ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮದ ನಿವಾಸಿಗಳಾದ ಮೀಸೆ ಪುಟ್ಟಸ್ವಾಮಿ (58) ಹಾಗೂ ಪತ್ನಿ ನಾಗಮ್ಮ (55) ಸಾಲದ ಹೊರೆ ಮತ್ತು ಕುಟುಂಬದ ಸಂಕಷ್ಟದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ನಟ ವಿನೋದ್ ರಾಜ್ ಅವರು ಮೃತರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅವರ ದುಃಖದಲ್ಲಿ ಭಾಗಿಯಾದರು.
ಈ ವೇಳೆ ನಟ ವಿನೋದ್ ರಾಜ್ ಅವರು, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು ಎಂದು ಧೈರ್ಯ ತುಂಬಿದರು. ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡ ನಟ ವಿನೋದ್ ರಾಜ್ ಅವರು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.ಕುಟುಂಬದವರನ್ನು ಕಳೆದುಕೊಳ್ಳುವ ನೋವು ಎಷ್ಟು ದೊಡ್ಡದು ಎಂಬುದು ನನಗೆ ಗೊತ್ತಿದೆ. ನನ್ನ ತಾಯಿಯನ್ನು ಕಳೆದುಕೊಂಡ ನಾನು ಆ ನೋವನ್ನು ಅನುಭವಿಸಿದ್ದೇನೆ. ಅಂತಹ ದುಃಖ ಮತ್ತೊಂದು ಕುಟುಂಬಕ್ಕೆ ಬರಬಾರದು ಎಂದು ಭಾವುಕರಾದರು.
ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ಭೇಟಿ ಮಾಡಿ, ಮೃತ ರೈತ ದಂಪತಿ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಮತ್ತು ಇತರೆ ಸೌಲಭ್ಯಗಳನ್ನು ಶೀಘ್ರಗತಿಯಲ್ಲಿ ಮಂಜೂರು ಮಾಡುವಂತೆ ಮನವಿ ಮಾಡಿದರು. ಅಗತ್ಯ ನೆರವು ತ್ವರಿತವಾಗಿ ಕುಟುಂಬಕ್ಕೆ ತಲುಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.