ತಂಬಾಕಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

KannadaprabhaNewsNetwork |  
Published : Jan 06, 2026, 01:45 AM IST
೫ಕೆಎಂಎನ್‌ಡಿ-೧ತಂಬಾಕಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ವಿವಿಧ ಜಿಲ್ಲೆಗಳ ನೂರಾರು ರೈತರು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಅಡಿಯಲ್ಲಿ ಬರುವ ತಂಬಾಕು ಮಂಡಳಿ ತಂಬಾಕು ರಫ್ತು ಹಾಗೂ ಬೇಡಿಕೆಗಳನ್ನು ಪೂರೈಸಿ ಸರಿದೂಗಿಸುವ ಕೆಲಸ ಮಾಡುತ್ತಿದೆ. ವಿಶೇಷವಾಗಿ ಎಫ್‌ಸಿಎ ತಂಬಾಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ತಂಬಾಕು ರಫ್ತು ಮಾರುಕಟ್ಟೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಂಬಾಕು ಬೆಳೆಗೆ ವೈಜ್ಞಾನಿಕ ಬೆಲೆ ನೀಡುವ ಮೂಲಕ ತಂಬಾಕು ಬೆಳೆಗಾರರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ರೈತರು, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಹಾಯಕರಿಗೆ ಮನವಿ ಸಲ್ಲಿಸಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಅಡಿಯಲ್ಲಿ ಬರುವ ತಂಬಾಕು ಮಂಡಳಿ ತಂಬಾಕು ರಫ್ತು ಹಾಗೂ ಬೇಡಿಕೆಗಳನ್ನು ಪೂರೈಸಿ ಸರಿದೂಗಿಸುವ ಕೆಲಸ ಮಾಡುತ್ತಿದೆ. ವಿಶೇಷವಾಗಿ ಎಫ್‌ಸಿಎ ತಂಬಾಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ತಂಬಾಕು ರಫ್ತು ಮಾರುಕಟ್ಟೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ತಂಬಾಕು ಬೆಳೆಗಾರರಿಗೆ ಗರಿಷ್ಠ ೧೦೦ ಮಿಲಿಯನ್ ಕೆಜಿ ತಂಬಾಕು ಬೆಳೆಯಲು ಅನುಮತಿ ನೀಡಿದ್ದು, ಕಳೆದ ಮೇ, ಜೂನ್, ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ತಂಬಾಕು ಉತ್ಪಾದನೆಗೆ ಹಿನ್ನಡೆ ಉಂಟಾಗಿದೆ. ಈಗ ೮೦ ರಿಂದ ೮೫ ಮಿಲಿಯನ್ ಕೆಜಿ ತಂಬಾಕು ಉತ್ಪಾದಿಸುವ ಆಶಾಭಾವನೆ ಹೊಂದಿದೆ. ಕರ್ನಾಟಕ ತಂಬಾಕು ಬೆಳೆಗಾರರಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು, ತಂಬಾಕು ಮಂಡಳಿ ಬೆಲೆ ಕಡಿತ ಮಾಡುವ ಧೋರಣೆಯಿಂದಾಗಿ ಹಿನ್ನಡೆ ಉಂಟಾಗಿದೆ ಎಂದು ಆರೋಪಿಸಿದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ರಾಮನಾಥಪುರ, ಎಚ್.ಡಿ.ಕೋಟೆ ಹಾಗೂ ಮೂರು ಮುಖ್ಯ ಜಿಲ್ಲೆಗಳಾದ ಮೈಸೂರು, ಹಾಸನ ಮತ್ತು ಚಾಮರಾಜನಗರಗಳಲ್ಲಿ ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ. ೪೦ ಸಾವಿರಕ್ಕೂ ಹೆಚ್ಚಿನ ನೋಂದಾಯಿತ ತಂಬಾಕು ಬೆಳೆಗಾರರು ೫೦ ಸಾವಿರ ಬ್ಯಾರನ್‌ಗಳನ್ನು ಹೊಂದಿದ್ದು, ಸುಮಾರು ೬೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಾರೆ. ತಂಬಾಕು ಮಂಡಳಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಬೆಲೆ ಕಡಿಮೆ ಇರುವುದರಿಂದ ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕದ ತಂಬಾಕು ಬೆಳೆಗೆ ಹೆಚ್ಚಿನ ಬೇಡಿಕೆ ಇದೆ. ಉತ್ತಮ ರೀತಿಯ ಹಾಗೂ ಆದರ್ಶ ಆಯಿಲ್ ನಿಕೋಟಿನ್ ಅಂಶ ಹಾಗೂ ಅತ್ಯಲ್ಪ ಕಡಿಮೆ ಕ್ಲೋರೈಡ್ ಬಂದಿದೆ. ಅದರಲ್ಲೂ ವಿಶೇಷವಾಗಿ ಕಚ್ಚಾ ಪದಾರ್ಥಗಳಾದ ಪ್ರಾರಂಭಿಕ ಖರ್ಚಿನ ರಸಗೊಬ್ಬರ, ಟ್ರೇಗಳು ಮತ್ತು ಕೋಕೋಫಿಟ್ ಔಷಧಗಳು, ಬಿತ್ತನೆ ಬೀಜ ಮತ್ತು ಕಾರ್ಮಿಕರ ಕೂಲಿ ಎಲ್ಲವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ತಂಬಾಕು ಬೆಳೆ ಕಟಾವು ಮಾಡಿದ ನಂತರ ಅದನ್ನು ಬೇಯಿಸಲು ಸೌದೆ ಖರ್ಚು, ಕೂಲಿ, ಬೇಲ್ ಮಾಡುವುದು ಮತ್ತಿತರ ಅಂತಿಮ ಹಂತದ ಖರ್ಚುಗಳೂ ಹೆಚ್ಚಾಗಿವೆ. ಈ ಹಿಂದೆ ಪ್ರತಿ ಕೆಜಿಗೆ ೩೫೦ ರೂ.ಗಳಿಗೆ ರೈತರಿಂದ ಖರೀದಿಸಲಾಗುತ್ತಿತ್ತು. ಕಳೆದ ಸಾಲಿನಲ್ಲಿ ೨೫೦ ರು. ಸರಾಸರಿ ಬೆಲೆಗೆ ತಂಬಾಕನ್ನು ಖರೀದಿಸಿದ್ದಾರೆ. ಇದು ತಂಬಾಕು ಉತ್ಪಾದನಾ ವೆಚ್ಚ ೨೨೦ ರು. ಇದ್ದು, ಪ್ರತಿ ಕೆಜಿಗೆ ಕೇವಲ ೩೦ ರೂ. ಆದಾಯವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ತಂಬಾಕು ನಿಯಮಗಳಲ್ಲಿ ಪ್ರಮುಖ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ. ತಂಬಾಕು ಮಂಡಳಿಯು ರೈತರ ಹಿತವನ್ನು ಕಾಪಾಡಲು ಬೆಳೆ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅಧಿಕ ಉತ್ಪಾದಕ ತಂಬಾಕಿಗೆ ವೈಜ್ಞಾನಿಕ ರೀತಿಯಲ್ಲಿ ದಂಡವನ್ನು ವಿಧಿಸಬೇಕಾಗಿದೆ. ಇದರಿಂದ ಅಧಿಕ ಉತ್ಪಾದಕ ರಾಜ್ಯಗಳಿಗೆ ಬೆಳೆ ನಿಯಂತ್ರಣದ ಸೂತ್ರ ಜಾರಿಯಾದರೆ ಅಧಿಕ ಉತ್ಪಾದನೆ ಕಡಿಮೆಯಾಗುವ ನಿರೀಕ್ಷೆ ಇದೆ. ಹೀಗಾಗಿ ವೈಜ್ಞಾನಿಕ ದರ ನಿಗದಿಪಡಿಸಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿದರು.

ರೈತ ಮುಖಂಡರಾದ ಎಚ್.ಬಿ.ಕೃಷ್ಣೇಗೌಡ, ಎಸ್.ಕೆ.ಯೋಗಣ್ಣ, ರಮೇಶ, ಪ್ರದೀಪ, ಎಸ್.ಬಿ. ಬಲರಾಮೇಗೌಡ, ರವಿ, ವಿವೇಕ್, ರವಿಕುಮಾರ್, ಆಂಜನೀಗೌಡ, ಲತಾಶಂಕರ್, ಕೆ.ಬಿ. ಜಯಣ್ಣ, ಚನ್ನಯ್ಯ ಸೇರಿದಂತೆ ನೂರಾರು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ