ಗಜೇಂದ್ರಗಡ: ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಅನಧಿಕೃತ ಕೋಚಿಂಗ್ ಸೆಂಟರ್ಗಳ ಹಾವಳಿ ತಡೆಗಟ್ಟಬೇಕು ಹಾಗೂ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬುಧವಾರ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಹೋರಾಟ ನಡೆಯುತ್ತಿದ್ದರೂ ಸ್ಥಳಕ್ಕೆ ಆಗಮಿಸದ ಡಿಡಿಪಿಐ ನಮ್ಮ ಜಿಲ್ಲೆಗೆ ಬೇಡ ಎಂದು ಕಿಡಿಕಾರಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಂದ ಲಕ್ಷಾಂತರ ರುಪಾಯಿ ವಸೂಲಿ ಮಾಡುತ್ತಿದ್ದರೂ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದರು.
ತಾಲೂಕಿನ ಎಲ್ಲ ಹಳ್ಳಿಗಳಿಗೂ ಸಮರ್ಪಕ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಕಾಲೇಜುಗಳು ಶಾಲೆಗಳು ಆರಂಭವಾಗಿ ೧೫ ದಿನ ಕಳೆದರೂ ಬಸ್ಪಾಸ್ ವಿತರಣೆ ಆಗುತ್ತಿಲ್ಲ. ಸರ್ಕಾರ ಉಚಿತವಾಗಿ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ತಕ್ಷಣವೇ ಉಚಿತ ಬಸ್ ಪಾಸ್ಗಳನ್ನು ಸಾರಿಗೆ ಇಲಾಖೆ ನೀಡಬೇಕು. ಅಲ್ಲದೆ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳನ್ನು ಕಲ್ಪಿಸಿ ಪೌಷ್ಟಿಕ ಆಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕಿರಣಕುಮಾರ್ ಕುಲಕರ್ಣಿ, ಸಿಪಿಐ ವಿಜಯಕುಮಾರ್ ಅವರು, ಡಿಡಿಪಿಐ, ಡಿಡಿಪಿಯು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬಳಿಕ, ಜಿಲ್ಲಾ ಮಟ್ಟದ ಡೊನೇಷನ್ ನಿಯಂತ್ರಣ ಸಮಿತಿ ಅಥವಾ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಿ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸುವುದರ ಜತೆಗೆ ಜತೆಗೆ ತಾಲೂಕು ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಿ ಜೂ. ೧೨ರಂದು ಸಭೆ ಕರೆಯುವ ಭರವಸೆ ನೀಡಿದ ಬಳಿಕ ಹೋರಾಟ ಮೊಟಕುಗೊಳಿಸಲಾಯಿತು.ಈ ವೇಳೆ ಗಣೇಶ ರಾಠೋಡ, ಚಂದ್ರು ರಾಠೋಡ, ಪೀರು ರಾಠೋಡ, ಶರಣು ಮಾಟರಂಗಿ, ಅನಿಲಕುಮಾರ್ ಆರ್, ಪ್ರಸನ್ನ ಮೂರ್ತಿ, ಗುರುಕಿರಣ್ ಜಿಗೇರಿ, ಹನುಮೇಶ, ಪ್ರವೀಣ್, ವೀರಪ್ಪ, ಹೊನ್ನೇಶ, ಸುನಿಲ್, ಐಶ್ವರ್ಯ ಕುರಿಗಡೆ, ಉಮಾ ತಾಳಿ, ಬಸಮ್ಮ ಕಡಿವಾಳರ, ಲಲಿತಾ ಕುರಿ, ಭೀಮವ್ವ ಕಟ್ಟಿಮನಿ, ಹಿಮಾಮ್ ಹುಸೇನ್, ವೀರೇಶ್ ಅಂಗಡಿ, ಶಿವಮ್ಮ ಮಂಡಗೇರಿ ಸೇರಿ ಇತರರು ಇದ್ದರು.