ಕುಷ್ಟಗಿ: ಬರದ ಛಾಯೆಯಲ್ಲಿ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದರೂ ಕುಷ್ಟಗಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದನ್ನು ಖಂಡಿಸಿ ಕರ್ನಾಟಕ ರೈತ ಪ್ರಾಂತ ಸಂಘದ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ಬುಧವಾರದಿಂದ ಪಾದಯಾತ್ರೆ ನಡೆಸಿ ಗುರುವಾರ ಕುಷ್ಟಗಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷೆ ಸಂಗಮ್ಮ ಗುಳಗೌಡ್ರು ಮಾತನಾಡಿ, ರೈತ ಕುಟುಂಬಗಳು ಮಕ್ಕಳ ಶಿಕ್ಷಣ ಹಾಗೂ ಊಟಕ್ಕೂ ಹಣವಿಲ್ಲದೆ ಸಂಕಷ್ಟದಲ್ಲಿವೆ. ಹಲವು ಕುಟುಂಬಗಳು ಬೀದಿಗೆ ಬರುವಂತಾಗಿದೆ. ಗಂಗಾವತಿ, ಕಾರಟಗಿ ಭಾಗದಲ್ಲಿ ನೀರಾವರಿ ಸೌಲಭ್ಯವಿದ್ದರೂ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಕುಷ್ಟಗಿಯನ್ನು ಕೈಬಿಟ್ಟಿರುವುದು ಯಾವ ಮಾನದಂಡ ಎಂದು ಪ್ರಶ್ನಿಸಿದರು.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸಮೀಕ್ಷೆ ನಡೆಸದೆ ರೈತರ ಹೊಲಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರ ಪರಿಸ್ಥಿತಿಯನ್ನು ಅರಿತಿರುವ ರೈತರ ಮಕ್ಕಳನ್ನೇ ಸಮೀಕ್ಷೆಗೆ ಕಳುಹಿಸಿದರೆ ನೈಜ ಚಿತ್ರಣ ಸಿಗಲಿದೆ ಎಂದರು.ಸಂಘದ ಮುಖಂಡ ಆರ್.ಕೆ. ದೇಸಾಯಿ ಮಾತನಾಡಿ, ನೀರಾವರಿ ಪ್ರದೇಶಗಳನ್ನೂ ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಆದರೆ ಬರದ ಹೊಡೆತಕ್ಕೆ ಸಿಲುಕಿರುವ ಕುಷ್ಟಗಿಯನ್ನು ಕಡೆಗಣಿಸಲಾಗುತ್ತಿದೆ. ರೈತರ ವಿಚಾರದಲ್ಲಿ ಸರ್ಕಾರಕ್ಕೆ ನಿರ್ಲಕ್ಷ್ಯ ಧೋರಣೆ ಇದೆ ಎಂದು ಆರೋಪಿಸಿದರು.
ರೈತ ಶೇಷರಾವ್ ಮಾತನಾಡಿ, ಬರಗಾಲ ಸಮೀಕ್ಷೆ ಕುರಿತು ಅಧಿಕಾರಿಗಳು ಅವೈಜ್ಞಾನಿಕ ವರದಿ ಸಲ್ಲಿಸಿದ್ದಾರೆ. ಹೊಲದ ವಾಸ್ತವ ಪರಿಸ್ಥಿತಿ ಪರಿಗಣಿಸದೆ ವರದಿ ಸಿದ್ಧಪಡಿಸಲಾಗುತ್ತಿದ್ದು, ಇದರಲ್ಲಿ ರಾಜಕೀಯ ಹುನ್ನಾರವಿದೆ ಎಂಬ ಅನುಮಾನವಿದೆ ಎಂದು ಆರೋಪಿಸಿದರು.
ಅಧಿಕಾರಿಗಳಿಗೆ ತರಾಟೆ: ಬರಗಾಲ ಸಮೀಕ್ಷೆ ಕುರಿತು ರೈತರು ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ನಮ್ಮ ಹೊಲಗಳಿಗೆ ಬಂದು ನೋಡಿ; ಕಚೇರಿಯಲ್ಲಿ ಕುಳಿತು ಬರದ ಪ್ರಮಾಣ ನಿರ್ಧರಿಸಬೇಡಿ’ ಎಂದು ಒತ್ತಾಯಿಸಿ, ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ 45,437 ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ನಿಯಮಾನುಸಾರ ಬೆಳೆ ಆಯ್ಕೆ ಮಾಡಿ ಯಾವುದೇ ಮೋಸವಾಗದಂತೆ ಶೇಕಡಾವಾರು ಪರಿಹಾರ ನೀಡಲಾಗುವುದು. ರೈತರು ಆತಂಕಪಡಬಾರದು ಎಂದರು.