ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕೆಂಪು ಮೆಣಸಿನಕಾಯಿ ಬೆಳೆಯಲು ರೈತರ ಹಿಂದೇಟು!

KannadaprabhaNewsNetwork | Updated : Jun 10 2025, 01:27 PM IST

ವಾಣಿಜ್ಯ‌ ಬೆಳೆಯಾಗಿದ್ದ ಮೆಣಸಿನಕಾಯಿ ಬೆಳೆ ರೈತನಿಗೆ ಆರ್ಥಿಕ ಸಂಕಷ್ಟ ನೀಡಿದೆ. ಹೀಗಾಗಿ ಅನ್ನದಾತರು ಮುಂಗಾರು ಬೆಳೆಯಾದ ಹೆಸರು, ಸೋಯಾಬಿನ್, ಗೋವಿನ‌ಜೋಳ, ಶೇಂಗಾ ಮಾತ್ರ‌ ನಂಬಿಕೊಂಡಿದ್ದು, ಹಿಂಗಾರು ಬೆಳೆಗಾಗಿ ಕಡಲೆ, ಗೋದಿ, ಜೋಳ, ಕುಸುಬೆ‌ ನಂಬಿಕೊಂಡಿದ್ದಾರೆ.

ವೀರೇಶ ಪ್ರಳಯಕಲ್ಮಠ

ಕುಂದಗೋಳ: ಬ್ಯಾಡಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ತಾಲೂಕಿನ‌ ಪ್ರಸಿದ್ಧ ರೆಡ್ ಚಿಲ್ಲಿ (ಕೆಂಪು‌ ಮೆಣಸಿನಕಾಯಿ) ಬೆಳೆಯಲು ಹಿಂದೇಟು ಹಾಕುತ್ತಿರುವ ಅನ್ನದಾತರು, ಗೋವಿನ ಜೋಳ, ಹೆಸರು, ಸೋಯಾಬಿನ್‌ ಬೆಳೆಗಳತ್ತ ಚಿತ್ತ ನೆಟ್ಟಿದ್ದಾರೆ.

ಹೌದು..! ಕುಂದಗೋಳ ತಾಲೂಕಿನ‌ ದೇವನೂರ ಕಡ್ಡಿ‌ ಮೆಣಸಿನಕಾಯಿಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇತ್ತು. ಕೂಬಿಹಾಳ, ಇಂಗಳಗಿ, ಕಮಡೊಳ್ಳಿ, ಹಂಚಿನಾಳ, ಯಲಿವಾಳ, ತರ್ಲಘಟ್ಟ ಸಹಿತ ತಾಲೂಕಿನ 52,550 ಹೆಕ್ಟೇರ್ ಪ್ರದೇಶದ ಪೈಕಿ, ಸರಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು. 80ರ ದಶಕದಲ್ಲಿ ಕೆಂಪು ಮೆಣಸಿನಕಾಯಿ ವಿದೇಶದಲ್ಲಿ‌ ಬಹು ಪ್ರಸಿದ್ಧ ಹೆಸರು‌ ಮಾಡಿತ್ತು. ಬೆಲೆಯ ಸಾಕಷ್ಟು ಏರಿಳಿತ, ಹವಾಮಾನ ವೈಪರಿತ್ಯ, ಬೆಳೆಗೆ ಅಕಾಲಿಕವಾಗಿ ತಗಲುವ ರೋಗ ಇದಕ್ಕಿಂತಲೂ ಹೆಚ್ಚಾಗಿ ದಿಢೀರ್ ಪಾತಾಳಕ್ಕೆ ಕುಸಿದ ಬೆಲೆಯಿಂದಾಗಿ ಸದ್ಯ ರೈತರು ಇದನ್ನು ಅತ್ಯಂತ ಕನಿಷ್ಠ ಮಟ್ಟದ ಪ್ರದೇಶಕ್ಕೆ‌ ಸೀಮಿತಗೊಳಿಸಿದ್ದಾರೆ.

ಈ ಬಾರಿ ತಾಲೂಕಿನ 52 ಸಾವಿರ ಹೆಕ್ಟೇರ್ ಒಟ್ಟು ಪ್ರದೇಶದಲ್ಲಿ ಸದ್ಯದ‌ ಮುಂಗಾರು‌ ಮಳೆ ಆರಂಭದ ನಂತರದ ಒಂದು ವಾರದಲ್ಲಿ 6,750 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ ಹೆಸರು, ಸೋಯಾಬಿನ್, ಗೋವಿನ ಜೋಳ ಮಾತ್ರ ಬಿತ್ತಲಾಗಿದೆ.‌ ಬಹುಶಃ ಅರ್ಧಕ್ಕಿಂತಲೂ ಅಧಿಕ ರೈತರು ಶೇಂಗಾ ಬೆಳೆ ಕಡಿಮೆ‌‌ ಮಾಡಿದ್ದಾರೆ. ಮೆಣಸಿನ‌ ಮಡಿಯಂತೂ ಶೇ. 2ರಷ್ಟು ರೈತರಿಗೆ ಸೀಮಿತವಾದಂತಿದೆ. ಈ‌ ಬಾರಿ‌ ಮೆಣಸಿನಕಾಯಿ ಬೆಳೆಗೆ ಬಹುತೇಕರು ಮನಸ್ಸು‌ ಮಾಡಿಲ್ಲ ಎಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ಜಂಟಿ‌ ನಿರ್ದೇಶಕಿ ಭಾರತಿ‌ ಮೆಣಸಿನಕಾಯಿ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.

ವಾಣಿಜ್ಯ‌ ಬೆಳೆಯಾಗಿದ್ದ ಮೆಣಸಿನಕಾಯಿ ಬೆಳೆ ರೈತನಿಗೆ ಆರ್ಥಿಕ ಸಂಕಷ್ಟ ನೀಡಿದೆ. ಹೀಗಾಗಿ ಅನ್ನದಾತರು ಮುಂಗಾರು ಬೆಳೆಯಾದ ಹೆಸರು, ಸೋಯಾಬಿನ್, ಗೋವಿನ‌ಜೋಳ, ಶೇಂಗಾ ಮಾತ್ರ‌ ನಂಬಿಕೊಂಡಿದ್ದು, ಹಿಂಗಾರು ಬೆಳೆಗಾಗಿ ಕಡಲೆ, ಗೋದಿ, ಜೋಳ, ಕುಸುಬೆ‌ ನಂಬಿಕೊಂಡಿದ್ದಾರೆ.

ಒಣ ಬೇಸಾಯದ ತಾಲೂಕಿನ ಈ ಎರೇಭೂಮಿ (ಕಪ್ಪು ಮಣ್ಣು) ಮಳೆಯನ್ನೇ‌ ನೆಚ್ಚಿಕೊಂಡಿದೆ. ಸರಿಯಾದ ವೇಳೆಗೆ ಮಳೆ‌ಬಾರದೇ ಇರುವುದರಿಂದ‌ ಮತ್ತು ಬೆಳೆದ ಬೆಳೆಗೆ ಸೂಕ್ತ ಬೆಲೆ ಬಾರದೆ ಇರುವುದರಿಂದ ಗೊಬ್ಬರ, ಕ್ರಿಮಿನಾಶಕ‌ಕ್ಕೆ ಸಾಕಷ್ಟು ಖರ್ಚು‌ಮಾಡಿ ಕೈ, ಸುಟ್ಟುಕೊಂಡಿರುವ ಅನ್ನದಾತ ಆರ್ಥಿಕವಾಗಿ ಬಹಳಷ್ಟು ಸೊರಗಿದ್ದಂತೂ ಸುಳ್ಳಲ್ಲ. ಈ ವೇಳೆಯಲ್ಲೂ ವರುಣನನ್ನೇ ನಂಬಿ‌, ಕುಳಿತಿರುವ ರೈತನಿಗೆ‌ ಸದ್ಯ ಮುಂಗಾರು ಬಹಳಷ್ಟು ಆಶಾ‌ಭಾವನೆ ಮೂಡಿಸಿದೆ. ಸದ್ಯ ಎಲ್ಲಿ‌ ನೋಡಿದರಲ್ಲಿ‌ ಕೃಷಿ ಚಟುವಟಿಕೆ ಜೋರಾಗಿ‌ ನಡೆದಿವೆ. ಭರಪೂರ ಬೆಳೆಗೆ ಸುಸ್ಥಿರ ಬೆಲೆಯ ಆಶಾಭಾವನೆಯಲ್ಲಿರುವ ರೈತನ‌ ಕನಸು ಈ ಬಾರಿ‌ಯಾದರೂ ನೆರವೇರುತ್ತಾ ಕಾದು ನೋಡಬೇಕಿದೆ.

ಕುಂದಗೋಳ ತಾಲೂಕಿನ‌ ಬಹುತೇಕ ರೈತರು ಮೆಣಸಿನಕಾಯಿ ಬೆಳೆಯ‌ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಹೆಸರು, ಸೋಯಾಬಿನ್, ಗೋವಿನ ಜೋಳ, ಅಲ್ಪ‌ಮಟ್ಟದಲ್ಲಿ ಶೇಂಗಾ ಬೀಜಗಳಿಗೆ ಬೇಡಿಕೆ ಇದೆ. ಇಲಾಖೆ ಸಾಕಷ್ಟು ಬಿತ್ತನೆ ಬೀಜ ಸಂಗ್ರಹಿಸಿಟ್ಟಿದೆ. ಮೆಣಸಿನಕಾಯಿ ಬೆಳೆ ಬೆಳೆಯಲು ರೈತರು ಹಿಂಜರಿಯುತ್ತಿದ್ದಾರೆ. ಕುಂದಗೋಳ ಕೃಷಿ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕಿ ಭಾರತಿ‌ ಮೆಣಸಿನಕಾಯಿ ಹೇಳಿದರು.

Read more Articles on