ಅಸಲಿ ಔಷಧದಿಂದ ನಷ್ಟವಾಗಿದ್ದಕ್ಕೆ ನಕಲಿ ದಂಧೆ!

KannadaprabhaNewsNetwork |  
Published : Aug 26, 2026, 02:00 AM IST
ನಕಲಿ ಔಷಧ | Kannada Prabha

ಸಾರಾಂಶ

ನಕಲಿ ಔಷಧ ಮಾರಾಟ ಜಾಲದ ಶೋಧನೆಗಿಳಿದಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ರಾಜ್ಯಾದ್ಯಂತ ಔಷಧಗಳ ಪೂರೈಕೆಗೆ ನಾಲ್ಕು ಕಂಪನಿಗಳನ್ನು ದಂಧೆಕೋರರು ಆರಂಭಿಸಿದ್ದರು ಎಂಬ ಮಹತ್ವದ ಸಂಗತಿಯನ್ನು ಪತ್ತೆ ಹಚ್ಚಿದೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಕಲಿ ಔಷಧ ಮಾರಾಟ ಜಾಲದ ಶೋಧನೆಗಿಳಿದಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ರಾಜ್ಯಾದ್ಯಂತ ಔಷಧಗಳ ಪೂರೈಕೆಗೆ ನಾಲ್ಕು ಕಂಪನಿಗಳನ್ನು ದಂಧೆಕೋರರು ಆರಂಭಿಸಿದ್ದರು ಎಂಬ ಮಹತ್ವದ ಸಂಗತಿಯನ್ನು ಪತ್ತೆ ಹಚ್ಚಿದೆ.

ನಕಲಿ ಔಷಧ ಮಾರಾಟ ಜಾಲದ ಪ್ರಮುಖ ಆರೋಪಿಗಳಾದ ಪ್ರಶಾಂತ್ ಹಾಗೂ ವೆಂಕಟೇಶ್ ಚೌಧರಿ ಹೆಸರಿನಲ್ಲಿದ್ದ ನಾಲ್ಕು ಕಂಪನಿಗಳ ಮಾಹಿತಿ ಎಸ್‌ಐಟಿಗೆ ಲಭಿಸಿದೆ. ಈ ಬೆನ್ನಲ್ಲೇ ಆ ನಾಲ್ಕು ಕಂಪನಿಗಳ ಔಷಧ ವಹಿವಾಟಿನ ಕುರಿತು ಸಮಗ್ರ ವಿವರ ಕಲೆ ಹಾಕುವಂತೆ ತಮ್ಮ ತಂಡದ ಔಷಧ ನಿಯಂತ್ರಕರಿಗೆ ಎಸ್‌ಐಟಿ ಅಧಿಕಾರಿಗಳು ‘ಟಾಸ್ಕ್‌’ ನೀಡಿದ್ದಾರೆ.

ಇನ್ನು ಕುತೂಹಲ ಸಂಗತಿ ಅಂದರೆ ಪ್ರತಿಷ್ಠಿತ ಕಂಪನಿಗಳ ಔಷಧ ಮಾರಾಟದಲ್ಲಿ ಆರ್ಥಿಕವಾಗಿ ಕೈ ಸುಟ್ಟುಕೊಂಡ ಬಳಿಕ ಈ ಜೋಡಿ ನಕಲಿ ಔಷಧ ದಂಧೆ ಶುರು ಮಾಡಿತು ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ ಮಾಹಿತಿ ನೀಡಿವೆ.

ತನ್ನ ಒಡೆತನದಲ್ಲಿದ್ದ ಎರಡು ಕಂಪನಿಗಳ ಕುರಿತು ಈ ಪ್ರಕರಣದಲ್ಲಿ ಬಂಧಿತನಾಗಿರುವ ವೆಂಕಟೇಶ್ ಚೌಧರಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆದರೆ ಪ್ರಶಾಂತ್‌ಗೆ ಸೇರಿದ ಮತ್ತೆರಡು ಕಂಪನಿಗಳ ವಿವರ ಸಿಕ್ಕಿಲ್ಲ. ಸದ್ಯ ಅಜರ್‌ಬೈಜಾನ್‌ ದೇಶದಲ್ಲಿ ಪ್ರಶಾಂತ್ ಇದ್ದಾನೆ ಎನ್ನಲಾಗಿದ್ದು, ಆತನ ಬಂಧನ ಬಳಿಕ ಆತನ ವ್ಯವಹಾರವು ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.

ಖರೀದಿದಾರ ವೆಂಕಟೇಶ್, ಹಂಚಿಕೆದಾರ ಪ್ರಶಾಂತ್:

ದಶಕಗಳಿಂದ ಔಷಧ ಮಾರಾಟ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಶಾಂತ್ ಹಾಗೂ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹೊಸೂರು ಗ್ರಾಮದ ವೆಂಕಟೇಶ್ ಚೌಧರಿ ಬೆವರು ಹರಿಸಿದ್ದಾರೆ. ಮೊದ ಮೊದಲು ಪ್ರತಿಷ್ಠಿತ ಕಂಪನಿಗಳ ಮಾರಾಟದ ಪ್ರತಿನಿಧಿಗಳಾಗಿ ಇಬ್ಬರು ಬೀದಿ ಬೀದಿ ಅಲೆದಿದ್ದರು. ಆನಂತರ ತಮ್ಮದೇ ಔಷಧ ಮಾರಾಟ ಏಜೆನ್ಸಿಗಳನ್ನು ಇಬ್ಬರೂ ಶುರು ಮಾಡಿದ್ದರು. ಮಾರಾಟದ ಪ್ರತಿನಿಧಿ (ರೆಪ್‌) ಬದಲಿಗೆ ಔಷಧ ಅಂಗಡಿಗಳಿಗೆ ತಮ್ಮ ಏಜೆನ್ಸಿ ಮೂಲಕ ಪ್ರತಿಷ್ಠಿತ ಕಂಪನಿಗಳ ಔಷಧಿಗಳನ್ನು ಸಗಟು ದರದಲ್ಲಿ ವೆಂಕಟೇಶ್ ಹಾಗೂ ಪ್ರಶಾಂತ್ ಪೂರೈಸುತ್ತಿದ್ದರು. ಆದರೆ ಔಷಧ ಪೂರೈಕೆ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಸಿಗದೆ ಇಬ್ಬರಿಗೆ ಆರ್ಥಿಕವಾಗಿ ನಷ್ಟವಾಯಿತು ಎಂದು ಮೂಲಗಳು ಹೇಳಿವೆ.

ಆಗಲೇ ಹಣ ಸಂಪಾದನೆಗೆ ಇಬ್ಬರೂ ಅಡ್ಡದಾರಿ ತುಳಿದಿದ್ದಾರೆ. ಔಷಧ ಮಾರಾಟ ಪ್ರತಿನಿಧಿಗಳಾಗಿದ್ದಾಗ ವೆಂಕಟೇಶ್ ಹಾಗೂ ಪ್ರಶಾಂತ್ ಪರಿಚಯಸ್ಥರಾಗಿದ್ದರು. ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಸ್ಪರ ಮಾತುಕತೆ ಹೆಚ್ಚಾಗಿ ಆತ್ಮೀಯ ಒಡನಾಟ ಬೆಳದಿದೆ. ಈ ಸ್ನೇಹದಲ್ಲಿ ತಾವೇ ಔಷಧಗಳ ಕಂಪನಿಗಳನ್ನು ತೆರೆದು ಉದ್ಯಮಿಗಳಾಗಲು ಯೋಜಿಸಿದ್ದಾರೆ. ಆಗಲೇ ತಮ್ಮ ಹೆಸರುಗಳಲ್ಲಿ ತಲಾ ಎರಡೆರಡು ಕಂಪನಿಗಳನ್ನು ನೋಂದಣಿ ಮಾಡಿಸಿ ಜಿಎಸ್‌ಟಿ ಸಂಖ್ಯೆ ಪಡೆದಿದ್ದಾರೆ. ಎರಡು ವರ್ಷಗಳಿಂದ ಒಂದೇ ತಂಡವಾಗಿ ನಾಲ್ಕು ಕಂಪನಿಗಳ ಹೆಸರಿನಲ್ಲಿ ಇಬ್ಬರು ವ್ಯವಹರಿಸುತ್ತಿದ್ದರು.

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ ಹಾಗೂ ಚಾಮರಾಜಪೇಟೆಯಲ್ಲಿ ಕಂಪನಿಗಳ ಕಚೇರಿಗಳಿವೆ ಎಂದು ತೋರಿಸಿ ವೆಂಕಟೇಶ್‌ ಜಿಎಸ್‌ಐಟಿ ಸಂಖ್ಯೆ ಪಡೆದಿದ್ದ. ಆದರೆ ಪ್ರಶಾಂತ್‌ನ ಕಂಪನಿಗಳ ಬಗ್ಗೆ ಕಡತಗಳ ಶೋಧನೆ ಮುಂದುವರೆದಿದೆ ಎಂದು ಮೂಲಗಳು ವಿವರಿಸಿವೆ.

ಇನ್ನು ತಮ್ಮ ಔಷಧ ಬ್ಯುಸಿನೆಸ್‌ನಲ್ಲಿ ಕೆಲಸಗಳನ್ನು ಹಂಚಿಕೊಂಡು ಈ ಜೋಡಿ ಸಂಘಟಿತವಾಗಿ ನಡೆಸಿದೆ. ಚೆನ್ನೈ, ಮುಂಬೈ ಹಾಗೂ ಚಂಡೀಗಢ ಸೇರಿದಂತೆ ದೇಶದ ಇತರೆ ರಾಜ್ಯಗಳ ಔಷಧ ಕಂಪನಿಗಳ ಜತೆ ವೆಂಕಟೇಶ್ ವ್ಯವಹರಿಸುತ್ತಿದ್ದ. ಅದೇ ರೀತಿ ವಿದೇಶದ ಕಂಪನಿಗಳೊಂದಿಗೆ ಪ್ರಶಾಂತ್‌ ‘ಡೀಲ್’ ಕುದುರಿಸುತ್ತಿದ್ದ. ಔಷಧ ಖರೀದಿ ನಿರ್ವಹಣೆಯ ಹೊಣೆಗಾರಿಕೆ ವೆಂಕಟೇಶ್ ಹೆಗಲಿಗೆ ಬಿದ್ದಿತ್ತು. ಆ ಕಂಪನಿಗಳಿಂದ ಖರೀದಿಸಿದ ಅಗ್ಗದ ಔಷಧಿಗಳಿಗೆ ತಮ್ಮ ಕಂಪನಿಯ ಹೆಸರಿನಲ್ಲಿ ದುಬಾರಿ ಬೆಲೆಯ ಲೇಬಲ್ ಹಾಗೂ ನಕಲಿ ಔಷಧಿಗಳಿಗೆ ಪ್ರತಿಷ್ಠಿತ ಕಂಪನಿಗಳ ಲೇಬಲ್ ಹಚ್ಚಿ ಅಂಗಡಿಗಳಿಗೆ ಸರಬರಾಜು ಮಾಡುವ ಹಂಚಿಕೆದಾರನಾಗಿ ಪ್ರಶಾಂತ್ ಕೆಲಸ ಮಾಡುತ್ತಿದ್ದ. ಇದಕ್ಕಾಗಿಯೇ ಬೆಂಗಳೂರು ದಕ್ಷಿಣ ತಾಲೂಕಿನ ತಾವೆರೆಕೆರೆ ಸಮೀಪ ಸಿ.ಕೆ.ತಾಂಡ್ಯ ಗ್ರಾಮದಲ್ಲಿ ತೋಟದ ಮನೆಯನ್ನು ಪ್ರಶಾಂತ್ ಬಾಡಿಗೆ ಪಡೆದಿದ್ದ ಎಂದು ಮೂಲಗಳು ವಿವರಿಸಿವೆ.

-ಬಾಕ್ಸ್‌-

ನನಗೇನು ಗೊತ್ತಿಲ್ಲ: ಪ್ರಶಾಂತ್ ಪತ್ನಿ

ನನ್ನ ಪತಿಯ ಬ್ಯುಸಿನೆಸ್ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ. ನನ್ನೊಂದಿಗೆ ಅವರು ಚರ್ಚಿಸುತ್ತಿರಲಿಲ್ಲ ಎಂದು ಪೊಲೀಸರಿಗೆ ಆರೋಪಿ ಪ್ರಶಾಂತ್ ಪತ್ನಿ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಆರೋಪಿ ಪ್ರಶಾಂತ್ ಕಂಪನಿಗಳ ಬಗ್ಗೆ ಮಾಹಿತಿ ನೀಡುವಂತೆ ಆತನ ಪತ್ನಿಗೆ ಪೊಲೀಸರು ಸೂಚಿಸಿದ್ದರು. ಆದರೆ ವಿಚಾರಣೆ ವೇಳೆ ತನಗೆ ಕಂಪನಿಗಳ ವಿಷಯ ಗೊತ್ತಿಲ್ಲ ಎಂದಿದ್ದಾರೆ.

ಓದಿಗೂ ಕೆಲಸಕ್ಕೆ ಸಂಬಂಧವೇ ಇಲ್ಲ:

ಇನ್ನು ಆರೋಪಿಗಳು ಪದವೀಧರರಾಗಿದ್ದು, ಅವರ ಶೈಕ್ಷಣಿಕ ಅರ್ಹತೆಗೂ ಅವರ ಬ್ಯುಸಿನೆಸ್‌ಗೂ ಕಿಂಚಿತ್ತೂ ಸಂಬಂಧವಿಲ್ಲ. ಬಿಎ ಓದಿ ಮೆಡಿಕಲ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು, ಕರಾವಳಿಯಲ್ಲಿ ಭರ್ಜರಿ ಮಳೆ
ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್​