)
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಂಧ್ರಪ್ರದೇಶ ಮೂಲದ ಕುಮುದಾ ಮೋಸ ಹೋಗಿದ್ದು, ಈ ಸಂಬಂಧ ಸಂತ್ರಸ್ತೆ ದೂರು ಆಧರಿಸಿ ನಕಲಿ ಬಾಬಾ ಅಪ್ಸರ್ ಪಾಷ, ಮಧ್ಯವರ್ತಿಗಳಾದ ಶಂಕರ್ ಹಾಗೂ ಭರತ್ ವಿರುದ್ಧ ಸಿಸಿಬಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಚಾಮರಾಜಪೇಟೆಯಲ್ಲಿ ತನ್ನ ಕುಟುಂಬದ ಜತೆ ಕುಮುದಾ ನೆಲೆಸಿದ್ದರು. ತಮ್ಮ ಮನೆ ಮೇಲೆ ಸಾಲ ಪಡೆಯಲು ಅವರು ಮುಂದಾಗಿದ್ದರು. ಆಗ ತಮ್ಮ ಸ್ನೇಹಿತರ ಮೂಲಕ ಅವರಿಗೆ ಏಜೆಂಟ್ಗಳಾದ ಭರತ್ ಹಾಗೂ ಶಂಕರ್ ಪರಿಚಯವಾಗಿದೆ. ಆಗ ಬ್ಯಾಂಕ್ ಸಾಲ ಕೊಡಿಸುವುದಾಗಿ ನಂಬಿಸಿ ಕುಮುದಾ ಅವರಿಗೆ ನಾಜೂಕಿನ ಮಾತಿನ ಮೂಲಕ ಏಜೆಂಟ್ಗಳು ನಂಬಿಸಿದ್ದರು. ಈ ನಡುವೆ ಕುಮುದಾ ಅವರ ಪುತ್ರ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ. ಈ ಸಂಗತಿ ತಿಳಿದ ಭರತ್ ಹಾಗೂ ಶಂಕರ್, ‘ನಿಮ್ಮ ಸಮಯ ಸರಿಯಿಲ್ಲ ಅನಿಸುತ್ತೆ. ಮನೆಯಲ್ಲಿ ದುಷ್ಟ ಶಕ್ತಿಗಳು ಹೊಕ್ಕಿರಬಹುದು. ಹೀಗಾಗಿಯೇ ನಿಮ್ಮ ಮಗನಿಗೆ ಅಪಘಾತವಾಗಿದೆ’ ಕುಮುದಾ ಅವರಿಗೆ ಹೇಳಿದ್ದರು. ಈ ಮಾತು ಕೇಳಿ ಭೀತಿಗೊಂಡ ಅವರಿಗೆ ಸಮಾಧಾನಪಡಿಸುವಂತೆ ನಾಟಕವಾಡಿದ ಏಜೆಂಟ್ಗಳು, ನಮಗೆ ಗೊತ್ತಿರುವ ಬಾಬಾ ಇದ್ದಾರೆ. ಮನೆಯಲ್ಲಿ ಅವರಿಂದ ವಿಶೇಷ ಪೂಜೆ ಮಾಡಿಸಿದರೆ ಸಮಸ್ಯೆ ನಿವಾರಣೆಯಾಗಲಿದೆ ಎಂದಿದ್ದರು. ಆಗ ತಾವೇ ಮೊಬೈಲ್ಗೆ ಕರೆ ಪಾಷನನ್ನು ಕುಮುದಾ ಅವರಿಗೆ ಏಜೆಂಟ್ಗಳು ಪರಿಚಯಿಸಿದ್ದರು. ತಾವು ದುಷ್ಟ ಶಕ್ತಿ ನಿವಾರಣೆಗೆ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಎಂಟು ಲಕ್ಷ ರು ಪಡೆದು ಆತ ಪೂಜೆ ಮಾಡಿದ್ದ ಎಂದು ದೂರಲಾಗಿದೆ.₹500 ಕೋಟಿ ಬಿಡಿಸಿಕೊಳ್ಳಲು
ಕೆಲ ದಿನಗಳ ಬಳಿಕ ಕುಮುದಾ ಅವರನ್ನು ಸಂಪರ್ಕಿಸಿದ ಪಾಷ, ತಮಗೆ ರಿಸರ್ವ್ ಬ್ಯಾಂಕ್ನಿಂದ ₹505 ಕೋಟಿ ಹಣ ಬರಬೇಕಿದೆ. ಆ ಹಣವನ್ನು ಬಿಡಿಸಿಕೊಳ್ಳಲು ತುರ್ತಾಗಿ 2.5 ಕೋಟಿ ರು ಶುಲ್ಕ ಪಾವತಿಸಬೇಕಿದೆ. ನೀವು ಮನೆ ಮಾರಾಟ ಮಾಡಿದ ಹಣ ನೀಡಿದರೆ 2.5 ಕೋಟಿ ರುಗೆ ಹೆಚ್ಚುವರಿಯಾಗಿ 10 ಕೋಟಿ ರು ಕೊಡುವುದಾಗಿ ಹೇಳಿದ್ದ. ಈ ಮಾತು ನಂಬಿದ ಕುಮುದಾ ಅವರು, ತಮ್ಮ ಮನೆಯನ್ನು 8.50 ಕೋಟಿ ರು. ಮಾರಾಟ ಮಾಡಿದರು. ಬಳಿಕ ಅದರಲ್ಲಿ 2.50 ಕೋಟಿ ರು ಅನ್ನು ನಕಲಿ ಬಾಬಾನಿಗೆ ಕೊಟ್ಟಿದ್ದಾರೆ. ಈ ಹಣ ಸಂದಾಯವಾದ ಬಳಿಕ ಆರೋಪಿಗಳ ವರಸೆ ಬದಲಾಗಿದೆ. ಹಣ ಕೇಳಿದರೆ ಏನಾದರೂ ಸಬೂಬು ಹೇಳಿ ವಂಚಕರು ಜಾರಿಗೊಳ್ಳುತ್ತಿದ್ದರು. ಪದೇ ಪದೇ ಹಣಕ್ಕೆ ಒತ್ತಾಯಿಸಿದಾಗ ಸಂತ್ರಸ್ತೆಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಅಂತಿಮವಾಗಿ ತಾವು ಮೋಸ ಹೋಗಿರುವುದು ಅರಿವಿಗೆ ಬಂದು ಸಿಸಿಬಿ ಪೊಲೀಸರಿಗೆ ಕುಮುದಾ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.