ್ತಿದ್ದಾರೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು, ನಾಡಿನ ಪ್ರತಿ ಕ್ಷೇತ್ರದಲ್ಲೂ ಕನ್ನಡಿಗರು ದೊಡ್ಡ ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು.ಸಾರ್ವಜನಿಕ ಸೇವಾ ಹುದ್ದೆಗಳಾದ ಕೆಎಎಸ್, ಐಎಎಸ್, ಐಪಿಎಸ್ನ ಒಂದು ಸಹಿ ಮಹತ್ವ ನಿರ್ಣಯ ಕೈಗೊಳ್ಳುತ್ತದೆ. ಒಂದು ಫೈಲ್ನಿಂದ ಲಕ್ಷಾಂತರ ಜನರ ಬದುಕಿಗೆ ಸಹಾಯವಾಗಲಿದೆ. ಅಲ್ಲದೇ ಸಾಮಾಜಿಕ ಪಿಡುಗು, ಬಾಲ್ಯವಿವಾಹ ಪ್ರಕರಣ ಹೋಗಲಾಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೂರಕವಾಗಲಿದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸವಾಲುಗಳು ಸರ್ವೆಸಾಮಾನ್ಯ. ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳನ್ನು ಎದುರಿಸಲು ಬಹಳಷ್ಟು ಶ್ರಮವಿರಬೇಕು. ಕನಿಷ್ಠ ಎರಡು ವರ್ಷಗಳ ಕಾಲ ಅಮೂಲ್ಯ ಸಮಯ ಓದಿಗೆ ಮೀಸಲಿಡಬೇಕು. ಮಧ್ಯದಲ್ಲಿ ಯಾವುದೇ ಕ್ಷೇತ್ರದಲ್ಲೂ ಆಸಕ್ತಿ ತೋರದೇ ನಿರಂತರ ಅಧ್ಯಯನ ನಡೆಸಿದರೆ ಯಶಸ್ಸಿನ ಮೆಟ್ಟಿಲು ಲಭ್ಯವಾಗಲಿದೆ ಎಂದು ಹೇಳಿದರು.ವಿಶೇಷವಾಗಿ ಕಸಾಪ ಸಾಹಿತ್ಯ, ಪದ್ಯ, ಕನ್ನಡ ಕಟ್ಟುವ ಕಾಯಕದ ನಡುವೆಯೂ ವಿದ್ಯಾರ್ಥಿಗಳ ಶೈಕ್ಷ ಣಿಕ ಬೆಳವಣಿಗೆಗೆ ಪರಿಣಿತರ ತಂಡದೊಂದಿಗೆ ಕಾರ್ಯಾಗಾರ ಆಯೋಜಿಸಿ ಸ್ಪಂದಿಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಕೂಡಾ ಕಾರ್ಯಾಗಾರದ ಸಂಪೂರ್ಣ ಮಾಹಿತಿ ಪಡೆದುಕೊಂಡು ನಾಗರೀಕ ಸೇವಾ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕಸಾಪ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಒಳಗೊಂಡಂತೆ ನಾಗರೀಕ ಸೇವಾ ಕಾರ್ಯಕ್ಕೆ ಅಣಿಗೊಳಿಸಲು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಂಡಿದೆ. ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿ ಸ್ವತ್ತಲ್ಲ. ಹೀಗಾಗಿ ಯುವ ಸಮೂಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧೃತಿಗೆಡದೇ ಧೈರ್ಯದಿಂದ ಮುನ್ನುಗ್ಗಬೇಕು ಎಂದು ಹೇಳಿದರು.ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಧನೆ ಇಲ್ಲದೇ ಸತ್ತರೇ ಮತ್ತು ಆದರ್ಶವಿಲ್ಲದೇ ಬದುಕು ಮನುಷ್ಯನ ಜೀವನ ವ್ಯರ್ಥವಾದಂತೆ. ಕೇವಲ ಎಂಜಿನಿಯರ್, ಮೆಡಿಕಲ್ ಕ್ಷೇತ್ರಕ್ಕೆ ಸೀಮಿತ ರಾಗದೇ ನಾಗರಿಕ ಸೇವಾ ಕಾರ್ಯದಲ್ಲಿ ತೊಡಗಲು ಯುವ ಜನತೆ ಮುಂದಾಗಿ ಬಡ ವರ್ಗದ ಜನರಿಗೆ ಸ್ಪಂದಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಯುವ ಜನತೆಗೆ ವಿದ್ಯಾಭ್ಯಾಸ ಉತ್ತಮ ವ್ಯಕ್ತಿತ್ವ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಆದರೆ ಅದು ಕೇವಲ ಡಿಗ್ರಿ ಪೂರೈಸಿ ಒಂದು ಕೆಲಸಕ್ಕೆ ಸೀಮಿತವಾಗಬಾರದು. ಉನ್ನತ ಜ್ಞಾನಾರ್ಜನೆ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಸದೃಢ ಸಮಾಜ ಕಟ್ಟುವ ಕೆಲಸದಲ್ಲಿ ಯುವ ಪೀಳಿಗೆ ನಿರತರಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿ ಡಾ. ಕಾಂತರಾಜ್, ಹಾಸನ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಂ.ಬಿ.ಚನ್ನಕೇಶವ, ಕಸಾಪ ತರೀಕೆರೆ ಅಧ್ಯಕ್ಷ ರವಿ ದಳವಾಯಿ, ಚಿಕ್ಕಮಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಸಹಾಯಕ ಮುಖ್ಯ ಚುನಾವಣಾಧಿಕಾರಿ ಎ.ಎಚ್.ಮಹೇಂದ್ರ, ಸಾಹಿತಿ ಡಾ. ಮರುಳಸಿದ್ದಯ್ಯ ಪಟೇಲ್, ಕನ್ನಡಶ್ರೀ ಭಗವಾನ್ ಉಪಸ್ಥಿತರಿದ್ದರು.10 ಕೆಸಿಕೆಎಂ 1
ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಕೆಎಎಸ್ ಮತ್ತು ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಸಿದ್ದತಾ ಕಾರ್ಯಾಗಾರವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಉದ್ಘಾಟಿಸಿದರು.