ರೈತ ಹೋರಾಟಗಾರ ಜೆ.ಎಂ. ವೀರಸಂಗಯ್ಯಗೆ ರಾಜ್ಯೋತ್ಸವ ಗರಿ

KannadaprabhaNewsNetwork |  
Published : Oct 31, 2024, 12:59 AM IST
ಜೆ.ಎಂ.ವೀರಸಂಗಯ್ಯ. | Kannada Prabha

ಸಾರಾಂಶ

೧೯೬೪ರಲ್ಲಿ ಜನಿಸಿದ ಇವರು, ತಮ್ಮ ಬದುಕನ್ನೇ ರೈತಪರ ಹೋರಾಟಕ್ಕೆ ಮುಡುಪಾಗಿಟ್ಟಿದ್ದಾರೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ರೈತಪರ ಹೋರಾಟಗಾರ ಜೆ.ಎಂ. ವೀರಸಂಗಯ್ಯ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತಾಲೂಕಿನ ಹೆಮ್ಮೆಯಾಗಿದೆ.

೧೯೬೪ರಲ್ಲಿ ಜನಿಸಿದ ಇವರು, ತಮ್ಮ ಬದುಕನ್ನೇ ರೈತಪರ ಹೋರಾಟಕ್ಕೆ ಮುಡುಪಾಗಿಟ್ಟಿದ್ದಾರೆ. ರೈತ ಸಂಘಟನೆಗಾಗಿ ಮನೆಮಠ ಬಿಟ್ಟು ರಾಜ್ಯಾದ್ಯಂತ ಸುತ್ತಾಡಿದ್ದಾರೆ. ಬಾಲ್ಯದಿಂದಲೇ ಹೋರಾಟದ ಹಾದಿ ತುಳಿದಿದ್ದ ವೀರಸಂಗಯ್ಯ, ರೈತರಿಗೆ ಸಮಾನ ವಿದ್ಯುತ್ ನೀಡಿ ಎಂದು ಆಗ್ರಹಿಸಿ ಕೊಪ್ಪಳ ಜಿಲ್ಲೆಯ ಹಿರೇಬಗನಾಳ್ ಗ್ರಾಮದಲ್ಲಿ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸ್ ಲಾಠಿ ಏಟಿಗೆ ಕಿಡ್ನಿ ವೈಫಲ್ಯಕ್ಕೆ ತುತ್ತಾದರು. ಬಳಿಕ ಸಹೋದರನ ಒಂದು ಕಿಡ್ನಿ ಪಡೆದರು. ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸಿ ಇಂದಿಗೂ ರೈತರ ಧ್ವನಿಯಾಗಿ ನಿಂತಿದ್ದಾರೆ. ಆರೋಗ್ಯದ ಏರುಪೇರುಗಳ ನಡುವೆ ಹೋರಾಟವೇ ನನ್ನ ಜೀವನ ಎನ್ನುವ ಇವರು ಇಂದಿಗೂ ರೈತ ಸಂಘಟನೆಗಳನ್ನು ಸದೃಢವಾಗಿ ಕಟ್ಟಿ ಬೆಳೆಸುವ ತಾಕತ್ತನ್ನು ಹೊಂದಿದವರು. ಇವರ ಸಂಘಟನೆ ಚಾತುರ್ಯ ಅಪಾರವಾದುದು.

೨೦೦೦ನೇ ಇಸ್ವಿಯಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ೧೦ ಸಾವಿರ ರೈತರನ್ನು ಸೇರಿಸಿ, ಸರ್ಕಾರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ ನೀಡಿರುವುದನ್ನು ವಿರೋಧಿಸಿ ಪ್ರತಿಭಟಿಸಿ ಪ್ರತಿಭಟನಾ ಸ್ಥಳದಲ್ಲಿಯೇ ವಿದ್ಯುತ್ ಬಿಲ್‌ಗಳನ್ನು ಸುಟ್ಟುಹಾಕಿ ಸರ್ಕಾರಕ್ಕೆ ಅಂದು ಎಚ್ಚರಿಕೆ ನೀಡಿದ್ದು ನಿಜಕ್ಕೂ ರೈತಪರ ಕಾಳಜಿಯಾಗಿದೆ. ಇವರ ಹೋರಾಟದ ಫಲವಾಗಿ ೨೦೦೪ನೇ ಇಸ್ವಿಯಲ್ಲಿ ಅಂದಿನ ಸರ್ಕಾರ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಮನ್ನಾ ಮಾಡಿ ಹೋರಾಟಗಾರರ ಹೋರಾಟಕ್ಕೆ ಮಣಿಯಿತು ಎಂದು ತಾಲೂಕಿನ ರೈತರು ಅತ್ಯಂತ ಹೆಮ್ಮೆಯಿಂದ ಹೇಳುತ್ತಾರೆ. ಗ್ಯಾಟ್ ಒಪ್ಪಂದ ಖಂಡಿಸಿ ಹೋರಾಟ ಮಾಡುವಾಗ ಇವರನ್ನು ಜೈಲಿಗೆ ತಳ್ಳಲಾಗಿತ್ತು. ರೈತರ ದುಸ್ಥಿತಿಗಳನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದ ವೀರಸಂಗಯ್ಯ, ರೈತರಿಗೆ ಅನ್ಯಾಯವಾಗಿದ್ದು ತಿಳಿದಾಗ, ಅತ್ಯಂತ ಕಠೋರವಾಗಿ ತಮ್ಮ ಬಿಚ್ಚು ಮಾತುಗಳಿಂದ ಅಧಿಕಾರಿಗಳನ್ನು ಎಚ್ಚರಿಸುತ್ತಿದ್ದಾರೆ. ಹೋರಾಟದ ಕೆಲ ಸನ್ನಿವೇಶಗಳಲ್ಲಿ ಮಾನಸಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ಜರ್ಜರಿತರಾದರೂ ವ್ಯವಸ್ಥೆಯೊಂದಿಗೆ ಹೊಂದಿಕೊಂಡವರಲ್ಲ. ರೈತನೇ ನನ್ನ ಉಸಿರು ಎನ್ನುತ್ತಿದ್ದ ವೀರಸಂಗಯ್ಯ ಅವರನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!