ಹಗರಿಬೊಮ್ಮನಹಳ್ಳಿ: ಕಳೆನಾಶಕ ಹಾಗೂ ರಾಸಾಯನಿಕಗಳನ್ನು ಬಳಸದೇ ಕೃಷಿ ಮಾಡಲು ಸಾಧ್ಯವಿದೆ. ವಿಷಮುಕ್ತ ಬೇಸಾಯದಿಂದಲೇ ರೈತನಿಗೆ ಕೃಷಿಯಲ್ಲಿ ನೆಮ್ಮದಿ ಸಿಗಲು ಸಾಧ್ಯ ಎಂದು ಮ್ಯಾನೋರ್ ಫಾರ್ಮನ ಸಾವಯವ ಕೃಷಿಕ ವಸಂತ್ ಮಾಲವಿ ಪ್ರತಿಪಾದಿಸಿದರು.
ಮಕ್ಕಳಿಗೆ ತೋಟ ಸುತ್ತಾಡಿಸಿ ಕಳೆದ ೮ ವರ್ಷಗಳಿಂದ ತಾವು ಬೆಳೆಸಿರುವ ಮರಗಳು ಮತ್ತು ಹಣ್ಣಿನ ಗಿಡಗಳನ್ನು ಪರಿಚಯಿಸಿದರು. ಸಾವಯವ ಕೃಷಿಯ ಲಾಭ ಕುರಿತು ಮಾಹಿತಿ ನೀಡುತ್ತಾ ನಡೆದರು.
ಕೃಷಿ ಸುಭಿಕ್ಷವಾಗಿದ್ದರೆ ಮಾತ್ರ ಬದುಕಿನಲ್ಲಿ ಖುಷಿಯಾಗಿರಲು ಸಾಧ್ಯ. ರೈತನ ವೆಚ್ಚಗಳು ತಗ್ಗಬೇಕು. ಅರಣ್ಯ ಕೃಷಿ ಸಹಿತ ಸಹಜ ಮತ್ತು ಸಾವಯವ ಕೃಷಿಗೆ ಪ್ರತಿ ರೈತರು ತೆರೆದುಕೊಳ್ಳಬೇಕು. ಬೆಳೆಯುವ ಮುನ್ನ ಸಜೀವ ಮಣ್ಣನ್ನು ಬೆಳೆಸಿ ಉಳಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಈ ನಿಟ್ಟಿನಲ್ಲಿ ರೈತರು ಕಾರ್ಯೋನ್ಮುಖರಾಗಬೇಕು ಎಂದು ವಿವರಿಸಿದರು.ತಮ್ಮ ತೋಟದಲ್ಲಿ ಬೆಳೆಸಲಾಗಿರುವ ಔಷಧೀಯ ಸಸ್ಯಗಳ ಜೊತೆಗೆ ಬೆಳೆಯುವ ಕಳೆ ಸಸ್ಯಗಳನ್ನು ತೋರಿಸುತ್ತಾ ಕಳೆ ಸಸ್ಯಗಳಿಂದಾಗುವ ಆರೋಗ್ಯಕರ ಲಾಭಗಳನ್ನು ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡುವ ಜೊತೆಗೆ ವಿಷಮುಕ್ತ ಬೆಳೆಗಳ ಮೂಲಕ ವಿಷಮುಕ್ತ ಆಹಾರ ಮತ್ತು ಆರೋಗ್ಯ ಲಭಿಸುತ್ತದೆ ಎಂದರು.
ಪ್ರಾಂಶುಪಾಲರಾದ ಚೇತನಕುಮಾರ್ ಮತ್ತು ಶಿಕ್ಷಕ ಜಗದೀಶ್ ಮತ್ತಿತರರು ಮ್ಯಾನೋರ್ ಫಾರ್ಮ ರಾಜ್ಯದ ಬಹುದೊಡ್ಡ ಮಾದರಿ ಕೃಷಿ ಕೇಂದ್ರವಾಗಿದೆ. ಕೃಷಿ ಕೈಗೊಳ್ಳುವರು ಇವರ ಜಮೀನನ್ನು ಒಮ್ಮೆ ಸುತ್ತಾಡಿದರೆ ಸಾಕು ಹೆಚ್ಚಿನ ಮಾಹಿತಿಯೊಂದಿಗೆ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದರು. ಬಹುತೇಕ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಮತ್ತೆ ತೋಟಕ್ಕೆ ಭೇಟಿ ನೀಡುವ ಭರವಸೆ ನೀಡಿದಾಗ ಮ್ಯಾನೋರ್ ಫಾರ್ಮನ ಮಾಲವಿ ದಂಪತಿಗಳು ಹರ್ಷದಿಂದ ವಿದ್ಯಾರ್ಥಿಗಳನ್ನು ಬೀಳ್ಕೊಟ್ಟರು.