ಕಡಲೆ ಬಾಕಿ ಹಣಕ್ಕಾಗಿ ರೈತರ ಪ್ರತಿಭಟನೆ, ಇಬ್ಬರು ರೈತ ಮಹಿಳೆಯರಿಂದ ವಿಷ ಸೇವನೆ

KannadaprabhaNewsNetwork |  
Published : Jan 09, 2025, 12:49 AM IST
ರೈತ ಮಹಿಳೆಯರನ್ನು ರಕ್ಷಿಸುತ್ತಿರುವ ಮಹಿಳಾ ಪೊಲೀಸರು. | Kannada Prabha

ಸಾರಾಂಶ

ಪ್ರತಿಭಟನೆ ಗಂಟೆಗಳ ಕಾಲ ನಡೆದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಹೆಚ್ಚಾಗ ತೊಡಗಿತು.

ಗದಗ: ಕಡಲೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ನಡೆಸುತ್ತಿರುವ ಅಹೋ ರಾತ್ರಿ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದಲ್ಲದೇ ಬುಧವಾರ ತೀವ್ರ ಸ್ವರೂಪ ಪಡೆದುಕೊಂಡು ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತು ಇಬ್ಬರು ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿತು.

ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿದ್ದ ಪೊಲೀಸರು, ರೈತ ಹೋರಾಟಗಾರರು ಅವರನ್ನು ತಡೆದು ಅವರ ಕೈಯ್ಯಲ್ಲಿದ್ದ ವಿಷದ ಬಾಟಲಿಯನ್ನು ಕಸಿದು, ಅಲ್ಲಿಯೇ ಇದ್ದ ಆ್ಯಂಬುಲೆನ್ಸ್‌ ಮೂಲಕ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು

ಎರಡನೇ ದಿನ ರೈತ ಹೋರಾಟಗಾರರು ಜಿಲ್ಲಾಡಳಿತ ಭವನದ ಗೇಟ್‌ಗೆ ಜಾನುವಾರು ಕಟ್ಟಿ, ಮೇವು ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿನ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಗಂಟೆಗಳ ಕಾಲ ನಡೆದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಹೆಚ್ಚಾಗ ತೊಡಗಿತು.

ಹೆದ್ದಾರಿಯಲ್ಲಿ ಹೊರಳಾಡಿ ಪ್ರತಿಭಟನೆ: ಹೆದ್ದಾರಿ ಮಧ್ಯದಲ್ಲಿಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರು ಸರ್ಕಾರದ ನಡೆ ಖಂಡಿಸಿ ಹೆದ್ದಾರಿಯಲ್ಲಿ ಹೊರಳಾಡಿ (ಉರುಳು ಸೇವೆ ರೀತಿ) ಆಕ್ರೋಶ ವ್ಯಕ್ತಪಡಿಸಿ ಶವದ ಮುಂದೆ ಅಳುವಂತೆ ಸರ್ಕಾರವೇ ಸತ್ತು ಹೋಗಿದೆ ಎಂದು ಬೊಬ್ಬೆ ಹಾಕಿ ಅಳುತ್ತಲೇ ಪ್ರತಿಭಟನೆ ಮಾಡಿದರು. ಈ ವೇಳೆ ಹೆದ್ದಾರಿಯಲ್ಲಿ ಹೊರಳಾಡುತ್ತಿದ್ದ ರೈತ ಮಹಿಳೆಯರನ್ನು ಸಮಾಧಾನ ಪಡಿಸಲು ಮಹಿಳಾ ಪೊಲೀಸ್ ಸಿಬ್ಬಂದಿ ಪರದಾಡಿದರು.

ಪ್ರತಿಭಟನಾ ಸ್ಥಳದಲ್ಲಿ ರೈತರು ಬಾರುಕೋಲು ಮೂಲಕ ಚಾಟಿ ಬೀಸಿ, ಒನಕೆ ಹಿಡಿದು, ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ಬಂದ್ ಮಾಡಿ, ವಾಹನ ತಡೆದು ಪ್ರತಿಭಟನೆ ನಡೆಸಿದರಲ್ಲದೇ ಕಡಲೆ ಬೆಳೆ ಬಾಕಿ ಹಣ ನೀಡದೇ ಅನ್ನದಾತರನ್ನು ಸತಾಯಿಸುತ್ತಿರುವ ಸರ್ಕಾರದ ವಿರುದ್ಧ ಬಾಯಿ ಬಡಿದುಕೊಂಡು ಆಕ್ರೋಶ ಹೊರಹಾಕಿದರು.

ಇಬ್ಬರು ರೈತ ಮಹಿಳೆಯರಿಂದ ವಿಷ ಸೇವನೆ: ರೈತ ಮಹಿಳೆಯರು ಹೆದ್ದಾರಿಯಲ್ಲಿ ಹೊರಳಾಡಿದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ಮಹಿಳೆಯೋರ್ವಳು ಏಕಾಏಕಿ ಕೈಯಲ್ಲಿದ್ದ ಬಾಟಲಿ ತೆಗೆದು ವಿಷ ಸೇವನೆ ಮಾಡಿದರು. ಇದರಿಂದ ಅಲ್ಲಿದ್ದ ಎಲ್ಲ ಪ್ರತಿಭಟನಾಕಾರರು ವಿಚಲಿತರಾಗಿ ಅವರತ್ತ ತೆರಳುತ್ತಿದ್ದಂತೆ ಇನ್ನೋರ್ವ ಮಹಿಳೆಯೂ ವಿಷ ಸೇವಿಸುತ್ತಿದ್ದಂತೆ ಕೋಲಾಹಲವೇ ಸೃಷ್ಟಿಯಾಯಿತು.

ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಗೂ ಹಿರಿಯ ಅಧಿಕಾರಿಗಳು ಮಹಿಳೆಯರ ಕೈಯಲ್ಲಿನ ವಿಷದ ಬಾಟಲ್ ಕಿತ್ತುಕೊಳ್ಳಲು ಹರಸಾಹಸ ಪಡಬೇಕಾಯಿತು. ತಕ್ಷಣವೇ ಸ್ಥಳದಲ್ಲಿದ್ದ ಆ್ಯಂಬುಲೆನ್ಸ್ ಮೂಲಕ ವಿಷಸೇವನೆ ಮಾಡಿದ್ದ ರೈತ ಮಹಿಳೆಯರಾದ ಸರಸ್ವತಿ ದಾಸರ, ಗೀತಾ ಬಾಲಪ್ಪನವರ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ರಸ್ತೆ ತಡೆ ಹಿಂದಕ್ಕೆ:ರೈತ ಮಹಿಳೆಯರು ವಿಷ ಸೇವನೆಯಿಂದ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಎಸ್ಪಿ ಬಿ.ಎಸ್. ನೇಮಗೌಡ್ರ ಸ್ಥಳಕ್ಕೆ ಆಗಮಿಸಿ ರೈತ ಮಹಿಳೆಯರ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ನಿಮ್ಮ ಸಮಸ್ಯೆಯ ಕುರಿತು ಚರ್ಚಿಸಲು ಜಿಪಂ ಸಿಇಓ ಅವರನ್ನೇ ಇಲ್ಲಿಗೆ ಕರೆಸಲಾಗುವುದು, ಅವರೊಂದಿಗೆ ಚರ್ಚಿಸಿ ಎಂದು ಮನವೊಲಿಸಿದ ನಂತರ ರಸ್ತೆ ತಡೆ ಹಿಂದಕ್ಕೆ ಪಡೆದು ಮಾತುಕತೆಗೆ ಮುಂದಾದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್‌ಆರ್‌ಎಲ್‌ಎಂ) ಗದಗ ಒಕ್ಕೂಟದಡಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಎನ್‌ಆರ್‌ಎಲ್‌ಎಂ ಜಿಪಂ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಮೆಳವಣಿಕಿ ಹಾಗೂ ತಾಲೂಕು ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ದಾವಣಗೆರೆಯ ಮಾರುತಿ ಗೌಡ ಎಂಬುವವರೊಂದಿಗೆ ಮಧ್ಯಸ್ಥಿಕೆ ವಹಿಸಿ ಮೂರು ತಿಂಗಳಲ್ಲಿ ಅಂದಾಜು ₹27 ಕೋಟಿ ಮೌಲ್ಯದ ಕಡಲೆಯನ್ನು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೊಡಿಸಿದ್ದಾರೆ. ಇದರ ಭಾಗವಾಗಿ ₹ 20 ಕೋಟಿ ಆರ್‌ಟಿಜಿಎಸ್ ಮೂಲಕ ಪಾವತಿಸಿದ್ದು, ಬಾಕಿ ಉಳಿದ ₹ 6.50 ಕೋಟಿ ಪಾವತಿಸುತ್ತಿಲ್ಲ. ಜಿಲ್ಲೆಯ ಗದಗ ಮತ್ತು ಮುಂಡರಗಿ ತಾಲೂಕಿನ 450 ರೈತರಿಂದ ಕಡಲೆ ಖರೀದಿಸಿ 12 ತಿಂಗಳಾದರೂ ಬಾಕಿ ಹಣ ಪಾವತಿಸಿಲ್ಲ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಹಣ ಕೊಡಿಸಬೇಕು ಎಂದು ಹಲವಾರು ರೈತರು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ