ಹಾವೇರಿ: ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಕಿ ಬಿಲ್ಗಾಗಿ ಹೋರಾಟ ನಡೆಸುತ್ತಿರುವ ಕಬ್ಬು ಬೆಳೆಗಾರ ರೈತರ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತು ಸೋಮವಾರ ಕಬ್ಬು ಬೆಳೆಗಾರ ರೈತರು ಮತ್ತು ಗುತ್ತಿಗೆದಾರರ ಮಧ್ಯೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆ ಹೋರಾಟ ಮತ್ತೆ ಮುಂದುವರಿದಿದೆ.ಪ್ರತಿದಿನ ಸಕ್ಕರೆ ಕಾರ್ಖಾನೆಯಿಂದ ಹತ್ತಾರು ಲಾರಿಗಳಲ್ಲಿ ನೂರಾರು ಚೀಲ ಸಕ್ಕರೆ ಮಾರಾಟ ಮಾಡಲಾಗುತ್ತಿದೆ. ಆದಾಗ್ಯೂ ಕಾರ್ಖಾನೆ ಗುತ್ತಿಗೆದಾರರು ರೈತರಿಗೆ ನೀಡಬೇಕಾದ ₹2.32 ಕೋಟಿಯನ್ನು ಬಾಕಿ ಇಟ್ಟುಕೊಂಡಿದ್ದಾರೆ. ಈ ಮೊತ್ತವನ್ನು ಪಾವತಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಇಳಿದಿದ್ದು, ಇದೀಗ ಹೋರಾಟ ಐದನೆ ದಿನಕ್ಕೆ ಕಾಲಿಟ್ಟಿದೆ. ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡಿದ ರೈತರ ಖಾತೆಗಳಿಗೆ ಬಾಕಿ ಹಣ ಹಾಕುವ ವರೆಗೂ ಸಕ್ಕರೆಯನ್ನು ಕಾರ್ಖಾನೆಯಿಂದ ಹೊರಗಡೆ ಸಕ್ಕರೆ ಒಯ್ಯಲು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.ರೈತ ಮುಖಂಡ ಭುವನೇಶ್ವರ ಶಿಡ್ಲಾಪೂರ ಮಾತನಾಡಿ, 2024- 25 ಹಂಗಾಮಿನಲ್ಲಿ 2 ಲಕ್ಷ ಟನ್ ಕಬ್ಬು ಅರೆದಿದ್ದು, ಎಫ್ಆರ್ಪಿ ದರ ಪ್ರತಿ ಟನ್ಗೆ ₹3151 ಪೈಕಿ ₹3035 ಮಾತ್ರ ನೀಡಿದ್ದಾರೆ. ಬಾಕಿ ಪ್ರತಿ ಟನ್ಗೆ ₹116ಗಳನ್ನು ಕಾರ್ಖಾನೆಗೆ ಕಬ್ಬು ನೀಡಿ 7 ತಿಂಗಳು ಕಳೆದರೂ ಸಂದಾಯ ಮಾಡಿಲ್ಲ. ರೈತರಿಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.ಈ ವೇಳೆ ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ರಾಜಶೇಖರ್ ಬೆಟಗೇರಿ, ಫಕ್ಕೀರಪ್ಪ ಕುರುಬರ, ಮಂಜುನಾಥ ಅಸುಂಡಿ, ನಾಗೇಂದ್ರಪ್ಪ ಕೆಂಗೊಂಡ, ಶಂಕರಗೌಡ ಪಾಟೀಲ, ಬಸವರಾಜ ಕೆಂಗೊಂಡ, ಮಹೇಶ ಪಾಟೀಲ, ವೀರೇಶ ಸೋಮಕ್ಕನವರ, ಶಂಕರಗೌಡ ಪಾಟೀಲ, ಸೋಮಣ್ಣ ಹಾವೇರಿ, ರಾಜು ಹೊನ್ನತ್ತಿ, ಕೊಡೆಪ್ಪ ಸಿಂಗಾಪುರ, ನಾಗರಾಜ ಹೊನ್ನತ್ತಿ ಸೇರಿದಂತೆ ಇತರರು ಇದ್ದರು.
ದುಂಡಶಿ ಹೋಬಳಿಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನಶಿಗ್ಗಾಂವಿ: ರೈತರು ಬಿತ್ತನೆ ಮಾಡುವ ಮುನ್ನ ಬೀಜೋಪಚಾರ ಮಾಡುವ ಮೂಲಕ ಬೀಜ ಹಾಳಾಗದಂತೆ ರಕ್ಷಣೆ ಮಾಡಬೇಕು ಎಂದು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಡಾ. ಸಂತೋಷ ಎಚ್.ಎಂ. ತಿಳಿಸಿದರು.ತಾಲೂಕಿನ ದುಂಡಶಿ ಹೋಬಳಿಯ ಕುನ್ನೂರ, ಹೊಸೂರ ಗ್ರಾಮಗಳಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣು ಪರೀಕ್ಷೆ ಮೂಲಕ ಗುಣಮಟ್ಟದ ಕೃಷಿ ಕೈಗೊಳ್ಳಬೇಕು. ಯಾವ ಮಣ್ಣಿನಲ್ಲಿ ಯಾವ ಬೀಜ ಬಿತ್ತಬೇಕು ಎಂಬ ಬಗ್ಗೆ ಸಮೀಪದ ರೈತ ಸಂಪರ್ಕ ಕೇಂದ್ರವಾಗಲಿ ಅಥವಾ ಕೃಷಿ ವಿಶ್ವವಿದ್ಯಾಲಯದ ತಜ್ಞರನ್ನು ಸಂಪರ್ಕಿಸಬಹುದು ಎಂದರು.ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಡಾ. ಪುಷ್ಪಾ ಚೇತನ್ಕುಮಾರ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಹಲವಾರು ಹೂವು, ಹಣ್ಣು ಮತ್ತು ತರಕಾರಿ ಬೀಜಗಳು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ ಹಾಗೂ ಜೈವಿಕ ಗೊಬ್ಬರಗಳು ಜೈವಿಕ ಪೀಡೆ ಮತ್ತು ರೋಗನಾಶಕಗಳು ಲಭ್ಯ ಇವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ವಿಜ್ಞಾನಿ ಡಾ. ಬಸಮ್ಮ ಹಾದಿಮನಿ ಮಾತನಾಡಿ, ಕೆಲವೊಂದು ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ರೈತರು ಸಸ್ಯಗಳಿಗೆ ಬರುವ ರೋಗ ತಡೆಯಬಹುದು ಎಂದರು. ವಿವಿಧ ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ತಿಳಿಸಿದರು.ಆರ್ಥಿಕ ಐಎಫ್ಸಿಒ ಕಂಪನಿಯ ವ್ಯವಸ್ಥಾಪಕ ಶಶಿಧರ ಡ್ರೋನ್ ಮೂಲಕ ರೈತರು ತಮ್ಮ ಹೊಲಗದ್ದೆಗಳಿಗೆ ಔಷಧ ಸಿಂಪಡಣೆ ಬಳಸುವ ತಾಂತ್ರಿಕತೆ ಮಹತ್ವ ತಿಳಿಸಿದರು.
ತಾಲೂಕಿನ ಆರ್ಥಿಕ ಸಾಕ್ಷರತಾ ಕೇಂದ್ರದ ಅಧಿಕಾರಿ ರಾಜು ಕೆಂಭಾವಿ ಅವರು ರೈತರಿಗೆ ಜೀವ ವಿಮೆ ಕುರಿತು ತಿಳಿಸಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಮಾಲತಿ ಆರ್., ನೇತ್ರಾವತಿ ಬಿ., ರೈತ ಸಂಪರ್ಕ ಕೇಂದ್ರ ಅಧಿಕಾರಿ ಶಿವಾನಂದ ದಾವಣಗೆರೆ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರಾಜು ಜಂಗ್ಲೆಪ್ಪನವರ, ದುಂಡಶಿ ಹೋಬಳಿಯ ಕೃಷಿ ಸಖಿಯರು, ರೈತ ಮುಖಂಡರು, ರೈತ ಮಹಿಳೆಯರು ಇದ್ದರು.