ಕನ್ನಡಪ್ರಭ ವಾರ್ತೆ ಹೊಸಕೋಟೆ

ಶಿಕ್ಷಣ ಎಂಬುದು ದೇಶದ ಅಭಿವೃದ್ಧಿಗೆ ಅಡಿಪಾಯ, ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಂಡು ಕ್ರಾಂತಿ ಮಾಡಬೇಕು ಎಂದು ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಪ್ರಾನ್ಸಿಸ್ ಮರಿಯಾ ಆನಂದ್ ತಿಳಿಸಿದರು.

ನಗರದ ಶಿಕ್ಷಕರ ಬಡಾವಣೆಯಲ್ಲಿರುವ ನ್ಯೂ ಹೊರೈಜನ್ ಶಾಲೆಯಲ್ಲಿ ನಡೆದ ಕಲಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣ ನೀಡುವ ಸಲುವಾಗಿ ಸರ್ಕಾರಿ ಶಾಲಾ ಕಾಲೇಜುಗಳ ಜೊತೆಗೆ ನೂರಾರು ಖಾಸಗಿ ಶಾಲಾ ಕಾಲೇಜುಗಳು ಪ್ರಾರಂಭಗೊಂಡಿವೆ. ಗುಣಮಟ್ಟದ ಶಿಕ್ಷಣ ನೀಡಬೇಕು. ಪ್ರತಿ ಮಗುವನ್ನು ಸಮಾಜದ ಉನ್ನತ ಶ್ರೇಣಿಗೆ ಕೊಂಡೊಯ್ಯಬೇಕು ಎನ್ನುವ ದೃಷ್ಟಿಯಿಂದ ಪ್ರತಿಯೊಬ್ಬ ಶಿಕ್ಷಕನೂ ಅವಿರತ ಶ್ರಮಿಸುತ್ತಾರೆ. ಇದರ ನಡುವೆ ಪೋಷಕರು ಕೂಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಿಗೆ ಇಚ್ಛೆ ಇರುವಂತಹ ವಿಷಯಗಳ ಬಗ್ಗೆ ಓದಲು, ಬರೆಯಲು ಅವಕಾಶ ಮಾಡಿಕೊಡಿ. ಪೋಷಕರ ಇಚ್ಛೆಯ ವಿಷಯ ಓದಲು ಒತ್ತಡ ಹಾಕಬೇಡಿ. ಆಗ ಮಕ್ಕಳು ದೇಶಕ್ಕೆ ದೊಡ್ಡ ಸಂಪನ್ಮೂಲ ಆಗುತ್ತಾರೆ ಎಂದರು.

ನ್ಯೂ ಹೊರೈಜನ್ ಶಾಲೆ ಟ್ರಸ್ಟಿ ದೀಪಕ್ ಮಂಗ್‌ನಾನಿ ಮಾತನಾಡಿ, ದಶಕಗಳಿಂದ ಹೊಸಕೋಟೆಯಲ್ಲಿ ನಮ್ಮ ಶಾಲೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಿದೆ. ಶಿಕ್ಷಣ, ಕ್ರೀಡೆ ಸಾಹಿತ್ಯ ಸೇರಿ ಸಾಂಸ್ಕೃತಿಕ ಕ್ಷೇತ್ರಕ್ಕೂ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ದೃಷ್ಟಿಯಿಂದ ಬೋಧಕ ಸಿಬ್ಬಂದಿ ಸರ್ವಸನ್ನದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.


ನ್ಯೂ ಹೊರೈಜನ್ ಶಾಲೆ ಪ್ರಾಂಶುಪಾಲರಾದ ಪಣಿಂದ್ರ, ಮುಖ್ಯ ಶಿಕ್ಷಕ ಸುಬ್ರಹ್ಮಣ್ಯಂ ಸೇರಿದಂತೆ ಶಾಲೆ ಭೋಧಕ ವರ್ಗ ಹಾಜರಿದ್ದರು.