ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೇಂದ್ರ ಸರ್ಕಾರ ವಿವಿಧ ಉತ್ಪನ್ನಗಳ ಮೇಲೆ ಜಿಎಸ್ಟಿ ಇಳಿಕೆ ಮಾಡಿದರ ನಾಡಿನ ರೈತಾಪಿ ವರ್ಗಕ್ಕೆ ಯಾವುದೇ ಪ್ರಯೋಜನವಿಲ್ಲ. ಇದರ ಬದಲು ರೈತರ ಉತ್ಪನಗಳಿಗೆ ಶಾಶ್ವತ ಬೆಲೆ ನೀತಿ ರೂಪಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.ಪಟ್ಟಣದ ರೈತಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತರ ಕೃಷಿ ಉತ್ಪನ್ನಗಳಿಗೆ ಶಾಶ್ವತ ಬೆಲೆ ನೀತಿ ರೂಪಿಸುವಂತೆ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ನೂತನ ಜಿಎಸ್ಟಿ ನೀತಿಯಿಂದ ಕಾರು, ಎಲೆಕ್ರ್ಟಾನಿಕ್ ವಸ್ತುಗಳನ್ನು ಕೊಳ್ಳುವವರಿಗೆ ಅನುಕೂಲವಾಗಿದೆ. ಇದರಿಂದ ರೈತ ಸಮುದಾಯಕ್ಕೆ ಯಾವುದೇ ಪ್ರಯೋಜನವಿಲ್ಲ. ಅದೇ ನಂದಿನಿ ಉತ್ಪನ್ನಗಳ ಮೇಲೆ ಜಿಎಸ್ಟಿ ಇಳಿಕೆಯಿಂದ ಹಾಲು ಉತ್ಪನ್ನಗಳನ್ನು ಬಳಕೆ ಮಾಡುವ ಗ್ರಾಹಕರಿಗೆ ಅನುಕೂಲವಾಗುತ್ತದೆಯೇ ಹೊರತು ಹಾಲು ಉತ್ಪಾದಕ ರೈತರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿಜವಾಗಿಯೂ ರೈತರ ಬಗ್ಗೆ ನೈಜ ಕಾಳಜಿಯಿದ್ದರೆ ಬೆಂಬಲ ಬೆಲೆ ನೀತಿ ಕೈಬಿಟ್ಟು ರೈತರ ಪ್ರತಿಯೊಂದು ಕೃಷಿ ಉತ್ಪನ್ನಗಳಿಗೂ ವೈಜ್ಞಾನಿಕ ಬೆಲೆ ನೀತಿ ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಆಯ್ದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿದರೆ ಅದರ ಲಾಭ ಮಧ್ಯವರ್ತಿಗಳು ಮತ್ತು ಖರೀದಿ ಕೇಂದ್ರಗಳಲ್ಲಿನ ಸಿಬ್ಬಂದಿಗೆ ದೊರಕುತ್ತಿದೆಯೇ ಹೊರತು ರೈತರಿಗೆ ಅನುಕೂಲವಾಗುತ್ತಿಲ್ಲ. ಒಂದು ನಿಗದಿತ ಅವಧಿಯಲ್ಲಿ ಮಾತ್ರ ಬೆಂಬಲ ಬೆಲೆ ಮೂಲಕ ರೈತರ ಉತ್ಪನ್ನಗಳನ್ನು ಕೊಳ್ಳುವ ಸರ್ಕಾರದ ನೀತಿಗಳು ಮಧ್ಯವರ್ತಿಗಳಿಗೆ ಪೂರಕವಾಗಿದೆಯೇ ಹೊರತು ರೈತ ಸಮುದಾಯಕ್ಕೆ ಪೂರಕವಾಗಿಲ್ಲ. ಆದಕಾರಣ ಬೆಂಬಲ ಬೆಲೆ ನೀತಿಯನ್ನು ಕೈಬಿಟ್ಟು ಕೃಷಿ ಉತ್ಪನ್ನಗಳಿಗೆ ಶಾಶ್ವತ ಬೆಲೆ ನೀತಿ ರೂಪಿಸಬೇಕೆಂದು ಪುಟ್ಟೇಗೌಡ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಇದ್ದರು.