ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿ ಉತ್ತರ ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿರುವ ಲಿಚ್ಚಿ ಕೃಷಿಗೆ ದಕ್ಷಿಣ ಭಾರತದಲ್ಲೂ ವಿಫುಲ ಅವಕಾಶಗಳಿದ್ದು, ಈ ಕೃಷಿಯಿಂದ ಬೆಳೆಗಾರರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬಹುದಾಗಿದೆ. ಕೆ.ಜಿಯೊಂದಕ್ಕೆ 250 ರುಪಾಯಿಗೆ ಮಾರಾಟವಾಗುತ್ತಿದ್ದು, ಬಹು ಬೇಡಿಕೆಯ ಹಣ್ಣಾಗಿದ್ದು, ರೈತರು ಈ ಕೃಷಿಯಲ್ಲಿ ಉತ್ಸುಕತೆ ತೋರಬೇಕಿದೆ.ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಹಣ್ಣುಗಳ ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆಯಿಂದ ಆಫ್ ಸೀಸನ್ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಗುರುವಾರ ನಡೆಯಿತು. ಜಿಲ್ಲೆ, ಹೊರ ಜಿಲ್ಲೆ ಹಾಗೂ ಕೇರಳ ರಾಜ್ಯದ ರೈತರು ಪಾಲ್ಗೊಂಡು ಲಿಚ್ಚಿ ಬೆಳೆಯ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕೇಂದ್ರದಲ್ಲಿ ಸುಮಾರು 60ಕ್ಕೂ ಅಧಿಕ ಲಿಚ್ಚಿ ಹಣ್ಣಿನ ಮರಗಳಿದ್ದು, ಈ ಬಾರಿ ಹೆಚ್ಚು ಫಸಲು ನೀಡಿದೆ. ಮರವೊಂದರಲ್ಲೇ ಅಂದಾಜು ನೂರಾರು ಕೆ.ಜಿ. ಲಿಚ್ಚಿ ಹಣ್ಣು ತೂಗುತ್ತಿದ್ದು, ನೋಡುಗರ ಕಣ್ಣುಕುಕ್ಕುವಂತಿತ್ತು. ವಿವಿಧ ತೋಟಗಳಿಂದ ಸಂಗ್ರಹಿಸಲಾಗಿದ್ದ ಲಿಚ್ಚಿಯನ್ನು ಪ್ರದರ್ಶನಕ್ಕಿಡಲಾಗಿತ್ತು.
ಮರದಿಂದಲ್ಲೇ ಗೋಟಿ ವಿಧಾನದ ಮೂಲಕ ಗಿಡ ಮಾಡುವುದು, ಪಕ್ಷಿಗಳಿಂದ ಹಣ್ಣಿನ ಸಂರಕ್ಷಣೆ ಮಾಡುವ ವಿಧಾನ, ಕೀಟ ಹಾಗೂ ರೋಗ ಬಾಧೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಬಿಹಾರ್ ನ ಐ.ಸಿ.ಎ.ಆರ್. – ಎನ್.ಆರ್.ಸಿ. ಲಿಚ್ಚಿ ನಿರ್ದೇಶಕ ಡಾ. ಬಿಕಾಸ್ ದಾಸ್ ಪಾಲ್ಗೊಂಡು ಮಾತನಾಡಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಮುಖ್ಯ ಬೆಳೆಯಲಾಗಿ ಲಿಚ್ಚಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬೆಳೆಯಾಗುತ್ತದೆ. ಹಿಮಾಚಲ್ ಪ್ರದೇಶ್, ಪಂಜಾಬ್ನಲ್ಲೂ ಈಗ ಹೆಚ್ಚಾಗಿ ಬೆಳೆಯಲು ಆರಂಭಿಸಲಾಗಿದೆ. ಕರ್ನಾಟಕದಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶ ಲಿಚ್ಚಿ ಬೆಳೆಯಲು ಪೂರಕವಾಗಿದೆ ಎಂದು ತಿಳಿಸಿದರು.
ಉತ್ತರ ಭಾರದಲ್ಲಿ ಲಿಚ್ಚಿ ಪ್ರವಾಸೋದ್ಯಮ ನಡೆಯುತ್ತಿದೆ. ಕರ್ನಾಟಕದಲ್ಲಿ ಲಿಚ್ಚಿ ಬೆಳೆಯಲು ನಮ್ಮ ಕಡೆಯಿಂದ ತಾಂತ್ರಿಕ ಸಹಾಯವನ್ನು ನೀಡಲಾಗುತ್ತದೆ. ರಿಸರ್ಚ್ ಪೇಪರ್ನ್ನು ಕೂಡ ಪ್ರಕಟ ಮಾಡುತ್ತೇವೆ. ಲಿಚ್ಚಿ ಬೆಳೆಯಲು ನಮ್ಮ ಕೇಂದ್ರದಿಂದ ತರಬೇತಿ ಹಾಗೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು. ಹಣ್ಣುಗಳ ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆಯ ಸಂಯೋಜಕರಾದ ಪ್ರಕಾಶ್ ಪಾಟೀಲ್ ಮಾತನಾಡಿ ಆಫ್ ಸೀಜನ್ ಲಿಚ್ಚಿಗೆ ಉತ್ತಮ ಬೇಡಿಕೆಯಿದೆ. ಆದರೆ ನಮ್ಮಲ್ಲಿ ಅಷ್ಟಾಗಿ ಇದನ್ನು ಬೆಳೆಯುತ್ತಿಲ್ಲ. ರಾಜ್ಯ, ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಆಫ್ ಸೀಜನ್ ಲಿಚ್ಚಿ ಬೆಳೆಸಲು ಪ್ರೋತ್ಸಾಯಿಸಲಾಗುತ್ತಿದೆ. ಈ ಪ್ರಯೋಜನವನ್ನು ಬೆಳೆಗಾರರು ಪಡೆದುಕೊಳ್ಳಬೇಕು. 100 ಎಕರೆ ಮಾತ್ರ ಬೆಳೆಯಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚು ಬೆಳೆಯುವಂತಾಗಬೇಕೆಂದು ಹೇಳಿದರು. ಉತ್ತಮ ಬೇಡಿಕೆ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಸ್. ಕೆ. ಸಿಂಗ್ ಮಾತನಾಡಿ ಚೆಟ್ಟಳ್ಳಿ ಕೇಂದ್ರದಲ್ಲಿ 100 ವರ್ಷಗಳ ಹಳೆಯ ಲಿಚ್ಚಿ ಮರಗಳಿದ್ದು, ಈಗಲೂ ಹಣ್ಣು ಬಿಡುತ್ತಿದೆ. ಕೊಡಗಿನಲ್ಲಿ ಮಾತ್ರ ಡಿಸೆಂಬರ್ ತಿಂಗಳಲ್ಲಿ ಲಿಚ್ಚಿ ಹಣ್ಣು ಬೆಳೆಯುತ್ತದೆ. ಇದರಿಂದ ಎಲ್ಲಾ ಕಡೆಗಳಲ್ಲಿ ಇದಕ್ಕೆ ಉತ್ತಮ ಬೇಡಿಕೆಯಿದೆ ಎಂದು ತಿಳಿಸಿದರು. ಲಿಚ್ಚಿ ಹಣ್ಣಿಗೆ ಮುಂಬೈ, ಬೆಂಗಳೂರು, ದೆಹಲಿಯಲ್ಲಿ ಉತ್ತಮ ಬೆಲೆ ಇದೆ. ಹೊರ ದೇಶದಲ್ಲಿ ಲಿಚ್ಚಿಯನ್ನು ಬೆಳಗ್ಗಿನ ಉಪಹಾರಕ್ಕೆ ಬಳಸುತ್ತಾರೆ. ನಾವು ಹೊರ ಭಾಗದಿಂದ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಆದ್ದರಿಂದ ನಾವು ಕೂಡ ಇದನ್ನು ಬೆಳೆದು ಆದಾಯವನ್ನು ದ್ವಿಗುಣಗೊಳಿಸಬೇಕು. ಮುಂದಿನ ದಿನಗಳಲ್ಲಿ ಲಿಚ್ಚಿ ಹಬ್ ಕೂಡ ಬರಲಿದೆ ಎಂದು ಮಾಹಿತಿ ನೀಡಿದರು.ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ಮುಖ್ಯಸ್ಥ ರಾಜೇಂದಿರನ್ ಮಾತನಾಡಿ ಲಿಚ್ಚಿ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ ರಫ್ತು ಮಾಡುತ್ತಿರುವುದು ತೀರಾ ಕಡಿಮೆ. ಉತ್ತರ ಭಾರದಲ್ಲಿ ಅತಿ ಹೆಚ್ಚು ಬೆಳೆಯಲಾಗುತ್ತಿದ್ದು, ದಕ್ಷಿಣದಲ್ಲಿ ಕರ್ನಾಟಕ, ಕೇರಳ ರಾಜ್ಯದಲ್ಲಿ ಮಾತ್ರ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಮಾತನಾಡಿ ಲಿಚ್ಚಿ ಬೆಳೆಯಲು ನಮ್ಮಲ್ಲಿ ಉತ್ತಮವಾದ ವಾತಾವರಣವಿದೆ. ಇದು ಬಹು ಬೇಡಿಕೆ ಇರುವ ಹಣ್ಣಾಗಿದ್ದು, ಕೃಷಿಕರು ಬೆಳೆದು ಆದಾಯ ದ್ವಿಗುಣಗೊಳಿಸಬೇಕು. ಕಾಫಿ, ಕಾಳು ಮೆಣಸಿನೊಂದಿಗೆ ಇತರೆ ಬೆಳೆಗಳನ್ನು ಬೆಳೆದು ಮತ್ತಷ್ಟು ಲಾಭದಾಯಕವಾಗಿ ಮಾಡಿಕೊಳ್ಳಬೇಕು. ಲಿಚ್ಚಿ ಬೆಳೆಗಾರರು ಕೇಂದ್ರದಲ್ಲಿ ಸಲಹೆ ಪಡೆದು ಬೆಳೆಯಬೇಕು. ವಯನಾಡು, ಸಕಲೇಶಪುರದಲ್ಲಿ ಮಾತ್ರ ಆಫ್ ಸೀಜನ್ ಲಿಚ್ಚಿ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು. ಕೇಂದ್ರದ ಹಣ್ಣಿನ ವಿಜ್ಞಾನಿ ಮುರುಳೀಧರ ಮಾತನಾಡಿ ಉತ್ತರ ಭಾರತದಲ್ಲಿ ಶೇ.98 ರಷ್ಟು ಲಿಚ್ಚಿ ಬೆಳೆಯಲಾಗುತ್ತದೆ. ಕರ್ನಾಟಕ ಹಾಗೂ ಕೇರಳದಲ್ಲಿ ಶೇ.2ರಷ್ಟು ಮಾತ್ರ ಬೆಳೆಯಲಾಗುತ್ತಿದೆ. ಉತ್ತರದಲ್ಲಿ ಮೇ, ಜುಲೈ ನಲ್ಲಿ ಫಸಲು ಬರುತ್ತದೆ. ಆದರೆ ನಮ್ಮಲ್ಲಿ ಬೆಳೆಯಲಾಗುವ ಆಫ್ ಸೀಸನ್ ಲಿಚ್ಚಿ ಡಿಸೆಂಬರ್ ತಿಂಗಳಲ್ಲಿ ಫಸಲು ಬರುತ್ತದೆ. ಇದರಿಂದ ಉತ್ತಮ ಬೇಡಿಕೆಯಿದೆ. ಆದ್ದರಿಂದ ಇದು ಲಾಭದಾಯಕವಾದ ಕೃಷಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ರಾಣಿ ಅವರು ಲಿಚ್ಚಿ ಯಲ್ಲಿ ಕೀಟ ಬಾಧೆ, ಮಧು ರೋಗ ಬಾಧೆ ಬಗ್ಗೆ ಮಾಹಿತಿ ನೀಡಿದರು.
ಬಾಕ್ಸ್... ತೊಗಟೆ ತೆಗೆಯುವಿಕೆಯಿಂದ ಹೂವು ಕೊಡಗಿನಲ್ಲಿ ಹಲವಾರು ವರ್ಷಗಳ ಲಿಚ್ಚಿ ಮರಗಳಿದ್ದು, ಪ್ರತಿ ವರ್ಷ ಹೂವು ಬಿಡುತ್ತಿಲ್ಲ ಎಂದು ಬೆಳೆಗಾರರು ಹೇಳುತ್ತಾರೆ. ಆದ್ದರಿಂದ ಲಿಚ್ಚಿ ಮರದಲ್ಲಿ ತೊಗಟೆ ತೆಗೆಯುವ ವಿಧಾನವನ್ನು ಬಳಿಸಿದ್ದಲ್ಲಿ ಪ್ರತಿ ವರ್ಷ ಹೂವು ಆಗುತ್ತದೆ. ಈ ವಿಧಾನ ಯಶಸ್ವಿ ಕೂಡ ಆಗಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಲಿಚ್ಚಿ ಗಿಡಗಳನ್ನು ಬೆಳೆಯಲು ಪೂರಕವಾದ ವಾತಾವರಣವಿದೆ. ಗೋಟಿ ವಿಧಾನದ ಮೂಲಕ ಗಿಡಗಳನ್ನು ಅಭಿವೃದ್ಧಿ ಮಾಡಿ ರೈತರಿಗೆ ವಿತರಣೆ ಮಾಡುತ್ತಿದ್ದೇವೆ. ನಾಟಿ ಮಾಡಿದ ನಾಲ್ಕು ವರ್ಷದ ಬಳಿಕ ಫಸಲು ಆರಂಭವಾಗುತ್ತದೆ. ಎಂಟು ವರ್ಷಗಳ ಬಳಿಕ 60 ಕೆ.ಜಿ. ಮೇಲ್ಪಟ್ಟು ಇಳುವರಿಯನ್ನು ಪಡೆಯಬಹುದು ಎಂದು ಹಣ್ಣಿನ ವಿಜ್ಞಾನಿ ಮುರುಳೀಧರ್ ಹೇಳುತ್ತಾರೆ.ಬಾಕ್ಸ್...ಲಿಚ್ಚಿಗೆ ಭಾರಿ ಬೇಡಿಕೆ!
ಉತ್ತರ ಭಾರತದಲ್ಲಿ ಹೆಚ್ಚು ಲಿಚ್ಚಿಯನ್ನು ಬೆಳೆಯುತ್ತಾರೆ. ಅಲ್ಲಿನ ರೈತರಿಗೆ ಕೆ.ಜಿಗೆ 70ರಿಂದ 100 ರುಪಾಯಿ ಸಿಗುತ್ತದೆ. ಆದರೆ ನಮ್ಮ ಪ್ರದೇಶದಲ್ಲಿ ಆಫ್ ಸೀಸನ್ ಲಿಚ್ಚಿಯಿಂದಾಗಿ ಪ್ರತಿ ಕೆ.ಜಿಗೆ 200ರಿಂದ 250 ರು. ವರೆಗೆ ರೈತರಿಗೆ ಆದಾಯ ದೊರಕುತ್ತದೆ. ಆದ್ದರಿಂದ ಇದು ಲಾಭದಾಯಕವಾದ ಹಣ್ಣಿನ ಕೃಷಿಯಾಗಿದೆ. ಈ ಹಣ್ಣಿಗೆ ಭಾರಿ ಬೇಡಿಕೆ ಇದ್ದು, ಉತ್ಪಾದನೆ ಹೆಚ್ಚಳವಾಗಬೇಕಿದೆ ಎಂಬುದು ಹಣ್ಣಿನ ವಿಜ್ಞಾನಿಗಳ ಅಭಿಪ್ರಾಯ. ಲಿಚ್ಚಿ ಭರ್ಜರಿ ಮಾರಾಟ!ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದಲ್ಲಿ ಸುಮಾರು 60ಕ್ಕೂ ಅಧಿಕ ಲಿಚ್ಚಿ ಮರಗಳಿದ್ದು, ಈ ಬಾರಿ ಅಧಿಕ ಫಸಲು ನೀಡಿದೆ. ಲಿಚ್ಚಿಯನ್ನು ಟೆಂಡರ್ ನೀಡಲಾಗಿದ್ದು, ಟೆಂಡರ್ ದಾರರು ಕೆ.ಜಿಯೊಂದಕ್ಕೆ ರು.250 ರುಪಾಯಿಗೆ ಮಾರಾಟ ಮಾಡುತ್ತಿದ್ದು, ಲಾಭ ಗಳಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಕೂಡ ಲಿಚ್ಚಿಯನ್ನು ಖರೀದಿಸಿದರು.
ಉತ್ತರ ಭಾರತದಲ್ಲಿ ಶೇ.98ರಷ್ಟು ಲಿಚ್ಚಿ ಉತ್ಪಾದನೆ ಆಗುತ್ತಿದೆ. ಕರ್ನಾಟಕ ಹಾಗೂ ಕೇರಳದಲ್ಲಿ ಲಿಚ್ಚಿ ಬೆಳೆಯಲು ಪೂರಕವಾದ ವಾತಾವರಣವಿದೆ. ಆದ್ದರಿಂದ ಆಫ್ ಸೀಸನ್ ಲಿಚ್ಚಿ ಬೆಳೆಯುವುದರಿಂದ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮಲ್ಲಿ ಶಾಯಿ ತಳಿ ಲಿಚ್ಚಿ ಉತ್ತಮವಾಗಿ ಬೆಳೆಯುತ್ತದೆ- ಮುರುಳೀಧರ, ಹಣ್ಣಿನ ವಿಜ್ಞಾನಿ ಚೆಟ್ಟಳ್ಳಿ