ಹರಪನಹಳ್ಳಿ: ಬೆಳೆ ಹಾನಿ ಪರಿಹಾರ, ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಘಟಕದ ಆಶ್ರಯದಲ್ಲಿ ರೈತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಖರೀದಿ ಕೇಂದ್ರ ಆರಂಭಿಸಿ:
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಬೆಳೆಗಳಿಗೆ ಸಾಮಾನ್ಯ ಬೆಂಬಲ ಬೆಲೆ ಪ್ರಕಟಿಸಿ ಕೆಲವು ಬೆಳೆಗಳ ಖರೀದಿಗೆ ದಿನಾಂಕ ನಿಗದಿ ಮಾಡಿ ರೈತರ ನೋಂದಣಿ ಆರಂಭಿಸಿದ್ದರೂ ಖರೀದಿ ಕೇಂದ್ರಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಇದುವರೆಗೂ ಖರೀದಿ ಪ್ರಕ್ರಿಯೆ ಆರಂಭವಾಗಿರುವುದಿಲ್ಲ. ಈಗಾಗಲೇ ಹರಪನಹಳ್ಳಿ ತಾಲೂಕಿನಲ್ಲಿ 1,80,396 ಎಕರೆ ಪ್ರದೇಶದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ರೈತರು ಮೆಕ್ಕೆಜೋಳ ಬೆಳೆ ಕಟಾವು ಮುಗಿದಿದೆ. ರೈತರು ದಾಸ್ತಾನು ಮಾಡಿಟ್ಟುಕೊಳ್ಳಲು ಶಕ್ತಿ ಹಾಗೂ ಅನುಕೂಲವಿಲ್ಲದ ಕಾರಣ ಖಾಸಗಿ ವರ್ತಕರು ಮತ್ತು ದಲ್ಲಾಳಿಗಳ ಮಾರುವ ಒತ್ತಡಕ್ಕೆ ಸಿಲುಕಿದ್ದಾರೆ. ಇನ್ನು ಕಟಾವು ಮಾಡಬೇಕಿರುವ ಬೆಳೆಗಳಿಗೆ ಖರೀದಿ ಕೇಂದ್ರಗಳಿಲ್ಲದೆ ಖಾಸಗಿ ವ್ಯಾಪಾರಿಗಳನ್ನು ಅವಲಂಬಿಸುವ ದುಸ್ಥಿತಿಯಲ್ಲಿದ್ದಾರೆ. ಸರ್ಕಾರಗಳು ಕೂಡಲೇ ಹರಪನಹಳ್ಳಿ ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಘೋಷಿಸಿರುವ ಬೆಂಬಲ ಬೆಲೆಯಲ್ಲಿ ರೈತರಿಂದ ಕೊಂಡುಕೊಳ್ಳಲು ಖರೀದಿ ಕೇಂದ್ರಗಳನ್ನು ತೆರೆದು ಕಾರ್ಯಾರಂಭ ಮಾಡಲು ಆದೇಶ ಮತ್ತು ಸೂಚನೆ ನೀಡಬೇಕು ಎಂದರು.ಬಗರ್ ಹುಕುಂ ಸಮಸ್ಯೆ- ಹರಪನಹಳ್ಳಿ ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿರುವ ಭೂರಹಿತ ರೈತರ ಭೂಮಿಯ ಹಕ್ಕುಪತ್ರ ನೀಡುವ ಅಕ್ರಮ ಸಕ್ರಮ ಸಮಿತಿಗಳಲ್ಲಿ ತಾಲ್ಲೂಕಿನಾದ್ಯಂತ ಸಾವಿರಾರು ಅರ್ಜಿಗಳು ಇನ್ನೂ ವಿಲೇವಾರಿಯಾಗದೇ ಸಂಬಂಧಿತ ಸಮಿತಿಗಳನ್ನು ನೇಮಿಸದೇ ಹತ್ತಾರು ವರ್ಷಗಳಿಂದ ಸರ್ಕಾರಗಳು ನಿರ್ಲಕ್ಷ್ಯ ತೋರಿಸಿವೆ. ರೈತರಿಗೆ ಭೂಒಡೆತನ ತ್ರಿಶಂಕು ಸ್ಥಿತಿಯಂತಾಗಿದೆ. ರಾಜ್ಯ ಸರ್ಕಾರ ಈ ದಿವ್ಯ ನಿರ್ಲಕ್ಷ್ಯವನ್ನು ಕೈ ಬಿಟ್ಟು ಬಗರ್ ಹುಕುಂ ಭೂಮಿಗೆ ಹಕ್ಕುಪತ್ರ ನೀಡುವ ಎಲ್ಲ ಪ್ರಕ್ರಿಯೆಗಳನ್ನು ಮೊದಲ ಆದ್ಯತೆಯಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಹನುಮಂತನಾಯ್ಕ, ಡಿ.ಹೆಚ್.ಅರುಣ, ಪ್ರಭುಗೌಡ,ಮತ್ತಿಹಳ್ಳಿ ತಿಂದಪ್ಪ, ಭರಮಪ್ಪ, ಎಚ್.ಹಾಲಪ್ಪ ಅರಸೀಕೆರೆ, ಎ.ಬಿ. ನಾಗರಾಜ ಗೌಡ, ವಿಶಾಲಾಕ್ಷಮ್ಮ ,ಅರಸೀಕೆರೆ ರಂಗಪ್ಪ, ದುರುಗಪ್ಪ, ಎಂ.ಬಸವರಾಜ, ಬೊಮ್ಮಲಿಂಗಪ್ಪ ಮಾದಿಹಳ್ಳಿ, ನಿಂಗಪ್ಪ ಹೊಸಕೋಟೆ ಇದ್ದರು.