ಕನ್ನಡಪ್ರಭ ವಾರ್ತೆ ಹನೂರು
ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಹಾಗೂ ಕುಡಿಯಲು ನೀರು ಒದಗಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ಧ ಗುರುವಾರ ಭಾರತೀಯ ಕಿಸಾನ್ ಸಂಘದಿಂದ ಹನೂರು ತಹಸೀಲ್ದಾರ್ ಕಚೇರಿಯ ಬಳಿ ಪ್ರತಿಭಟನೆ ನಡೆಸಲಾಯುತು. ತಹಸೀಲ್ದಾರ್ ಕಚೇರಿಯ ಮುಂಭಾಗ ಜಮಾಯಿಸಿದ ಪ್ರತಿಭಟನಾನಿರತರು ಸರ್ಕಾರ ಹಾಗೂ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶಿಯ ಹಸುಗಳಿಗೆ ಮೇವು ಒದಗಿಸಿ ಎಂದು ಬೇಸಿಗೆ ಸಮೀಪಿಸುವ15 ದಿನಗಳ ಹಿಂದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದರೂ ಕ್ರಮವಹಿಸಿಲ್ಲ. ಈಗಾಗಲೇ ಪ್ರಾರಂಭಿಸಿರುವ ಗೋ ಶಿಬಿರಗಳಿಗೆ ಸಮರ್ಪಕವಾಗಿ ಮೇವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.ಗಡಿ ಹಂಚಿನಲ್ಲಿರುವ ಕೊಪ್ಪ, ಮಿಣ್ಯ, ಗಾಜನೂರು ಹಾಗೂ ಇನ್ನಿತರೆ ಅವಶ್ಯಕತೆ ಇರುವ ಗ್ರಾಮಗಳ ಜಾನುವಾರುಗಳಿಗೆ ಮೇವು ಕೇಂದ್ರ ಪ್ರಾರಂಭಿಸದೆ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ತಾಲೂಕಿನ ವಿವಿದ ಭಾಗದಲ್ಲಿ ಇರುವ ದೇಶಿಯ ಜಾನುವಾರುಗಳನ್ನು ಉಳಿಸುವ ಕೆಲಸಕ್ಕೆ ಸರಕಾರ ಮುಂದಾಗಬೇಕು ಹಾಗೂ ರೈತರಿಗೆ 2 ರು. ಗಳ ಸಬ್ಸಿಡಿ ದರದಲ್ಲಿ ಮೇವು ಖರೀದಿಸಿ ಎಂದು ಹೇಳುವುದು ಸರಿಯಲ್ಲ. ಸತ್ವವಿಲ್ಲದ ಮೇವನ್ನು ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನನಿರತರ ಮನವೊಲಿಸಲು ಗ್ರೇಡ್ 2 ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾನಿರತರು ಸ್ಥಳಕ್ಕೆ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಆಗಮಿಸಿ ತಮ್ಮ ಸಮಸ್ಯೆಗಳನ್ನು ಮತ್ತು ಬೇಡಿಕೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕೆಂದು ಪಟ್ಟು ಹಿಡಿದು ಧರಣಿ ಮುಂದುವರಿಸುವುದಾಗಿ ತಿಳಿಸಿದರು. ಈ ವೇಳೆ ರಾಜ್ಯಪ್ರಾಂತ್ಯ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಮೂಲಕ ನೆರೆ ರಾಜ್ಯಗಳಲ್ಲಿರುವ ಕಸಾಯಿಖಾನೆಗಳಿಗೆ ಜಾನುವಾರು ಸಾಗಾಣಿಕೆ ಮಾಡಲಾಗುತ್ತಿದೆ. ಅದನ್ನು ತಡೆಗಟ್ಟಲು ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋಸ್ಕೋ, ತಾಲೂಕು ಘಟಕದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸದಾನಂದ, ಜಿಲ್ಲಾ ಸಮಿತಿ ಸದಸ್ಯ ಮಣಿಗರ್ ಪ್ರಸಾದ್, ಡಿ.ತಂಗರಾಜು ಪಿ.ಜಿ.ಪಾಳ್ಯ, ಕೊಪ್ಪ ನಟರಾಜು, ನಾಗೇಶ್, ಶ್ರೀನಿವಾಸ್ ಇತರರು ಭಾಗವಹಿಸಿದ್ದರು.ಮಳೆ ಇಲ್ಲದೆ ಬರಗಾಲದಿಂದ ರೈತರಿಗೆ ಸರ್ಕಾರ ಗೋಶಾಲೆಗಳನ್ನು ತೆರೆದು ಇಲ್ಲಿಯವರೆಗೆ ಮೇವು ಸರಬರಾಜು ಮಾಡಿದೆ ಹೆಚ್ಚುವರಿ ಗೋಶಾಲೆಗಳನ್ನು ತೆರೆಯಲು ಸರ್ಕಾರದ ಅನುಮತಿ ಇಲ್ಲ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ಪಟ್ಟಣದ ಆರ್ಎಂಸಿ ಆವರಣದಲ್ಲಿ ಗೋವುಗಳಿಗೆ ಮೇವು ನಿಧಿ ಬ್ಯಾಂಕ್ ಕರೆಯಲಾಗಿದೆ.-ಗುರುಪ್ರಸಾದ್, ತಹಸಿಲ್ದಾರ್