ಕನ್ನಡಪ್ರಭ ವಾರ್ತೆ ಬೈಲಹೊಂಗಲಲೋಕಸಭಾ ಚುನಾವಣಾ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ದೇಶಾದ್ಯಂತ ಬಿಜೆಪಿ, ಎನ್ಡಿಎ ಪರ ಅಲೆ ಇದ್ದು, ಸಮಾರು 400ಕ್ಕೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸ ಇದೆ. ದೇಶದ ವಿವಿಧ ರಾಜ್ಯಗಳಲ್ಲಿ ಅನ್ಯಪಕ್ಷಗಳ ಜೊತೆ ಮೈತ್ರಿಯಾಗಿದ್ದು, ಅದೇ ರೀತಿ ರಾಜ್ಯದಲ್ಲಿಯು ಸಹ ಬಿಜೆಪಿ-ಜೆಡಿಎಸ್ ಜೊತೆ ಹೊಂದಾಣಿಕೆಯಾಗಿದೆ. ಇದೇನೂ ಹೊಸದೆನಲ್ಲ. ಈ ಹಿಂದೆ ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ 20-20 ಸರ್ಕಾರ ರಚನೆಯಾಗಿದೆ ಎಂದರು.
ಶೆಟ್ಟರ್ ಕುಟುಂಬ ಜನಸಂಘದಿಂದ ಬಂದಿದೆ. ಅನೇಕರು ಜಿಲ್ಲೆಗೆ ಶೆಟ್ಟರ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ನನ್ನ ಅಧಿಕಾರದ ಅವಧಿಯಲ್ಲಿ ಸುವರ್ಣ ಸೌಧ, ಕಿತ್ತೂರು ತಾಲೂಕು ರಚನೆ ಮಾಡಿದ್ದು, ಕಳಸಾ ಬಂಡೂರಿ ಹೋರಾಟ ಸಕ್ರಿಯ ಪಾಲ್ಗೊಂಡು ರೈತರ ಸಂಕಷ್ಟಕ್ಕೆ ಪರಿಹಾರ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ಬಿಜೆಪಿ ಅಧಿಕಾರವಧಿಯಲ್ಲಿ ಕಳಸಾ ಬಂಡೂರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾನು ಗೆದ್ದ ಬಂದ ನಂತರ ಮೊದಲ ಕೆಲಸ ಕಳಸಾ ಬಂಡೂರಿ ನಾಲಾ ಜೋಡಣೆಗಾಗಿ ವಿಶೇಷ ಆಸಕ್ತಿ ವಹಿಸಿ ಅನುಷ್ಠಾನ ಮಾಡುತ್ತೇನೆ. ಮೋದಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಾರೆ. ಜಮ್ಮು-ಕಾಶ್ಮಿರದಲ್ಲಿ 370 ರದ್ದು ಪಡಿಸಿದ್ದು, ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿದೆ. ಮುಂದಿನ ದೀನಮಾನಗಳಲ್ಲಿ ಪಿಒಕೆ ನಮ್ಮದ್ದಾಗಲಿದೆ. ಇಡೀ ದೇಶದಲ್ಲಿ ಬದಲಾವಣೆ ಶುರುವಾಗಿದೆ ಎಂದರು.ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಜನತೆ ಮೇ.7ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಈ ಚುನಾವಣೆ ಭಾರತ ದೇಶದ ಭವಿಷ್ಯತ್ತಿನ ಚುನಾವಣೆಯಾಗಿದ್ದು, ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿಸಲು ಕ್ಷೇತ್ರಾದ್ಯಂತ ಸಂಚರಿಸಿ ಅವರ ಜನಪರ ಯೋಜನೆಗಳನ್ನು ಮನೆ, ಮನೆಗೆ ಮುಟ್ಟಿಸಲಾಗುವುದು. ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿ ಅಸಾಧ್ಯ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡು ಜನತೆ ಭ್ರಮ ನಿರಸಗೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ಭಾಗದಿಂದ ಅಭ್ಯರ್ಥಿಗೆ ಹೆಚ್ಚಿನ ಮತ ಪಡೆಯಲು ಕಾರ್ಯಕರ್ತರು ಶ್ರಮವಹಿಸಬೇಕಾಗಿದೆ ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಎಂಎಲ್ಸಿ ಹಣುಮಂತ ನಿರಾಣಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಮಹಾಂತೇಶ ಕವಟಗಿಮಠ, ವಿಜಯ ಮೆಟಗುಡ್ಡ, ನಿಂಗಪ್ಪ ಚೌಡನ್ನವರ, ಗುರು ಮೆಟಗುಡ್ಡ, ಶಿವಾನಂದ ಕೋಲಕಾರ, ಜಗದೀಶ್ ಜಂಬಗಿ, ಸುನೀಲ್ ಮರಕುಂಬಿ, ಪ್ರಶಾಂತ ಜಕ್ಕಪ್ಪನವರ, ಸುನೀಲ ವರ್ಣೆಕರ, ಸಾಗರ ಭಾಂವಿಮನಿ, ಸುಭಾಸ ತುರಮರಿ ಸೇರಿದಂತೆ ಅನೇಕರು ಇದ್ದರು.ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ ಸ್ವಾಗತಿಸಿದರು. ಸಂತೋಷ ಹಡಪದ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ಲೋಕಸಭಾ ಅಭ್ಯರ್ಥಿ ಜಗದೀಶ ಶೆಟ್ಟರ ಅವರು ತಾಲೂಕಿನ ವಿವಿಧ ಗ್ರಾಮಗಳ ಮಠ-ಮಾನ್ಯಗಳಿಗೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು.