ಕನ್ನಡಪ್ರಭ ವಾರ್ತೆ ಶಿರಾ ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ನೂರಾರು ರೈತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬುಕ್ಕಾಪಟ್ಟಣ, ಹುಯಿಲ್ ದೊರೆ, ಕಿಲಾರದಹಳ್ಳಿ, ಸಾಕ್ಷಿಹಳ್ಳಿ, ಹುಯಿಲ್ ದೊರೆ ಕಾವಲ್, ತುಪ್ಪದಕೋಣ, ಕ್ಯಾತೆ ದೇವರಹಟ್ಟಿ, ಹೊಸಹಳ್ಳಿ, ಹೊಸಪಾಳ್ಯದ ರೈತರು ಬೆಸ್ಕಾಂ ಕಚೇರಿಯ ಮುಂದೆ ಸೇರಿ ಬೆಸ್ಕಾಂನ ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ಘೋಷಣೆ ಕೂಗಿ ಪ್ರತಿಭಟಿಸಿ ಬೆಸ್ಕಾಂ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ರೈತ ಸಂಘದ ಮುಖಂಡರಾದ ಕಿಲಾರದಹಳ್ಳಿ ಕಾಂತರಾಜು, ನಗರ ಪ್ರದೇಶಗಳಿಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂ ತೋಟದ ಮನೆಗಳಿಗೆ ಹೊಲದಲ್ಲಿ ಕೆಲಸ ಮಾಡುವ, ಹೊಲದಲ್ಲಿ ನೆಲೆಸಿರುವ ರೈತರುಗಳಿಗೆ ಸಮರ್ಪಕ ವಿದ್ಯುತ್ ನೀಡದೆ ರೈತರು, ಮಕ್ಕಳು ಹೊಲದಲ್ಲಿ ಬದುಕುವುದೇ ದುಸ್ತರವಾಗಿದೆ. ಪರೀಕ್ಷೆಯ ಸಮಯವಾಗಿರುವುದರಿಂದ ಮಕ್ಕಳು ಓದಿಕೊಳ್ಳಲು ರಾತ್ರಿ ಹೊತ್ತು ಸಿಂಗಲ್ ಫೇಸ್ ಆದರೂ ಕರೆಂಟ್ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮಹಹಿಸಲು ರೈತರು ವಿನಂತಿಸಿ ಮಾಡಿದರು. ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋವಿಂದರಾಯಪ್ಪ ಮನವಿ ಪತ್ರ ಸ್ವೀಕರಿಸಿದರು. ಬೇಸಿಗೆ ಆದಕಾರಣ ಮುಖ್ಯ ಪೂರೈಕೆ ಘಟಕಗಳು ನಮಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಶಾಖಾಧಿಕಾರಿ ಅಂಜನಪ್ಪ, ಮುಖಂಡರಾದ ಮಾಲಿ ಮಹೇಶ್, ಕ್ಯಾತೆದೇವರ ಹಟ್ಟಿ ಚಿತ್ತಯ್ಯ, ರಂಗನಾಥ ಜೆ, ಜೈರಾಮಭೋವಿ, ಮಹದೇವಪ್ಪ, ರಂಗನಾಥ.ಕೆ.ಎಸ್ ಸೇರಿದಂತೆ ನೂರಾರು ರೈತರು ಹಾಜರಿದ್ದರು. ಫೋಟೊ...... 12ಶಿರಾ3: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ನೂರಾರು ರೈತರು ಅಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ವಿರೋಧಿಸಿ ಬುಕ್ಕಾಪಟ್ಟಣ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಬೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದರು.