ಕನ್ನಡಪ್ರಭ ವಾರ್ತೆ ಯಾದಗಿರಿ
ಬೆಂಗಳೂರಿನಿಂದ ಬುಧವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಅವರ ಪಾರ್ಥೀವ ಶರೀರವನ್ನು ಸ್ವಗ್ರಾಮ ಮುದ್ನಾಳಕ್ಕೆ ತಂದು, ಕೆಲ ಸಮಯದ ನಂತರ ಯಾದಗಿರಿ ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದ ಸಮೀಪದ ಮುದ್ನಾಳ್ ಲೇಔಟಿನಲ್ಲಿರುವ ಅವರ ನಿವಾಸದ ಆವರಣದಲ್ಲಿ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪೂರೈಸಿದ ನಂತರ, ಸಾರ್ವಜನಿಕರ ದರ್ಶನಕ್ಕೆ ಮಧ್ಯಾಹ್ನದವರೆಗೆ ಇಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಜನರು ಸಾಲುಸಾಲಾಗಿ ಬಂದು ತಮ್ಮ ನೆಚ್ಚಿನ ನಾಯಕನಿಗೆ ಅಶ್ರುತರ್ಪಣ ಅರ್ಪಿಸಿದರು.
ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಡಾ.ಅವಿನಾಶ ಜಾಧವ್, ಬಸವರಾಜ್ ಮತ್ತಿಮೂಡ, ಬಿ.ಜಿ.ಪಾಟೀಲ್, ಶಶಿಲ್ ಜಿ.ನಮೋಶಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಸಚಿವರಾದ ಡಾ.ಮಾಲಕರೆಡ್ಡಿ, ಗೋವಿಂದ ಕಾರಜೋಳ, ನರಸಿಂಹ ನಾಯಕ (ರಾಜೂಗೌಡ), ಗುರುಮಠಕಲ್ ಶಾಸಕ ಶರಣಗೌಡ ಸಹೋದರ ರಾಜೂಗೌಡ ಕಂದಕೂರ, ಅಮೀನರೆಡ್ಡಿ ಯಾಳಗಿ, ನಿತಿನ್ ಗುತ್ತೇದಾರ್, ರಾಜಕುಮಾರ್ ಪಾಟೀಲ ತೇಲ್ಕೂರ, ಚಂದು ಪಾಟೀಲ್, ಹಾಲಪ್ಪಾ ಆಚಾರ್, ಅಮರನಾಥ್ ಪಾಟೀಲ್, ಡಾ.ಶಿವರಾಜ್ ಪಾಟೀಲ್, ಬಸವರಾಜ್ ಬ್ಯಾಗವಾಟ್, ಹಂಪನಗೌಡ ಬಾದರ್ಲಿ, ಬಸರೆಡ್ಡಿ ಅನಪುರ ಮುಂತಾದವರು ಆಗಮಿಸಿ, ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.ಅಬ್ಬೆತುಮಕೂರು ಶ್ರೀಮಠದ ಡಾ। ಗಂಗಾಧರ ಮಹಾಸ್ವಾಮಿಗಳು, ದೇವಾಪುರ ಶಿವಮೂರ್ತಿ ಶಿವಾಚಾರ್ಯರು, ಗುರುಮಠಕಲ್ ಖಾಸಾಮಠದ ಶಾಂತವೀರ ಮಹಾಸ್ವಾಮೀಜಿ, ಕೋಡಾಲದ ಪಂಚಮಸಿದ್ಧಲಸ್ಗ ಸ್ವಾಮೀಜಿ, ಹೆಡಗಿಮುದ್ರಾದ ಶ್ರೀಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯಾರು, ಶಹಾಪುರ ಶ್ರೀಸೂಗೂರೇಶ್ವರರು, ಶ್ರೀಶೈಲಂನ ಗುರುಪಾದಸ್ವಾಮಿ, ದೋರನಹಳ್ಳಿಯ ಶಿವಲಿಂಗರಾಜೇಂದ್ರ ಶ್ರೀಗಳು, ದಾಸಬಾಳಮಠದ ಶ್ರೀ ವೀರೇಶ್ವರ ಸ್ವಾಮೀಜಿ ಸೇರಿದಂತೆ ಮತ್ತಿತ್ತನೇಕ ಮಠಾಧೀಶರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಧ್ಯಾಹ್ನ 2 ರ ಸುಮಾರಿಗೆ ಅವರ ನಿವಾಸದಿಂದ ಮುಖ್ಯರಸ್ತೆಗಳ ಮೂಲಕ ಹೊರಟ ಪಾರ್ಥೀವ ಶರೀರದ ಮೆರವಣಿಗೆ, ಗಂಜ್, ಮೈಲಾಪುರ ಅಗಸಿ, ಚಕ್ಕರಕಟ್ಟಾ, ಮಹಾತ್ಮಾ ಗಾಂಧೀಜಿ ವೃತ್ತ, ಮುದ್ನಾಳ್ ಗಡಂಗ್, ವೀರಶೈವ ಕಲ್ಯಾಣ ಮಂಟಪ, ಸದರ್ ದರ್ವಾಜಾ, ಹಿರೇ ಅಗಸಿ, ಬಾಬು ಜಗಜೀವನರಾಂ ನಗರ, ವಾಲ್ಮಿಕಿ ವೃತ್ತ, ಡಾ. ಅಂಬೇಡ್ಕರ್ ವೃತ್ತ, ತಹಸೀಲ್ ಕಚೇರಿ ಕ್ರಾಸ್, ಮೂಲಕ ಮತ್ತೇ ಅವರ ಜನಸಂಪರ್ಕ ಕಚೇರಿ ಮೂಲಕ, ನೇತಾಜಿ ಸುಭಾಶ್ಚಂದ್ರಭೋಸ್ ವೃತ್ತದ ಮಾರ್ಗವಾಗಿ ಅಂತ್ಯಕ್ರಿಯೆ ನಡೆಸಲು ಉದ್ದೇಶಿಸಿದ್ದ ಅವರ ತೋಟದ ಸ್ಥಳಕ್ಕೆ ತೆರಳಿತು. ಪಾರ್ಥೀವ ಶರೀರ ಹೊತ್ತ ಅಲಂಕೃತ ವಾಹನವು ಮುಖ್ಯರಸ್ತೆಯ ಪ್ರತಿ ಬಡಾವಣೆಗೆ ಬಂದಾಗ ಅವರ ಅಭಿಮಾನಿಗಳು, ಬೆಂಬಲಿಗರು ಪುಷ್ಟಗುಚ್ಚದ ಮೂಲಕ ಕಣ್ಣೀರ ವಿದಾರ ಹೇಳಿದರು. ನೇರ ನಡೆ ಹಾಗೂ ನಿಷ್ಠುರ ಮಾತುಗಳಿಂದ ಅಕ್ರಮಗಳು ಹಾಗೂ ಭ್ರಷ್ಟಾಚಾರಿಗಳ ಬೆವರಿಳಿಸುತ್ತಿದ್ದ ವೆಂಕಟರೆಡ್ಡಿ ಮುದ್ನಾಳ್ರಿಗೆ ‘ಯಾದಗಿರಿ ಹುಲಿ’ ಅನ್ನೋ ಅಭಿಮಾನಿಗಳ ಕರೆಯುತ್ತಿದ್ದರಿಂದ, ಯಾದಗಿರಿ ಹುಲಿ ಜೈ ಎನ್ನುವ ಘೋಷಣೆಗಳು ಪ್ರತಿಧ್ವನಿಸುತ್ತಿದ್ದವು. ಪತ್ನಿ, ಪುತ್ರ ಮಹೇಶರೆಡ್ಡಿ, ಪುತ್ರಿ ರಶ್ಮಿ, ಸಹೋದರ ಹನುಮಂತರೆಡ್ಡಿ, ರಾಚನಗೌಡ, ಶರಣಗೌಡ ಸೇರಿದಂತೆ ಬಂಧು ಮಿತ್ರರನೇಕರು ಶೋಕತಪ್ತರಾಗಿ ಕಣ್ಣೀರು ಸುರಿಸಿದರು.ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಡಬೇಕೆಂದು ಆದೇಶದ ಹಿನ್ನೆಲೆಯಲ್ಲಿ, ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ, ಜಿಲ್ಲಾಧಿಕಾರಿ ಡಾ. ಸುಶೀಲಾ, ಸಿಚೊಓ ಲವೀಶ ಒರಡಿಯಾ, ಎಸ್ಪಿ ಜಿ. ಸಂಗೀತಾ, ಹೆಚ್ಚುವರಿ ಎಸ್ಪಿ ಧರಣೀಶ್, ಡಿವೈಎಸ್ಪಿ ಕೋಳೂರು ಮುಂತಾದ ಅಧಿಕಾರಿವರ್ಗ ಪಾಲ್ಗೊಂಡಿದ್ದರು. ಪೊಲೀಸ್ ಪಡೆಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿ ಅಗಲಿದ ಜನನಾಯಕನಿಗೆ ಸಂತಾಪ ವ್ಯಕ್ತಪಡಿಸಿದರು.