ರೈತ ಬಜಾರ್‌ ಗಳಿಂದ ಸ್ವಾವಲಂಬಿಗಳಾಗಲು ಸಾಧ್ಯ: ಸೋನಾಲ್‍ಗೌಡ

KannadaprabhaNewsNetwork | Published : Jun 18, 2025 12:27 AM

ಕಡೂರು, ರಾಜ್ಯದಾದ್ಯಂತ ಸಹಕಾರ ಸಂಘಗಳ ಮೂಲಕ ರೈತ ಬಜಾರ್ ಗಳನ್ನು ತೆರೆದರೆ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್.ಡಿ. ಸೋನಾಲ್‍ ಧರ್ಮೇಗೌಡ ಹೇಳಿದರು.

ರೈತ ಬಜಾರ್ ನಿಂದ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದಾದ್ಯಂತ ಸಹಕಾರ ಸಂಘಗಳ ಮೂಲಕ ರೈತ ಬಜಾರ್ ಗಳನ್ನು ತೆರೆದರೆ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್.ಡಿ. ಸೋನಾಲ್‍ ಧರ್ಮೇಗೌಡ ಹೇಳಿದರು.

ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ರೈತ ಬಜಾರ್ ನಿಂದ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ರಿಯಾಯಿತಿ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ರೈತ ಬಜಾರ್ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕಡೂರು ಪಟ್ಟಣದಲ್ಲಿ ಆರಂಭವಾಗಿದ್ದು ಸಾವಯವ ಕೃಷಿಗೆ ಉತ್ತೇಜನ ಮತ್ತು ಸಾವಯವ ಆಹಾರ ಮತ್ತಿತರ ಪದಾರ್ಥಗಳಿಗೆ ಮಾರುಕಟ್ಟೆ ಕಲ್ಪಿಸಿ ಸಹಕಾರ ಸಂಘ, ರೈತರಿಗೆ ಉತ್ತಮ ಬೆಲೆ ನೀಡಿ ಖರೀದಿದಾರರಿಗೂ ಶೇ. 5ರ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿರುವ ವಿಶ್ವನಾಥ್ ಮತ್ತು ಅವರ ಎಲ್ಲ ನಿರ್ದೇಶಕರಿಗೆ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಕಡೂರು ತಾಲೂಕಿನ ಎಲ್ಲ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ರೈತ ಬಜಾರ್ ರಿಯಾಯಿತಿ ಕಾರ್ಡ್ ನೀಡಿರುವುದನ್ನು ಅಭಿನಂದಿಸುತ್ತೇನೆ. ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ 161 ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ 101 ಸಂಘಗಳು ಮಹಿಳೆಯರ ನಿರ್ವಹಣೆಯಲ್ಲಿ ಲಾಭಗಳಿಸುತ್ತಿವೆ. ಪ್ರತೀ ತಿಂಗಳು 32 ಲಕ್ಷ ಲೀ. ಹಾಲು ಉತ್ಪಾದನೆಯಾಗಿ ಹಾಸನ ಹಾಲು ಒಕ್ಕೂಟ ಪ್ರತಿ ತಿಂಗಳು ₹12 ಕೋಟಿ ನೀಡುತ್ತಿದೆ ಎಂದು ತಿಳಿಸಿದರು. ಸಹಕಾರ ಸಂಘ ನಡೆಸುತ್ತಿರುವ ಮಹಿಳೆಯರು ಸ್ವಾವಲಂಭಿಗಳಾಗಿದ್ದಾರೆ. ಪ್ರತಿ ರೈತನು, ರೈತ ಬಜಾರಿನ ಸದಸ್ಯತ್ವ ಪಡೆದು ನಿಮ್ಮ ಪದಾರ್ಥಗಳನ್ನು ಉತ್ತಮ ಬೆಲೆಗೆ ನೀಡಿ ಬಜಾರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಿರಿ ಎಂದು ಕರೆ ನೀಡಿದರು.ತಾ.ವ್ಯ.ಮಾ.ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೈಕ್ಷಣಿಕವಾಗಿ ಸಾಧನೆ ಮಾಡಿದ ರೈತರ ಮಕ್ಕಳು, 10, 12ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಹೆಜ್ಜೆ ಇಟ್ಟಿದ್ದು ಬಹುತೇಕ ರೈತರ ಮಕ್ಕಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ನಮ್ಮ ಪುರಸ್ಕಾರ ಪಡೆದಿರುವುದು ಸಂತಸ ತಂದಿದೆ. ರೈತ ಬಜಾರ್ ‘ರೈತರಿಗಾಗಿ ಅವರ ಉತ್ಪನ್ನಗಳ ಮಾರಾಟಕ್ಕಾಗಿ’ ತೆರೆದಿರುವ ಬಜಾರ್ ಇದರ ಸದುಪಯೋಗ ಪಡೆಯಿರಿ ಎಂದು ರೈತರಿಗೆ ಹಾಗೂ ಹಾಲು ಉತ್ಪಾದಕ ಸಂಘಗಳಿಗೆ ಕರೆ ನೀಡಿದರು. ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಬಿದರೆ ಜಗದೀಶ್ ಮಾತನಾಡಿ, ಈ ರೈತ ಬಜಾರಿನಲ್ಲಿ ರೈತರಿಗೆ ನಿಖರ ಬೆಲೆ ಸಿಗುವುದರಿಂದ ನಮ್ಮ ಕೃಷಿಯನ್ನು ಸರ್ಕಾರಗಳು ಕೈಗಾರಿಕೆ ಎಂದು ಘೋಷಿಸಬೇಕೆಂದು ಒತ್ತಾಯ ಮಾಡಿದರು. ಸರಸ್ಪತಿಪುರ ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಚಿಕ್ಕಮಗಳೂರು ರೈತ ಮುಖಂಡ ಸುನಿಲ್ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ದಯಾನಂದ್, ಮಧುಸೂದನ್, ಕೃಷ್ಣರಾಮಪ್ಪ, ವಿನೋದ್ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ತಾಲೂಕಿನ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಸದಸ್ಯರಿಗೆ ರೈತ ಬಜಾರಿನ ರಿಯಾಯಿತಿ ಕಾರ್ಡ್ ವಿತರಣೆ ಮಾಡಲಾಯಿತು. 14ಕೆಕೆಡಿಯು1.ಕಡೂರು ತಾಲೂಕು ವ್ಯವಸಾಯೋತ್ಪನ ಸಹಕಾರ ಸಂಘವು ರೈತ ಬಜಾರ್ ಮೂಲಕ ರೈತ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೆರವೇರಿತು.ಸಹಕಾರ ಸಂಘದ ಅಧ್ಯಕ್ಷ ಎಚ್.ವಿಶ್ವನಾಥ್,ಸೋನಾಲ್‍ಗೌಡ,ಬಿದರೆ ಜಗದೀಶ್ ಮತ್ತಿತರರು ಇದ್ದರು