ರಾಮನಗರ: ಬಿಡಿಸಿಸಿ ಬ್ಯಾಂಕ್ ಕುದೂರು ಶಾಖೆಯ ನಕಲಿ ಚಿನ್ನಾಭರಣ ಹಗರಣದ ತನಿಖೆಯಲ್ಲಿ ತಪ್ಪಿತಸ್ಥರಿಂದ ಹಣ ವಸೂಲಿ ಮಾಡಿ ಕಾನೂನು ಪ್ರಕಾರ ಕ್ರಮ ವಹಿಸಲಾಗಿದೆ. ಇಷ್ಟಾದರು ಕೇವಲ ಪ್ರಚಾರಕ್ಕಾಗಿ ಶಾಸಕ ಬಾಲಕೃಷ್ಣ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಶೋಕ್ (ತಮ್ಮಾಜಿ) ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಅವರಿಗೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಎಚ್ಚರಿಕೆ ನೀಡಿದರು.
ಬಿಡಿಸಿಸಿ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಚಿನ್ನಾಭರಣ ಮೌಲ್ಯಮಾಪನ ಮಾಡುವ ಅಪ್ರೈಸರ್ ಅನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲಿ, ಉಪಾಧ್ಯಕ್ಷರಾಗಲಿ ಅಥವಾ ನಿರ್ದೇಶಕರಾಗಲಿ ನೇಮಕ ಮಾಡುವ ಅಧಿಕಾರ ಇಲ್ಲ. ಅದರ ಸಂಪೂರ್ಣ ಜವಾಬ್ದಾರಿ ಆ ಶಾಖೆಯ ಸೂಪರ್ ವೈಸರ್ ಮತ್ತು ವ್ಯವಸ್ಥಾಪಕರಿಗೆ ನೀಡಲಾಗಿರುತ್ತದೆ.
ಅದೇ ರೀತಿ ಕುದೂರು ಶಾಖೆಯಲ್ಲಿ ಸ್ಥಳೀಯವಾಗಿದ್ದ ಅರ್ಹ ವ್ಯಕ್ತಿಯನ್ನೇ ಅಪ್ರೈಸರ್ ಆಗಿ ನೇಮಕ ಮಾಡಿಕೊಂಡಿದ್ದಾರೆ. ಆ ಅಪ್ರೈಸರ್ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತ, ಆತನ ಪತ್ನಿ ಅಧ್ಯಕ್ಷರಾಗಿದ್ದರು. ಹೀಗಾಗಿ ನಕಲಿ ಚಿನ್ನಾಭರಣ ಹಗರಣದಲ್ಲಿ ಬಾಲಕೃಷ್ಣ ಮತ್ತು ಅಶೋಕ್ ಅವರೂ ಭಾಗಿಯಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.ಕುದೂರು ಶಾಖೆಯಲ್ಲಿ ನಕಲಿ ಚಿನ್ನಾಭರಣ ಹಗರಣವನ್ನು ಅಶೋಕ್ (ತಮ್ಮಾಜಿ) ಅವರೇ ಬಯಲಿಗೆ ಎಳೆದರು. ಇದರಲ್ಲಿ ಅವರೇ ಭಾಗಿದಾರರಾಗಿದ್ದರೆ ಹಗರಣವನ್ನು ಏಕೆ ಬಯಲಿಗೆಳೆಯುತ್ತಿದ್ದರು.
ಈ ಹಗರಣವನ್ನು ಶಾಸಕ ಬಾಲಕೃಷ್ಣರವರ ಗಮನಕ್ಕೆ ತಂದಾಗ ಗ್ರಾಹಕರಿಗೆ ಮೋಸ ಮಾಡಿದ್ದರೆ ಅಪ್ರೈಸರ್ ನ ಪ್ರಾಪರ್ಟಿ ಅಟಾಚ್ ಮಾಡಿ ರಿಕವರಿ ಮಾಡಲು ಸೂಚನೆ ನೀಡಿದರು. ಅದರಂತೆ ಕೇವಲ 36 ದಿನದೊಳಗೆ ತನಿಖೆ ನಡೆಸಿ ನಬಾರ್ಡ್ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳ ಸಮ್ಮುಖದಲ್ಲಿಯೇ ಸಂಪೂರ್ಣ ಹಣವನ್ನು ರಿಕವರಿ ಮಾಡಿ ಕಾನೂನು ಪ್ರಕಾರ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಮೈಲೇಜ್ ಪಡೆಯಲು ಗಾಳಿಯಲ್ಲಿ ಗುಂಡು :
ನಕಲಿ ಚಿನ್ನ ಅಡವಿಟ್ಟು ಹಣ ಪಡೆಯುವ ದರಿದ್ರ ಬಾಲಕೃಷ್ಣ ಕುಟುಂಬದವರಿಗೆ ಬಂದಿಲ್ಲ. ಮಂಜುನಾಥ್ ರವರು ಬೇರೆ ಏನಾದರು ಕೆಲಸವಿದ್ದರೆ ಮಾಡಲಿ, ಅದನ್ನು ಮುಂದುವರೆಸುತ್ತೇವೆ ಎನ್ನುವುದಾದರೆ ಬಿಡದಿ - ಕೂಟಗಲ್ ಭಾಗದಲ್ಲಿ ತಕ್ಕ ಉತ್ತರ ಕೊಡಬೇಕಾಗುತ್ತದೆ. ಈಗಾಗಲೇ ಬಿಡದಿ ಸೊಸೈಟಿ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ಕೊಟ್ಟಿರುವುದನ್ನು ಮರೆಯಬಾರದು ಎಂದರು.
ಬಿಡದಿ ಸೊಸೈಟಿ ಅಧ್ಯಕ್ಷ ಜೀವನ್ ಬಾಬು, ಉಪಾಧ್ಯಕ್ಷ ಕೆ.ಪಿ.ಬಾಲಕೃಷ್ಣ, ನಿರ್ದೇಶಕರಾದ ವಿ.ಆರ್.ಮಹೇಶ್, ದೊಡ್ಡರೇವಯ್ಯ,ಎಚ್.ಎಸ್.ಮಧುಕುಮಾರ್, ಬಿ.ಎಸ್.ಸಂತೋಷ್ , ಅನ್ನಪೂರ್ಣೇಶ್ವರಿ, ಸಿ.ಟಿ.ಶೋಭಾ, ಕೆಂಗಲಯ್ಯ, ಆರ್.ರಮೇಶ್, ಮುಖಂಡರಾದ ಯೋಗಾನಂದ, ಸುಜ್ಞಾನ ಮೂರ್ತಿ , ಬಿಎಂಐಸಿಪಿ ನಿರ್ದೇಶಕ ಅಬ್ಬನಕುಪ್ಪೆ ಆನಂದ್ ಇದ್ದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.