- ದಾರಿ, ಹೊಳೆಮಟ್ಟಿಲು, ರ್ಯಾಂಪ್ ನಿರ್ಮಿಸಲು ಆಗ್ರಹ । ಸ್ಮಶಾನ ಸಮಸ್ಯೆ ಪರಿಹರಿಸಲು ಒತ್ತಾಯ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಕಮ್ಮಾರಗಟ್ಟೆ ಬಳಿ ಇರುವ ಜಾಕ್ವೆಲ್ ಮೂಲಕ ನದಿಯಿಂದ ಕೆರೆಗೆ ನೀರು ತುಂಬಿಸುವ ಕೆಲಸವೇ ನಡೆದಿಲ್ಲ ಎಂದು ಕಮ್ಮಾರಗಟ್ಟೆ, ಸಿಂಗಟಗೆರೆ, ತರಗನಹಳ್ಳಿ ಸೇರಿದಂತೆ ಇತರ ಗ್ರಾಮಗಳ ರೈತರು ಆರೋಪಿಸಿ ಮಂಗಳವಾರ ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್ ಮಂಜುನಾಥ್ ಅವರನ್ನು ಸ್ಥಳಕ್ಕೆ ಕರೆಸಿ, ಘೇರಾವ್ ಹಾಕಿದ ಘಟನೆ ಜರುಗಿತು.ಕಮ್ಮಾರಗಟ್ಟೆ ಬಳಿ ತುಂಭದ್ರಾ ನದಿಯಿಂದ ನೀರೆತ್ತುವ ಏತ ನಿರಾವರಿ ಯೋಜನೆಗೆ ನದಿ ಸಮೀಪ ನಿರ್ಮಿಸಿರುವ ಜಾಕ್ವೆಲ್ನಿಂದ ₹33 ಕೋಟಿ ಅನುದಾನದಲ್ಲಿ ಘಂಟಾಪುರ, ತರಗನಹಳ್ಳಿ, ಸಿಂಗಟಗೆರೆ, ಅರಕೆರೆ ಸೇರಿದಂತೆ ಸುಮಾರು 14 ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಜಾರಿಯಲ್ಲಿದೆ. ಮಳೆಗಾಲದಲ್ಲಿಯೂ ನೀರು ಕೆರೆಗಳಿಗೆ ಹರಿಯಲಿಲ್ಲ ಎಂದಾದರೆ ರೈತರು ಹೇಗೆ ಬದುಕಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ನದಿಯಲ್ಲಿ ನೀರು ಸಂಪೂರ್ಣ ಕಡಿಮೆಯಾಗಿರುವ ಪ್ರಯುಕ್ತ ಜಾಕ್ವೆಲ್ಗೆ ನೀರು ಏರುವುದಿಲ್ಲ ಎಂದರು. ಆಗ, ರೈತರು ಮಧ್ಯ ಪ್ರವೇಶಿಸಿ ಮೋಟಾರ್ಗಳನ್ನು ಪ್ರತ್ಯೇಕ ಇಟ್ಟು ನದಿಯಿಂದ ಜಾಕ್ವೆಲ್ಗೆ ನೀರೇರಿಸಿ ನೀರು ಹರಿಸುತ್ತೇವೆ ಎಂದು ತಿಳಿಸಿದರು. ಇದಕ್ಕೆ ಒಪ್ಪಿಗೆ ನೀಡಿದ ಶಾಸಕರು ಇದಕ್ಕೆ ತಮ್ಮ ಸಮ್ಮತಿ ಇದೆ, ಕ್ರಮ ಕೈಗೊಳ್ಳಿರಿ ಎಂದು ಹೇಳಿ ಅಲ್ಲಿಂದ ತೆರಳಿದರು. ಅನಂತರ ಸ್ಥಳದಲ್ಲಿದ್ದ ಕಮ್ಮಾರಗಟ್ಟೆ ಗ್ರಾಮದ ಜನರು ನದಿಯಿಂದ ಗ್ರಾಮಕ್ಕೆ ಹೋಗಿ ಬಂದು ಮಾಡಲು ಸರಿಯಾದ ದಾರಿ, ಹೊಳೆಮಟ್ಟಿಲು, ರ್ಯಾಂಪ್ ನಿರ್ಮಿಸಿಲ್ಲ ಹಾಗೂ ಗ್ರಾಮದಲ್ಲಿ ಸ್ಮಶಾನ ಸಮಸ್ಯೆ ಇದೆ. ಈ ಎಲ್ಲ ಸಮಸ್ಯೆಗಳು ಈಡೇರುವವರೆಗೆ ಮೋಟಾರ್ಗಳನ್ನು ಅಳವಡಿಸಿ ಜಾಕ್ವೆಲ್ಗೆ ನೀರೆತ್ತಲು ನಾವು ಅವಕಾಶ ಕೊಡುವುದಿಲ್ಲ ಎಂದು ಹಠ ಹಿಡಿದರು.
ಈ ಸಂದರ್ಭ ವಿವಿಧ ಗ್ರಾಮಗಳ ಮುಖಂಡರಾದ ಟಿ.ಜಿ.ಸತೀಶಗೌಡ, ಆಂಜನೇಯ, ಪ್ರಭಾಕರ್, ಮುರುಗೇಶ್, ಬಸವನಗೌಡ, ಮಂಜುನಾಥ ಅಶೋಕಕುಮಾರ, ಮಲ್ಲಿಕಾರ್ಜನ, ಮುರುಗೇಶ್ ಹಾಗೂ ಇತರರು ಇದ್ದರು.
-15ಎಚ್.ಎಲ್,ಐ5, 5ಎ.: ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಬಳಿ ತುಂಗಭದ್ರಾ ನದಿಯಿಂದ ಗ್ರಾಮಕ್ಕೆ ರಸ್ತೆ, ಹೊಳೆಮೆಟ್ಟಲು ನಿರ್ಮಿಸಲು ಗ್ರಾಮಸ್ಥರು ಒತ್ತಾಯಿಸಿದರು.