ಜೇನು ಸಾಕಣೆ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನಜೇನು ಸಾಕಣೆ ಮಾಡುವುದು ಎಲ್ಲಾ ರೈತರಿಗೆ ಒಂದು ಉಪ ಕಸುಬಾಗಿ ಉಳಿಯಬೇಕಾಗಿದ್ದು, ಜೇನು ಸಾಕಣೆ ಮಾಡಿ ಲಾಭವನ್ನು ಗಳಿಸಬೇಕು ಎಂದು ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಡಾ.ಕೆ.ಎನ್.ಮುನಿಸ್ವಾಮಿಗೌಡ ತಿಳಿಸಿದ್ದಾರೆ.
ನಗರದಲ್ಲಿ ಹಾಸನ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕೃಷಿ ಮಹಾವಿದ್ಯಾಲಯ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜಕತೆ ಜಿಕೆವಿಕೆ, ಬೆಂಗಳೂರು ವತಿಯಿಂದ ಕೃಷಿ ಮಹಾವಿದ್ಯಾಲಯ, ಕಾರೆಕೆರೆ, ಹಾಸನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.ಜೇನಿನಿಂದ ಕೇವಲ ಜೇನುತುಪ್ಪವನ್ನಷ್ಟೇ ಪಡೆಯದೇ ಮೇಣ, ರಾಜಶಾಹಿ ರಸ ಹಾಗೂ ಅವುಗಳ ಕ್ರಿಯೆಗಳ ಪರಾಗಸ್ಪರ್ಶದಿಂದ ಉತ್ಕೃಷ್ಠ, ಶ್ರೇಷ್ಠಮಟ್ಟದ ಇಳುವರಿ ಪಡೆಯಲು ಸಹಕಾರಿ. ತರಬೇತಿಯ ಲಾಭವನ್ನು ಪಡೆದು ತಾವೇ ಅಧಿಕವಾಗಿ ಲಾಭ ಪಡೆಯಿರಿ ಎಂದು ತಿಳಿಸಿದರು.
ಕೌಶಲ್ಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ಕೆ.ಟಿ.ವಿಜಯಕುಮಾರ್ ಮಾತನಾಡಿ, ಜೇನುನೊಣಗಳು ಮತ್ತು ಪರಾಗಸ್ಪರ್ಶಿಗಳು, ಕೃವಿವಿ, ಬೆಂಗಳೂರು ಇವರು ಕಾರ್ಯಕ್ರಮವನ್ನು ಪರಿಶಿಷ್ಠ ಪಂಗಡಗಳ ಆಯ್ದ ರೈತರಿಗೆ ಆಯೋಜಿಸಿ ಜೇನು ಸಾಕಣೆ, ನಿರ್ವಹಣೆ ಹಾಗೂ ಉಪ ಕಸುಬಾಗಿ ಬಳಸಿಕೊಳ್ಳುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ೩೦ ರೈತರಿಗೆ ತರಬೇತಿ ನೀಡಲಾಯಿತು.ಈ ಸಂದರ್ಭದಲ್ಲಿ ಸ್ವಾಭಾವಿಕ ಜೇನುಗೂಡನ್ನು ಪೆಟ್ಟಿಗೆಯಲ್ಲಿ ತುಂಬುವುದರ ಬಗ್ಗೆ ಕ್ಷೇತ್ರ ಸಹಾಯಕ ಸಂತೋಷ ಕುಮಾರ್, ಬೆಂಗಳೂರು ಜಿಕೆವಿಕೆಯ ಜೇನು ಕೃಷಿ ವಿಭಾಗದ ಜೇನು ಹುಳು ಪರಿಣಿತೆ ರಕ್ಷಿತಾ ಬಿ.ಎನ್. ಪ್ರಾತ್ಯಕ್ಷಿಕತೆ ಮೂಲಕ ರೈತರಿಗೆ ಮನದಟ್ಟು ಮಾಡಿಕೊಟ್ಟರು.
ಕೀಟಶಾಸ್ತ್ರ ಪ್ರಾಧ್ಯಾಪಕ ಡಾ.ಬಸವರಾಜು ಬಿ.ಎಸ್., ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ.ಸುನಿತ ಟಿ., ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶಂಕರ ಎಂ.ಎಚ್., ಸಹಾಯಕ ನಿರ್ದೇಶಕ ಡಾ.ಶಶಿಕಿರಣ್ ಎ.ಎಸ್., ಕೃಷಿ ಮಹಾವಿದ್ಯಾಲಯದ ಸಹ ಕಾರ್ಯಕ್ರಮ ನಿರ್ದೇಶಕ ಡಾ.ಮೋಹನ ಕುಮಾರ್, ಇತರರು ಹಾಜರಿದ್ದರು.