ನೀರಾವರಿ ಪಂಪ್ಸೆಟ್ ಕಳವು ಮಾಡಿ ಅದರಳಗಿನ ಅಪಾರ ಬೆಲೆಬಾಳುವ ತಾಮ್ರದ ವೈರ್ ಕಳವು ಮಾಡುತ್ತಿರುವ ಘಟನೆಗಳು ಅಫಜಲ್ಪುರ ತಾಲೂಕಿನ ಭೀಮಾ ನದಿ ತೀರದಲ್ಲಿರುವ ಮಣ್ಣೂರು ನೀರಾವರಿ ರೈತರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ನೀರಾವರಿ ಪಂಪ್ಸೆಟ್ ಕಳವು ಮಾಡಿ ಅದರಳಗಿನ ಅಪಾರ ಬೆಲೆಬಾಳುವ ತಾಮ್ರದ ವೈರ್ ಕಳವು ಮಾಡುತ್ತಿರುವ ಘಟನೆಗಳು ಅಫಜಲ್ಪುರ ತಾಲೂಕಿನ ಭೀಮಾ ನದಿ ತೀರದಲ್ಲಿರುವ ಮಣ್ಣೂರು ನೀರಾವರಿ ರೈತರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ 6 ತಿಂಗಳಿಂದ ಕಳ್ಳರು ಪಂಪ್ಸೆಟ್ಗಳನ್ನೇ ದೋಚುತ್ತಿದ್ದಾರೆ. ನದಿ ತೀರದಲ್ಲಿ ಅಳವಡಿಸಿರುವ ಪಂಪ್ಸೆಟ್ಗಳನ್ನು ಕದ್ದೋ, ಅಲ್ಲೇ ಒಡೆದು ಹಾಕಿಯೋ ಅದರೊಳಗಿನ ಬೆಲೆಬಾಳುವ ತಾಮ್ರದ ಕೇಬಲ್ ದೋಚುತ್ತಿದ್ದಾರೆ.
ಹಿಂದಿನ ಕಳವಾದ ಪಂಪ್ಸೆಟ್ ಗಳ ತನಿಖೆ ಹಾಗೇ ಉಳಿದಿರುವಾಗಲೇ ಇದೀಗ ಮತ್ತೆ ಜು.8ರ ರಾತ್ರಿ ಮಣ್ಣೂರಿನ ನದಿ ಯಲ್ಲಮ್ಮತಾಯಿ ದೇವಾಲಯದ ಹಿಂಭಗದಲ್ಲಿರುವ ಬಾಂದಾರು ಪಕ್ಕದಲ್ಲಿನ 6ಕ್ಕೂ ಹೆಚ್ಚು ನೀರಾವರಿ ಪಂಪ್ಸೆಟ್ಗಳನ್ನು ಒಡೆದು ಅದರೊಳಗಿನ ಕಾಪರ್ ವೈರ್ ಕಳವು ಮಾಡಿರುವ ಘಟನೆ ನಡೆದಿದೆ.
ನದಿಯಲ್ಲಿ ಬಾರಿ ಪ್ರಮಾಣದಲ್ಲಿ ನೀರು ಬಂದಿದೆ. ಇತ್ತ ಮಳೆಯೂ ಸುರಿಯುತ್ತಿದೆ. ಹೀಗಾಗಿ ರೈರು ಕೆಲದಿನದಿಂದ ಪಂಪ್ಸೆಟ್ ಬಳಸದೆ ಹಾಗೇ ಬಿಟ್ಟಿದ್ದರು. ಇದೇ ಸಮಯ ಸಾಧಿಸಿರುವ ಕಳ್ಳರು ರಾತ್ರಿ ಪಂಪ್ಸೆಟ್ಗಳನ್ನು ಬಿಚ್ಚಿ ಅಲ್ಲಿನ ತಾಮ್ರದ ವೈರಿಂಗ್ ಕಿತ್ತು ಪರಾರಿಯಾಗಿದ್ದಾರೆ.
ಸೋಮವಾರ ರಾತ್ರಿ ನಡೆದ ಘನೆಯಲ್ಲಿ ಭೀಮಾಶಂಕರ ನಿಂಗಪ್ಪ ಬಲ್ಲಾ, ಕರೀಮ್ ಮಂಗಲಗಿ ಯಶ್ವಂತಗೌಡ ಕರಜಗಿ, ಶಿವಶರಣಗೌಡ ಕರಡಗಿ, ವಿಶ್ವನಾಥ ಕೊಪ್ಪ ಹಾಗೂ ಉಮ್ಮ ಕರೀಂ ಮಂಗಲಗಿ, ಬಶೀರ್ ಜೈನೋದ್ದೀನ್ ಮಂಗಲಗಿಯವರಿಗೆ ಸೇರಿರುವ 6ಕ್ಕೂ ಹೆಚ್ಚು ನೀರಾವರಿ ಪಂಪ್ಸೆಟ್ಗಳು ಕಳವಾಗಿವೆ.
ಒಂದು ಅಂದಾಜಿನಂತೆ ಸುಮಾರು 4 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಪಂಪ್ಸೆಟ್, ವೈರಿಂಗ್ ಸೇರಿದಂತೆ ಅನೇಕ ಪರಿಕರವನ್ನು ಕಳವು ಮಾಡಲಾಗಿದೆ. ಕಳೆದ 6 ತಂಗಳಲ್ಲಿ ಇದು ಮೂರನೇಯ ಬಾರಿಯ ಕಳವಿನ ಪ್ರಕರಣವಾಗಿದೆ. ಪೊಲೀಸರಿಗೆ ಹಾಗೇ ದೂರು ನೀಡಲಾಗುತ್ತಿದೆ. ಆದರೆ ಕಳ್ಳರ ಪತ್ತೆಯಾಗಿಲ್ಲ ಎಂದು ರೈತರು ಗೋಳಾಡುತ್ತಿದ್ದಾರೆ.
ಕನಿಷ್ಠ ₹40ರಿಂದ ₹60 ಸಾವಿರ ಬೆಲೆಬಾಳುವ ಪಂಪ್ಸೆಟ್ಗಳು ಈ ರೀತಿ ಒಡೆದು, ಹಾನಿ ಮಾಡಿ ಕಾಪರ್ ಕೇಬಲ್ ಕಿತ್ತುಕೊಳ್ಳುತ್ತಿರುವ ಕಳ್ಳರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ್ಕೆ ಒಳಪಡಿಸಬೇಕು. ಇಲ್ಲದೆ ಹೋದಲ್ಲಿ ಕಳವಿನ ಪ್ರಕರಣಗಳು ಹಾಗೇ ತಮ್ಮನ್ನು ಹಾಳು ಮಾಡೋದು ನಿಶ್ಚಿತ ಎಂದು ರೈತ ಬಶೀರ್ ಮಂಗಲಗಿ, ವಿಶ್ವನಾಥ ಕೊಪ್ಪ ಹಾಗೂ ಅನೇಕರು ಕನ್ನಡಪ್ರಭ ಜೊತೆ ಮಾತನಾಡುತ್ತ ಹೇಳಿದ್ದಾರೆ.
ಶೀಘ್ರ ಕಳ್ಳರ ತಂಡ ಪತ್ತೆಗೆ ಕ್ರಮ: ಎಸ್ಪಿ
ಅಫಜಲ್ಪುರ ತಾಲೂಕಿನ ಭೀಮಾ ನದಿ ತೀರದ ಮಣ್ಣೂರು ಸೇರಿದಂತೆ ಸುತ್ತಲಿನ ಊರಲ್ಲಿ ರೈತರು ಬೆಳೆಗಳಿಗ ನೀರುಣಿಸಲು ಇಟ್ಟುಕೊಂಡಿರುವ ಬೆಲೆಬಾಳುವ ಪಂಪ್ಸೆಟ್ಗಳನ್ನು ದೋಚುತ್ತಿರುವ ಕಳ್ಳರ ತಂಡವನ್ನು ಶೀಘ್ರ ಬಂಧಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ತಾವು ಅಫಲ್ಪುರ ಸಿಪಿಐ ಅವರೊಂದಿಗೆ ಮಾತನಾಡಿದ್ದು, ಅವರು ಮುಂದಿನ ಕ್ರಮ ಜರುಗಿಸಲಿದ್ದಾರೆ. ರೈತರಿಗೆ ಅಮೂಲ್ಯವಾಗಿರುವ ಪಂಪ್ಸೆಟ್ಗಳನ್ನು ದೋಚುವವರಿಗೆ ಸುಮ್ಮನೆ ಬಿಡೋದಿಲ್ಲ. ಅಫಜಲ್ಪುರದಲ್ಲಿ ಇದಕ್ಕಾಗಿಯೇ ವಿಶೇಷ ಡ್ರೈವ್ ಮಾಡುವಂತೆ ಅಲ್ಲಿನ ಪೊಲೀಸರಿಗೆ ಸೂಚಿಸುವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
-------------
ವರ್ಷದಲ್ಲಿ ನಾಲ್ಕಾರು ಬಾರಿ ನಾವು ಅಳವಡಿಸಿರುವ ಪಂಪ್ಸೆಟ್ ಕಳವು ಮಾಡಿ, ಹಾನಿಗೊಳಿಸಿ ಕಾಪರ್ ಕೇಬಲ್ ಕಳವು ಮಾಡಲಾಗುತ್ತಿದೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ನಾವು ಗಳಿಸಿದ ಹಣವೆಲ್ಲ ಪಂಪ್ಸೆಟ್ ಖರೀದಿ, ಅಳವಡಿಕೆಗೆ ಹಾಕುವಂತಾಗಿದೆ. ಪೊಲೀಸರು ತಕ್ಷಣ ರೈತರ ನೆರವಿಗೆ ಬರಬೇಕು, ಪಂಪ್ಸೆಟ್ ಕಳ್ಳರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.