ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಎಲ್ಲ ಕಾಲುವೆ ಸ್ವಚ್ಛಗೊಳಿಸಿ ಕ್ಲೋಜರ್ ಮತ್ತು ಸ್ಪೇಷಲ್ ರಿಪೇರಿ ಯೋಜನೆಯಡಿ ಹೂಳು ತೆಗೆಸಿ, ಜಾಲಿಕಂಠಿ ಕಡೆಸಿ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ನಿಯೋಗ ಬೆಂಗಳೂರಿನಲ್ಲಿ ಕೃಷ್ಣಾ ಜಲ ಭಾಗ್ಯ ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ ಮೋಹನರಾಜ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.ಜಿಲ್ಲೆಯಲ್ಲಿ ಎಲ್ಲ ಏತನೀರಾವರಿ ಕಾಲುವೆಗಳಲ್ಲಿ ಹುಳು ತುಂಬಿ ಕಂಠಿಗಳು ಬೆಳೆದು ನೀರು ಮುಂದೆ ಹೋಗದಂತಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು, ಕಳೆದ ೨ ವರ್ಷಗಳಿಂದ ಈ ಕೆಲಸಗಳಿಗೆ ಅನುದಾನ ಇಲ್ಲವೆಂದು ಎಲ್ಲಾ ಕಾಲುವೆಗಳಲ್ಲಿ ಸ್ವಚ್ಛತೆ ಮಾಡದೇ ಹಾಗೇ ಬಿಟ್ಟಿದ್ದಾರೆ. ಕೆಲವು ಕಡೆ ರೈತರೆ ಸ್ವತಃ ಹಣ ಖರ್ಚು ಮಾಡಿ ಸ್ವಚ್ಛತೆ ಮಾಡಿರುವುದು ಇದೆ ಎಂದು ರೈತರು ತಿಳಿಸಿದರು.ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಈ ವರ್ಷವಾದರೂ ಎಲ್ಲಾ ಕಾಲುವೆಗಳನ್ನು ಮಳೆಗಾಲದಲ್ಲಿ ಅಣೆಕಟ್ಟಿನಿಂದ ನೀರು ಬಿಡುವ ಮುಂಚಿತವಾಗಿ ಸ್ವಚ್ಛತೆ ಮಾಡಬೇಕೆಂದು ಮತ್ತು ಅದಕ್ಕೆ ಅವಶ್ಯಕವಾದ ಹಣವನ್ನು ಪ್ರತಿವರ್ಷ ತೆಗೆದಿಡಬೇಕು ಹಾಗೆ ಟೆಂಡರ್ ಕರೆದ ಎಸ್ಟಿಮೆಂಟ್ ಮೊತ್ತದಲ್ಲಿ ಶೇ ೬೫ ಕ್ಕಿಂತ ಕಡಿಮೆ ಹಣದಲ್ಲಿ ಕೆಲಸ ಮಾಡಲು ಗುತ್ತಿಗೆದಾರರು ಮುಂದೆ ಬರುತ್ತಾರೆ. ಅದು ಹೇಗೆ ಸಾಧ್ಯವಾಗಲು ಸಾಧ್ಯ. ಅವರು ನಾಲ್ಕು ದುಡ್ಡು ಉಳಿಸಲು ಕ್ಲೋಜರ್ ಕಾಮಗಾರಿಯೂ ಸಂಪೂರ್ಣ ಮಾಡಲು ಸಾಧ್ಯವಾಗದೇ ಕಳಪೆಯಿಂದ ಮಾಡಿ ಸರಕಾರಕ್ಕೆ ಹಾಗೂ ರೈತರಿಗೆ ಮೊಸ ಮಾಡುತ್ತಿರುತ್ತಾರೆ, ಆದ್ದರಿಂದ ಈ ರೀತಿ ಆಗದಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಮಹೆಶಗೌಡ ಸುಬೇದಾರ, ಸಂತೋಷ ಪೂಜಾರಿ ಸೇರಿದಂತೆ ಇತರರು ಇದ್ದರು.