178 ಕಾರ್ಮಿಕರಿಗೆ ಗಾರೆ ಪರಿಕರಣ, ವೆಲ್ಡಿಂಗ್ ಕಿಟ್ । 15 ಫಲಾನುಭವಿಗಳಿಗೆ ಹೊಲಿಗೆ ಯಂತ್ರವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ2007ರಲ್ಲಿ ಕಟ್ಟಡ ಕಾರ್ಮಿಕರ ಒಳಿತಿಗೆ ಆಗಿನ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅವರು ಕಾರ್ಮಿಕ ಮಂಡಳಿ ಸ್ಥಾಪನೆ ಮಾಡಿದ್ದರು ಎಂದು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು,
ಗುರುವಾರ ಶಾಸಕರ ಕಚೇರಿಯಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೋಂದಾಯಿತ 178 ಫಲಾನುಭವಿಗಳಿಗೆ ಗಾರೆ ಪರಿಕರಣ ಕಿಟ್, 15 ಜನರಿಗೆ ವೆಲ್ಡಿಂಗ್ ಕಿಟ್, 250 ಜನರಿಗೆ ಪೋಷಕಾಂಶಗಳ ಕಿಟ್ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ 15 ಜನರಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.ಕಟ್ಟಡ ಕಾರ್ಮಿಕರು ಶ್ರಮಜೀವಿಗಳು. ಅವರು ಅಸಂಘಟಿತ ವರ್ಗಕ್ಕೆ ಸೇರಿದ್ದು, ಕಟ್ಟಡ ಕಾರ್ಮಿಕರೇ ನಿಜವಾದ ಶಿಲ್ಪಿ ಗಳಾಗಿದ್ದಾರೆ. ಬಹುತೇಕ ಕಟ್ಟಡ ಕಾರ್ಮಿಕರು ಅನಕ್ಷರಸ್ಥರು, ಕಡು ಬಡವರಾಗಿದ್ದು ದುಡಿಯುಲು ತಮ್ಮ ಊರುಗಳನ್ನು ಬಿಟ್ಟು ಬಂದಿದ್ದಾರೆ. ಕಟ್ಟಡದ ಮೇಲೆ ಕೆಲಸ ಮಾಡುವುದು ಅಪಾಯಕಾರಿ, ಕೆಲವೊಮ್ಮೆ ದುರಂತಗಳು ನಡೆದಿದೆ. ಆದ್ದರಿಂದ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲಾಯಿತು. ಮಲ್ಲಿಕಾರ್ಜುನ ಖರ್ಗೆ ಸಚಿವರಾಗಿದ್ದಾಗ ಕಾರ್ಮಿಕ ಕಲ್ಯಾಣಮಂಡಳಿಗೆ ಅನುದಾನ ಹೆಚ್ಚಿಸಿದ್ದರು ಎಂದರು.
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಹಲವಾರು ಸೌಲಭ್ಯಗಳಿದ್ದು ಎಲ್.ಕೆ.ಜಿ ಯಿಂದ ಉನ್ನತ ವ್ಯಾಸಂಗಕ್ಕೆ ಧನ ಸಹಾಯ ನೀಡಲಾಗುತ್ತದೆ. ಮದುವೆಗೆ 50 ಸಾವಿರ ರು. ಸಹಜವಾಗಿ ಮೃತಪಟ್ಟರೆ 75 ಸಾವಿರ, ಅಪಘಾತದಲ್ಲಿ ಮೃತರಾದರೆ 5 ಲಕ್ಷ, ಮಾಸಿಕ ಪೆನ್ಷನ್ 3 ಸಾವಿರ, ಮಹಿಳೆಯರ ಹೆರಿಗೆ ಭತ್ಯೆ 50 ಸಾವಿರ, 2 ಲಕ್ಷ ದವರೆಗೆ ವೈದ್ಯಕೀಯ ಸೌಲಭ್ಯ, ತಾಯಿ-ಮಗು ಯೋಜನೆಯಡಿ ಮಗುವಿಗೆ 3 ವರ್ಷ ತುಂಬುವವರೆಗೆ ವರ್ಷಕ್ಕೆ 6 ಸಾವಿರ, ಮೃತ ಪಿಂಚಣಿದಾರರ ಪತ್ನಿಗೆ ಮಾಸಿಕ 1 ಸಾವಿರ ರು. ನೀಡಲಾಗುತ್ತದೆ. ಕೆಎಸ್ ಆರ್ ಟಿಸಿ ಬಸ್ ಸೌಲಭ್ಯ ಗಳಿರುತ್ತದೆ. ಈ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಸುರೈಯಾಭಾನು, ಉಪಾಧ್ಯಕ್ಷೆ ಉಮಾಕೇಶವ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಸದಸ್ಯರಾದ ಜುಬೇದ, ಮುನಾವರ್ ಪಾಷಾ, ಮುಕಂದ, ವಸೀಂ,ಕುಮಾರಸ್ವಾಮಿ, ತಹಸೀಲ್ದಾರ್ ತನುಜ ಸವದತ್ತಿ, ಕಾರ್ಮಿಕ ಇಲಾಖೆ ಹಿರಿಯ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ತಾಪಂ ಇ.ಒ.ನವೀನ್ ಕುಮಾರ್, ಕೆಪಿಸಿಸಿ ಸದಸ್ಯ ಆರ್. ಸದಾಶಿವ, ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ, ನಗರ ಘಟಕದ ಅಧ್ಯಕ್ಷ ಬಿಳಾಲು ಮನೆ ಉಪೇಂದ್ರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಕೆಡಿಪಿ ಸದಸ್ಯರು, ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯರಿದ್ದರು.