ತಂಬಾಕು ಬೆಳೆಗಾರರಿಗೆ ಗೊಬ್ಬರಕ್ಕೆ ನೀಡಿದ ಸಾಲ ಮನ್ನಾ ಮಾಡಲು ಆಗ್ರಹ

KannadaprabhaNewsNetwork |  
Published : Jun 28, 2025, 12:18 AM IST
64 | Kannada Prabha

ಸಾರಾಂಶ

ಸ್ತುತ ಸಾಲಿನಲ್ಲಿ ರಾಜ್ಯದ್ಯಂತ 70 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂಮಿಯಲ್ಲಿ ರೈತರು ತಂಬಾಕು ಕೃಷಿ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸೂರು

ಈ ಬಾರಿ ನಾಟಿ ಮಾಡಿದ ತಂಬಾಕು ಸಸಿಗಳು ಬೆಳವಣಿಗೆ ಕಾಣದೇ ಹಲವು ರೋಗಬಾಧೆಗಳಿಂದ ನಾಶವಾಗುತ್ತಿದ್ದು, ತಂಬಾಕು ಮಂಡಳಿ ಪ್ರತಿ ರೈತರಿಗೆ ರಾಸಾಯನಿಕ ಗೊಬ್ಬರಕ್ಕಾಗಿ ನೀಡಿದ್ದ 45 ಸಾವಿರ ರೂ.ಗಳನ್ನು ಸಾಲ ಮನ್ನಾ ಮಾಡಬೇಕೆಂದು ರೈತಸಂಘ ಮತ್ತು ಹಸಿರುಸೇನೆ ತಾಲೂಕು ಅಧ್ಯಕ್ಷ ಮೋದೂರು ಮಹೇಶ್ ಆಗ್ರಹಿಸಿದರು.

ಪ್ರಸ್ತುತ ಸಾಲಿನಲ್ಲಿ ರಾಜ್ಯದ್ಯಂತ 70 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂಮಿಯಲ್ಲಿ ರೈತರು ತಂಬಾಕು ಕೃಷಿ ಕೈಗೊಂಡಿದ್ದಾರೆ. ಆದರೆ ನಾಟಿ ಮಾಡಿ ತಿಂಗಳುಗಳೇ ಸಂದರೂ ತಂಬಾಕು ಸಸಿಗಳಲ್ಲಿ ನಿರೀಕ್ಷಿತ ಬೆಳವಣೀಗೆ ಕಾಣುತ್ತಿಲ್ಲ. ಅಲ್ಲದೇ ಕರಿಕಡ್ಡಿರೋಗ ಬಾದೆ ಎಲ್ಲಡೆ ಹರಡುತ್ತಿದ್ದು, ಸಸಿಗಳು ನಾಶವಾಗುತ್ತಿವೆ. ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ ಮತ್ತು ಐಟಿಸಿ ಕಂಪನಿ ವಿತರಿಸಿರುವ ಕಾಂಚನಾ, ಎಫ್‌.ಸಿ.ಎಚ್ 222, ಎಫ್.ಸಿ.ಎಚ್ 248, ಐಟಿಸಿ ಕಂಪನಿ ವಿತರಿಸಿರುವ 1353, ಸಿಎ 3 ಮುಂತಾದ ತಳಿಗಳೇ ಕಾರಣವೇ ಅಥವಾ ಹವಾಮಾನ ವೈಪರೀತ್ಯವೇ ಎನ್ನುವುದು ರೈತರಿಗೆ ತಿಳಿದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಐಟಿಸಿ ಕಂಪನಿಯವರು ಕಳೆದ ಸಾಲಿನಲ್ಲಿ 1350 ತಳಿ ವಿತರಿಸಿದ್ದರು. ಈ ಬಾರಿ 1353 ತಳಿ ನೀಡಿದ್ದಾರೆ. ವರ್ಷಕ್ಕೊಂದು ತಳಿ ಅಭಿವೃದ್ಧಿಪಡಿಸಲಾಗುತ್ತಿದೆಯೇ ಎನ್ನುವ ಅನುಮಾನ ರೈತರಲ್ಲಿ ಮೂಡಿದೆ. ಇದರಿಂದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಶೇ, 75ಕ್ಕೂ ಅಧಿಕ ಪ್ರಮಾಣದ ಬೆಳೆ ನಾಶವಾಗುತ್ತಿದೆ. ತಂಬಾಕು ಮಂಡಳಿ ರಾಸಾಯನಿಕ ಗೊಬ್ಬರಕ್ಕಾಗಿ ನೀಡಿದ್ದ 45 ರೂ. ಸಾಲ ಸೌಲಭ್ಯ ಅತಿಯಾದ ಮಳೆಯಿಂದಾಗಿ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಗೊಬ್ಬರ ಕೊಚ್ಚಿಕೊಂಡು ಹೋಗಿದೆ. ಇದೀಗ ಮತ್ತೆ ನಾಟಿ ಮಾಡಲು ರೈತರಲ್ಲಿ ಹಣವಿಲ್ಲ. ಹಾಗಾಗಿ ಈಗಾಗಲೇ ರಾಸಾಯನಿಕ ಗೊಬ್ಬರಕ್ಕಾಗಿ ನೀಡಿದ್ದ ಹಣವನ್ನು ಮಂಡಳಿಯೇ ಭರಿಸಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರಗಳು ಕ್ರಮವಹಿಸಲಿ

ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ನೀಡಿದ್ದ ಭರವಸೆ ಹುಸಿಯಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಮಾಡಲಿ. ರೈತರಿಗೆ ಬ್ಯಾಂಕುಗಳು ಎಕರೆಗೆ ನೀಡುತ್ತಿದ್ದ ಶೇ. 7ರ ಬಡ್ಡಿ ದರದ ಬೆಳೆಸಾಲದ ಮಿತಿಯನ್ನು 3 ಲಕ್ಷ ದಿಂದ 5 ಲಕ್ಷಕ್ಕೆ ಏರಿಸಬೇಕು. ತಂಬಾಕು ಬೆಳೆಯನ್ನು ಫಸಲ್ ಬಿಮಾ ಯೋಜನೆಯಡಿ ತರಬೇಕೆಂದು ಆಗ್ರಹಿಸಿದರು.

ಅಲ್ಲದೇ ರಾಜ್ಯ ಸರ್ಕಾರವಂತೂ ದಿನಕ್ಕೊಂದು ಹಗರಣಗಳಲ್ಲೇ ಕಾಲ ಕಳೆಯುತ್ತಿದ್ದು, ರೈತರ ಕಡೆ ಗಮನಿಸುವಷ್ಟು ವ್ಯವಧಾನವೂ ಅವರಿಗಿಲ್ಲದಂತಾಗಿದೆ. ರೈತರ ಪಂಪ್‌ ಸೆಟ್‌ ಗಳಿಗೆ ಟಿಸಿ ಅಳವಡಿಕೆಗೆ ಲಕ್ಷ ರೂ. ಗಳಲ್ಲಿ ಹಣ ಹೂಡುವಷ್ಟು ರೈತರು ಶ್ರೀಮಂತರಾಗಿಲ್ಲ. ರಾಜ್ಯ ಸರ್ಕಾರ ಈ ನೀತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕೃಷಿ ವಿದ್ಯುತ್ ಪಂಪ್‌ ಸೆಟ್ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಬನ್ನಿಕುಪ್ಪೆ ಕೃಷಿ ಉತ್ಪನ್ನ ಕಂಪನಿ (ಎಫ್‌.ಪಿ.ಒ) ಲಿಂಗರಾಜು, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹೆಗ್ಗಂದೂರು ನಿಂಗರಾಜು, ಗೌರವಾಧ್ಯಕ್ಷ ಅಬ್ದುಲ್ ಶುಕೂರ್, ಕೆಂಚೇಗೌಡ, ವೈರಮುಡಿ ಇದ್ದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು