ಕನ್ನಡಪ್ರಭ ವಾರ್ತೆ ಕೋಟ
ಶುಕ್ರವಾರ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ರೈತಧ್ವನಿ ಸಂಘ ಕೋಟ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಸರಣಿಯ ೩೪ನೇ ಕಾರ್ಯಕ್ರಮದಲ್ಲಿ ಪ್ರವೀಣ್ ಕುಲಾಲ್ ಅವರಿಗೆ ಅವರ ಕೃಷಿ ತೋಟದಲ್ಲಿಯೇ ಕೃಷಿ ಪರಿಕರವನ್ನಿತ್ತು ಪಂಚವರ್ಣ ಸಾಧಕ ಕೃಷಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಅವರು, ಕೃಷಿ ಕಾಯಕದಲ್ಲಿ ಕಷ್ಟ ನಷ್ಟಗಳು ನೋವು ನಲಿವುಗಳು ಇರುವುದು ಸಹಜ, ಆದರೆ ನಷ್ಟವಾಯಿತು ಎಂದು ದೃತಿಗೆಡಬಾರದು, ಒಂದೇ ರೀತಿಯ ಕೃಷಿ ನೀತಿಯಿಂದ ಹೊರಬಂದು ಎಲ್ಲ ರೀತಿಯ ಆಧುನಿಕ ಕೃಷಿ ನೀತಿಗೆ ಒಗ್ಗಿಕೊಳ್ಳಬೇಕು. ಯುವ ಸಮುದಾಯ ಹೆಚ್ಚೆಚ್ಚು ಕೃಷಿಯಲ್ಲಿ ಮುಂಚೂಣಿಗೆ ಬರಬೇಕು ಎಂದು ಕರೆ ಇತ್ತರು.ಕುಂದಾಪುರ ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಅಧಿಕಾರಿ ರಮಿತಾ ಮಾತನಾಡಿ, ಪ್ರವೀಣ್ ಕುಲಾಲ್ ಯುವ ಸಮುದಾಯಕ್ಕೆ ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಹೊಸ ಆವಿಷ್ಕಾರಗಳ ಮೂಲಕ ಈ ಪ್ರದೇಶದಲ್ಲಿ ಕೃಷಿಗೆ ಹೊಸ ಭಾಷ್ಯ ಬರೆಯಲು ಹೊರಟಿದ್ದಾರೆ. ಸರ್ಕಾರದಿಂದ ಸಿಗುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳವ ಮೂಲಕ ಕೃಷಿ ಕಾಯಕದಲ್ಲಿ ಸ್ವಾವಲಂಬಿ ಬದುಕು ಕಾಣುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಮುಖ್ಯ ಅಭ್ಯಾಗತರಾಗಿ ಯುವ ನ್ಯಾಯವಾದಿ ಚಂದ್ರ ಪೂಜಾರಿ ತೆಕ್ಕಟ್ಟೆ, ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು, ಪಂಚವರ್ಣದ ಪದಾಧಿಕಾರಿಗಳು ಮತ್ತಿರರು ಉಪಸ್ಥಿತರಿದ್ದರು.
ಪಂಚವರ್ಣದ ಕಾರ್ಯದರ್ಶಿ ಶಕೀಲ ಎನ್. ಪೂಜಾರಿ ಸ್ವಾಗತಿಸಿದರು. ಸಂಚಾಲಕಿ ಸುಜಾತಾ ಎಂ. ಬಾಯರಿ ಪ್ರಾಸ್ತಾವನೆಗೈದು ನಿರೂಪಿಸಿದರು. ಪಂಚವರ್ಣದ ಸದಸ್ಯ ಕೇಶವ ಆಚಾರ್ ವಂದಿಸಿದರು. ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.