ಹಗರಿಬೊಮ್ಮನಹಳ್ಳಿ: ತಾಲೂಕಿನಾದ್ಯಂತ ವಾಡಿಕೆಯ ಮೊದಲೇ ಮುಂಗಾರು ಮಳೆ ಸುರಿಯುತ್ತಿದ್ದು, ಯೂರಿಯಾ ರಸಗೊಬ್ಬರದ ಅಭಾವದಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೃಷಿ ಚಟುವಟಿಕೆಗಳು ಅತಂತ್ರಗೊಂಡಿವೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಪಿ.ದೇವರಾಜ ಕಳವಳ ವ್ಯಕ್ತಪಡಿಸಿದರು.
ತಾಲೂಕಿನಾದ್ಯಂತ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ೩೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಮತ್ತು ಸಜ್ಜೆ ಬಿತ್ತನೆ ಭರದಿಂದ ಸಾಗಿದೆ. ಈಗ ಎರಡೂ ಬೆಳೆಗಳಿಗೆ ಯೂರಿಯಾ ನೀಡುವುದು ಅಗತ್ಯವಾಗಿದೆ. ಆದರೆ, ಸರ್ಕಾರ ಎಫ್ಐಡಿ ಆಧರಿಸಿ ಎಕರೆಗೆ ನೀಡುವ ಒಂದು ಚೀಲ ಯೂರಿಯಾ ಸಾಕಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕೃಷಿ ಚಟುವಟುಕೆಗಳಿಗೆ ಅಗತ್ಯ ಯೂರಿಯಾ ದಾಸ್ತಾನು ಕುರಿತು ಕೂಡ ಕೃಷಿ ಅಧಿಕಾರಿಗಳು ರೈತರಿಗೆ ಮಾಹಿತಿ ಒದಗಿಸುತ್ತಿಲ್ಲ. ಈಗಿರುವ ಎಕರೆಗೆ ಒಂದು ಚೀಲ ಯೂರಿಯಾ ವಿತರಣೆ ಪರಿಷ್ಕರಿಸಬೇಕು. ಎಕರೆಗೆ ಕನಿಷ್ಠ ಮೂರು ಚೀಲ ಯೂರಿಯಾ ಒದಗಿಸಲು ಕೃಷಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಿಬೇಕು ಎಂದು ಅವರು ಆಗ್ರಹಿಸಿದರು.ಉಪ ತಹಸೀಲ್ದಾರ್ ಶಿವಕುಮಾರ ಗೌಡ ಮನವಿ ಸ್ವೀಕರಿಸಿದರು. ಸಂಘದ ತಾಲೂಕು ಗೌರವಾಧ್ಯಕ್ಷ ಸೀಗೇನಹಳ್ಳಿ ನಾಗೇಂದ್ರಪ್ಪ, ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಸಂಜೀವ್, ಉಪಾಧ್ಯಕ್ಷ ತಂಬ್ರಹಳ್ಳಿ ವಸಂತ್, ಸಲಹಾ ಸಮಿತಿಯ ಅಧ್ಯಕ್ಷ ಬನ್ನಿಗೋಳು ಮಹೇಶ್, ಮಾಜಿ ಅಧ್ಯಕ್ಷ ಆರ್.ಟಿ.ಕಾಳಪ್ಪ, ಕೆಚ್ಚಿನಬಂಡಿ ದುರುಗಪ್ಪ, ಬಸಣ್ಣ, ಎಣ್ಣಿ ನಾಗಪ್ಪ ಹಾಗೂ ಆರ್.ಎಂ.ವೀರೇಶ್ ಮತ್ತಿತರರಿದ್ದರು.