ಮಹೇಶ ಛಬ್ಬಿ
ತಾಲೂಕಿನ ಮುಳಗುಂದ, ಹರ್ತಿ, ಚಿಂಚಲಿ, ಕಲ್ಲೂರು ನೀಲಗುಂದ, ಅಂತೂರು- ಬೆಂತೂರು ಗ್ರಾಮಗಳ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹೆಸರು ಬಿತ್ತನೆ ಮಾಡಿದ ಹೊಲಗಳ ಮೇಲೆ ಮಂಗಗಳ ಹಿಂಡು ದಾಳಿ ಮಾಡಿ ಹೆಸರನ್ನು ತಿಂದ್ದು ನಾಶಪಡಿಸುತ್ತಿದ್ದು, ರೈತರನ್ನು ನಿದ್ದೆಗೆಡಿಸಿದೆ.
ಮಳೆ ಇಲ್ಲದೇ ಪ್ರಸಕ್ತ ವರ್ಷ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಅಲ್ಪ ಮಳೆಗೆ ಬೆಳೆದ ಹೆಸರನ್ನು ಮಂಗಗಳಿಂದ ರಕ್ಷಣೆ ಮಾಡಲು ರೈತರು ಪಟಾಕಿ ಸಿಡಿಸಿ ಏನೇ ತಂತ್ರಗಾರಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಸದ್ಯ ಹೆಸರು ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.ಕಳೆದ ವರ್ಷ ಅಕಾಲಿಕ ಮಳೆಯಿಂದ ಹೆಸರು ಬೆಳೆ ಸಂಪೂರ್ಣವಾಗಿ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಪ್ರಸಕ್ತ ವರ್ಷ ಮಳೆ ಕೊರತೆಯಿಂದ ರೈತ ಸಮುದಾಯ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಇದೇ ರೀತಿ ಮಳೆ ಸಂಪೂರ್ಣವಾಗಿ ಕೈಕೊಟ್ಟರೆ ಬರಗಾಲ ಬಿದ್ದು, ಕುಡಿಯುವ ನೀರಿಗೆ, ಜಾನುವಾರುಗಳ ಮೇವಿಗೆ ಪರದಾಡುವಂತಾಗಿ, ರೈತರು ಬದುಕು ನಡೆಸುವುದೇ ಕಷ್ಟಕರವಾಗುತ್ತದೆ. ಜತೆಗೆ ವನ್ಯಜೀವಿಗಳ ಹಾವಳಿಯಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎನ್ನುವ ಭೀತಿ ಕಾಡುತ್ತಿದೆ.
ಬೆಳೆಹಾನಿಗೆ ಪರಿಹಾರವಿಲ್ಲ: ಪ್ರತಿವರ್ಷ ಜಿಂಕೆ, ಮಂಗಗಳ ಹಾವಳಿಯಿಂದ ತೋಟಗಾರಿಕೆ, ಮಳೆ ಆಶ್ರಿತ ಹೊಲಗಳಲ್ಲಿ ಬೆಳೆದ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿವೆ. ಆದರೆ ಇವುಗಳ ಹಾವಳಿ ತಡೆಯಲು ಇಲಾಖೆಗಳು ಕ್ರಮ ವಹಿಸುವುದಿಲ್ಲ. ಬೆಳೆ ನಷ್ಟ ಪರಿಹಾರವೂ ದೊರೆಯದಿರುವುದು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಕಡಿವಾಣ ಹಾಕಿ: ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹೆಸರು ಎಳೆ ಕಾಯಿ, ಹೂವು, ತಪ್ಪಲು (ಎಲೆ)ಗಳನ್ನು ಬಿಡದೆ ತಿನ್ನುತ್ತಿವೆ. ಹಿಂಡು, ಹಿಂಡಾಗಿ ಬರುವ ಮಂಗಗಳು ಹೆಸರನ್ನು ತಿಂದು ನೆಲದ ಪಾಲು ಮಾಡುತ್ತಿವೆ. ಮಂಗಗಳನ್ನು ಓಡಿಸುವುದೆ ಒಂದು ಕೆಲಸವಾಗಿದೆ. ಸಂಬಂಧಪಟ್ಟ ಇಲಾಖೆಯವರು ಈ ಜಿಂಕೆ, ಮಂಗಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮುತ್ತಣ್ಣ ಕತ್ತಿ ತಿಳಿಸಿದರು.