ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ರೈತರ ಪ್ರತಿಭಟನೆ

KannadaprabhaNewsNetwork | Published : Dec 5, 2023 1:30 AM

ಸಾರಾಂಶ

ಮುಂಡರಗಿ ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಪ್ರತಿಭಟಿಸಿದರು. ತಹಸೀಲ್ದಾರ್‌ ಕಚೇರಿ ಮುಂದಿನ ರಸ್ತೆಯಲ್ಲಿ ಕೆಲ ಹೊತ್ತು ರಸ್ತೆ ಸ್ಥಗಿತಗೊಳಿಸಿ ಬೇಡಿಕೆಗೆ ಆಗ್ರಹಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ಎಕರೆಗೆ 25 ಸಾವಿರ ರು. ಪರಿಹಾರಕ್ಕೆ ಬೇಡಿಕೆಮುಂಡರಗಿ: ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಪ್ರತಿಭಟಿಸಿದರು.

ತಹಸೀಲ್ದಾರ್‌ ಕಚೇರಿ ಮುಂದಿನ ರಸ್ತೆಯಲ್ಲಿ ಕೆಲ ಹೊತ್ತು ರಸ್ತೆ ಸ್ಥಗಿತಗೊಳಿಸಿ ಬೇಡಿಕೆಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ರೈತ ಸಂಘ ಅಧ್ಯಕ್ಷ ಶರಣಪ್ಪ ಕಂಬಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರು.ಗಳ ಪರಿಹಾರ ನೀಡಬೇಕು, ಬೆಳೆ ವಿಮೆಯನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು, ಕೃಷಿಗೆ ಸಂಬಂಧಿಸಿದ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು, ರೈತರ ಸಾಲಮನ್ನಾ ವಿಚಾರದಲ್ಲಿ ಪ್ರಧಾನಮಂತ್ರಿ ಹೆಚ್ಚಿನ ಮುತುರ್ವಜಿವಹಿಸಬೇಕು ಎಂದು ಒತ್ತಾಯಿಸಿದರು.

ಸರಕಾರ ಬರಗಾಲ ಘೋಷಣೆ ಮಾಡಿ ಎರಡು ತಿಂಗಳು ಕಳೆದರೂ ಸಹ ಇದುವರೆಗೂ ರೈತರಿಗೆ ಯಾವುದೇ ರೀತಿಯ ಪರಿಹಾರ ನೀಡುತ್ತಿಲ್ಲ. ಶೀಘ್ರದಲ್ಲಿಯೇ ರೈತರಿಗೆ ಪರಿಹಾರ ನೀಡುವಂತಾಗಬೇಕು. ಈಗಾಗಲೇ ಭೀಕರ ಬರಗಾಲ ಇರುವುದರಿಂದ ದನಗಳಿಗೆ ತಿನ್ನಲು ಹೊಟ್ಟು, ಮೇವು, ಕುಡಿಯಲು ನೀರಿಲ್ಲದೇ ತೊಂದರೆ ಅನುಭವಿಸುವಂತಾಗಿದ್ದು, ಕೂಡಲೇ ವ್ಯವಸ್ಥೆ ಮಾಡಬೇಕು.

ರೈತರಿಗಾಗಿ ಸರಕಾರ ನೀಡುವ ಪರಿಹಾರ, ಬೆಳೆವಿಮೆ ಹಾಗೂ ವಿಧವಾ, ವೃದ್ಧಾಪ್ಯ ವೇತನವನ್ನು ರೈತರ ವಿವಿಧ ಸಾಲಕ್ಕೆ ಪಾವತಿ ಮಾಡಿಕೊಳ್ಳುತ್ತಿದ್ದು, ಅದನ್ನು ತಕ್ಷಣವೇ ನಿಲ್ಲಿಸಬೇಕು. ಮುಂಡರಗಿ ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರಿಗೆ ಕುಡಿಯುವ ನೀರಿಲ್ಲ, ರೈತರಿಗೆ ಎಲ್ಲ ರೀತಿಯ ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ನಂತರ ಸಲ್ಲಿಸಿದ ಮನವಿಯಲ್ಲಿ ಈ ಬಾರಿ ಮುಂಗಾರು, ಹಿಂಗಾರು ಸಂಪೂರ್ಣ ವಿಫಲವಾಗಿ ಭೀಕರ ಬರಗಾಲವಿರುವುದರಿಂದ ರೈತರು ಸಾಕಷ್ಟು ಸಾಲಸೂಲ ಮಾಡಿಕೊಂಡಿದ್ದು, ಸರಕಾರ ತಕ್ಷಣವೇ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಚಂದ್ರಕಾಂತ ಉಳ್ಳಾಗಡ್ಡಿ, ಅಶ್ವಿನಿ ಗೌಡರ, ಶಿವಪ್ಪ ಸಬರದ, ಈರಣ್ಣ ಶೀರಿ, ಅಶೋಕ ಬನ್ನಿಕೊಪ್ಪ, ಮಂಜಪ್ಪ ಹುಯಿಲಗೋಳ, ದೇವಪ್ಪ ಕೋವಿ, ಷಣ್ಮುಕಪ್ಪ ಹಾಳಕೇರಿ, ರಾಘವೇಂದ್ರ ಕುರಿ, ಅಣ್ಣಪ್ಪ ಡಂಬಳ, ಭೀಮಸೇನ್ ಬಂಡಿವಡ್ಡರ ಕಸ್ತೂರಮ್ಮ ಅರಕೇರಿ, ಖೈರುಂಬಿ, ಶಂಕರಗೌಡ ಜಾಯನಗೌಡರ, ದೇವಮ್ಮ, ಹುಸೇನಸಾಬ ಕುರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಎಂ. ಧನಂಜಯ ಸರಕಾರದಿಂದ ಅನುದಾನ ಬಂದ ಕೂಡಲೇ ಪರಿಹಾರ ಒದಗಿಸಲಾಗುವದು ಎಂದರು.

Share this article