ಹಾನಗಲ್ಲ: ರಾಜ್ಯದ ಹಿತ ಕಾಯಬೇಕಾದ ಮಾಜಿ ವಿಧಾನಸಭೆ ಅಧ್ಯಕ್ಷರೂ ಆಗಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ಕರ್ನಾಟಕದ ರೈತರ ಅನುಕೂಲಕರ ನೀರಾವರಿ ಯೋಜನೆಗೆ ಅಡ್ಡಿ ಮಾಡಲು ಹೊರಟಿರುವುದು ವಿಷಾದದ ಸಂಗತಿ. ಈ ರಾಜ್ಯದ ಜನತೆ ತಲೆತಗ್ಗಿಸುವಂತಹದ್ದು. ಸಮುದ್ರಕ್ಕೆ ಹೋಗುವ ನೀರನ್ನೂ ರೈತರಿಗೆ ಬೇಡ ಎನ್ನುವ ಅವರ ಸಣ್ಣತನ ನಿಜಕ್ಕೂ ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ವರದಾ ಬೇಡ್ತಿ ಜೋಡಣೆ ನಮ್ಮ ಹಕ್ಕು ಎಂದು ಹಾವೇರಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹಾಗೂ ವರದಾ ಬೇಡ್ತಿ ಜೋಡಣೆ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಂ.ಕೋತಂಬರಿ ಜಂಟಿ ಹೇಳಿಕೆ ನೀಡಿ ತೀವ್ರ ಪ್ರತಿಕ್ರಿಯೆ ನೀಡಿದರು.
ಈ ಯೋಜನೆಯ ವಿಷಯದಲ್ಲಿ ಇನ್ನೂ ಹಲವು ಚರ್ಚೆಗಳಾಗಬೇಕಾಗಿದೆ. ಇದರಲ್ಲಿ ಸಾಕಷ್ಟು ಬದಲಾವಣೆಗಳೂ ಆಗಬೇಕಾಗಿದೆ. ಹಾವೇರಿ ಜಿಲ್ಲೆಯ ನೀರಾವರಿಗೆ ನೀರು ಕೊಟ್ಟು ಇದನ್ನು ಮುಂದೆ ಒಯ್ಯಬೇಕಾಗಿದೆ. ಇದು ಹತ್ತಾರು ವರ್ಷಗಳ ಹೋರಾಟ. ಈ ನೀರು ನಮ್ಮ ಹಕ್ಕು. ಈ ನೀರನ್ನು ಹೇಗೆ ತರಬೇಕು ಎಂಬುದು ನಮಗೆ ಗೊತ್ತಿದೆ. ಆ ಎದೆಗಾರಿಕೆಯೂ ನಮಗಿದೆ. ಇದರ ವಿರುದ್ಧ ಯಾರೇ ನಿಂತರೂ ನಾವು ಸುಮ್ಮನೇ ಕೂಡ್ರಲ್ಲ. ಸಾಕಷ್ಟು ಹೋರಾಟಗಳಿಂದ ಈ ಯೋಜನೆ ಒಂದು ಹಂತಕ್ಕೆ ಬಂದಿದೆ. ರಾಜ್ಯ ಸರ್ಕಾರ 1 ಸಾವಿರ ಕೋಟಿ ರು. ಹಾಗೂ ಕೇಂದ್ರ ಸರ್ಕಾರ 9 ಸಾವಿರ ಕೋಟಿ ರು. ಈಗ ಬಿಡುಗಡೆಗೆ ಸಿದ್ಧವಾಗಿದೆ. ಈ ಯೋಜನೆ ವೇಗವಾಗಿ ಜಾರಿಯಾಗಲು ಎಲ್ಲರ ಸಹಕಾರವಿರಲಿ. ರೈತರು ಬೀದಿಗಿಳಿಯುವ ಪರಿಸ್ಥಿತಿ ತಂದುಕೊಳ್ಳುವುದು ಬೇಡ. ಕಾಗೇರಿ ಅವರು ಯಾರಿಗೆ ದ್ರೋಹವಾಗುವ ಹೇಳಿಕೆ ನೀಡುತ್ತಿದ್ದಾರೆ ಎಂಬ ಎಚ್ಚರಿಕೆ ಇರಲಿ. ಅಭಿವೃದ್ಧಿ ಬೇಕಾಗಿಲ್ಲ ಎಂದು ಹೇಳುವ ಅವರ ಉದ್ದೇಶವೇ ತಿಳಿಯುತ್ತಿಲ್ಲ. ಇವು ಒಬ್ಬ ನಾಯಕನಿಗೆ ಸಲ್ಲುವ ವಿಚಾರಗಳಲ್ಲ ಎಂದು ಎಚ್ಚರಿಸಿದರು.ಯಾರೇ ಎಷ್ಟೇ ವಿರೋಧಿಸಿದರೂ ಅದಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ. ರೈತ ಸಮುದಾಯದ ಹಿತ ಕಾಯಲು ಬೇಕಾಗುವ ಎಲ್ಲ ಹೋರಾಟದ ಇಚ್ಛಾಶಕ್ತಿ ನಮ್ಮಲ್ಲಿದೆ. ಹಾವೇರಿ ಹಾಗೂ ಉಳಿದ ನಾಲ್ಕಾರು ಜಿಲ್ಲೆಯ ಶಾಸಕರು ಸಂಸದರೂ ಸೇರಿ ಇಡೀ ರಾಜ್ಯದಲ್ಲಿಯೇ ದೊಡ್ಡ ಹೋರಾಟಕ್ಕೆ ಇದು ನಾಂದಿಯಾದೀತು. ಉತ್ತರ ಕರ್ನಾಟಕದ ಇನ್ನೊಂದು ಪ್ರಬಲ ಹೋರಾಟವನ್ನೇ ಎದುರಿಸಬೇಕಾದೀತು. ಈ ಯೋಜನೆಯನ್ನು ವಿರೋಧಿಸುವವರಿಗೆ ನಮ್ಮ ಖಡಾಖಂಡಿತವಾದ ಎಚ್ಚರಿಕೆ ಇದೆ. ಹಾವೇರಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಒಟ್ಟಾಗಿ ರೈತರ ಹಿತಕ್ಕೆ ಗಟ್ಟಿಯಾಗಿ ನಿಲ್ಲಬೇಕು. ಕಾಗೇರಿ ಅವರು ಇದಕ್ಕೆ ರಾಜಕೀಯ ಬಣ್ಣ ನೀಡಿ ಹೇಳಿಕೆ ನೀಡುತ್ತಿರುವುದನ್ನು ಪ್ರಬಲವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರೊ.ಸಿ. ಮಂಜುನಾಥ, ನಿಜಲಿಂಗಪ್ಪ ಮುದೆಪ್ಪನವರ , ಸೋಮಣ್ಣ ಜಡೆಗೊಂಡರ, ಅಜ್ಜನಗೌಡ ಕರೆಗೌಡ್ರ, ಮೂಕಯ್ಯ ಗುರುಲಿಂಗಣ್ಣನವರ, ಮುಜಾಫರ್ ಹಾವೇರಿ, ಜಾನ ಪುನೀತ್ ಇದ್ದರು.