ಚಿಕ್ಕಮಗಳೂರು ಬರಪೀಡಿತ ತಾಲೂಕೆಂದು ಘೋಷಿಸಲು ರೈತರ ಆಗ್ರಹ: ಧರಣಿ

KannadaprabhaNewsNetwork | Published : Dec 14, 2023 1:30 AM

ಸಾರಾಂಶ

ಚಿಕ್ಕಮಗಳೂರು ಬರಪೀಡಿತ ತಾಲೂಕೆಂದು ಘೋಷಿಸಲು ರೈತರ ಆಗ್ರಹ: ಧರಣಿ-ರೈತರಿಗೆ ಅನ್ಯಾಯವೆಸಗಲಾಗಿದೆ ಎಂದು ತಹಸೀಲ್ದಾರ್‌ಗೆ ಮನವಿ

-ರೈತರಿಗೆ ಅನ್ಯಾಯವೆಸಗಲಾಗಿದೆ ಎಂದು ತಹಸೀಲ್ದಾರ್‌ಗೆ ಮನವಿಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರು ಬರ ಪೀಡಿತ ತಾಲೂಕೆಂದು ಘೋಷಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಮಿತಿ ನೇತೃತ್ವದಲ್ಲಿ ರೈತರು ಬುಧವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.

ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಾಗ ಚಿಕ್ಕಮಗಳೂರು ತಾಲೂಕನ್ನು ಹೊರತುಪಡಿಸಿ ಉಳಿದ ತಾಲೂಕನ್ನು ಘೋಷಿಸಿ ರೈತರಿಗೆ ಅನ್ಯಾಯವೆಸಗಲಾಗಿದೆ. ಬರಪೀಡಿತ ಪ್ರದೇಶಕ್ಕೆ ಕೊಡುವ ಸವಲತ್ತಿನಿಂದ ರೈತರು ವಂಚಿತರಾಗಿದ್ದಾರೆಂದು ತಹಸೀಲ್ದಾರ್‌ ಡಾ. ಸುಮಂತ್‌ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮಳೆ ಕೊರತೆಯಿಂದ ಯಾವ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿಲ್ಲ, ರಾಗಿ, ಜೋಳ, ಬತ್ತದಂತಹ ಆಹಾರ ಬೆಳೆ ಗಳಾಗಲಿ, ತರಕಾರಿ ಬೆಳೆ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳು ಸಹ ಬರಗಾಲದಿಂದ ನಷ್ಟ ಅನುಭವಿಸಿವೆ. ಹಿಂಗಾರಿನಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದರಿಂದ ರೈತರು ತೊಂದರೆ ಅನುಭವಿಸಬೇಕಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಚಿಕ್ಕಮಗಳೂರು ತಾಲೂಕು ಬರ ಅಧ್ಯಯನಕ್ಕೆ ನಿಯೋಗ ಕಳುಹಿಸಿಕೊಡಬೇಕು. ವಾಸ್ತವ ಅರಿತು ಬರಪೀಡಿತ ಪ್ರದೇಶ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ರೈತರ ಸಾಲಮನ್ನಾ ಮಾಡಬೇಕು. ಬೆಳೆನಷ್ಟಕ್ಕೆ ವೈಜ್ಞಾನಿಕ ಪರಿಹಾರ ಘೋಷಿಸಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು. ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಂಡು ರೈತರಿಗೆ ಉದ್ಯೋಗ ಒದಗಿಸಬೇಕು. ವಿಮೆ ಮಾಡಿರುವ ರೈತರಿಗೆ ಬೆಳೆವಿಮೆ ತಲುಪಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಲೋಕೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಾಗೂ ರೈತರು ಇದ್ದರು. 13 ಕೆಸಿಕೆಎಂ 7

ಚಿಕ್ಕಮಗಳೂರು ಬರಪೀಡಿತ ತಾಲೂಕೆಂದು ಘೋಷಿಸುವಂತೆ ಆಗ್ರಹಿಸಿ ರೈತರು ತಾಲೂಕು ಕಚೇರಿ ಎದುರು ಬುಧವಾರ ಧರಣಿ ನಡೆಸಿ ತಹಸೀಲ್ದಾರ್‌ ಡಾ. ಸುಮಂತ್‌ ಅವರಿಗೆ ಮನವಿ ಸಲ್ಲಿಸಿದರು.

Share this article