ಜಿಲ್ಲಾ ಒಕ್ಕಣೆದಾರರ ಸೌಹಾರ್ದ ಸಹಕಾರದ ಸಂಘದ ಸಮಾವೇಶ
ಖೇಣಿದಾರರು ತಮ್ಮತಮ್ಮಲ್ಲಿಯ ಪೈಪೋಟಿಯನ್ನು ಬಿಟ್ಟು ಜಾಗೃತರಾಗಬೇಕು ಎಂದು ಶಿವಮೊಗ್ಗ ಜಿಲ್ಲಾ ಒಕ್ಕಣೆದಾರರ (ಖೇಣಿದಾರರು) ಸೌಹಾರ್ದ ಸಹಕಾರದ ಸಂಘದ ಅಧ್ಯಕ್ಷ ಕೆ.ವಿ.ಲೋಹಿತ್ ಕಣಿವೆಮನೆ ಹೇಳಿದರು.
ಮಾರಶೆಟ್ಟಿಹಳ್ಳಿಯ ಛತ್ರಪತಿ ಶಿವಾಜಿ ಮರಾಠ ಸಮುದಾಯದಲ್ಲಿ ನಡೆದ ಜಿಲ್ಲಾ ಅಡಕೆ ಖೇಣಿದಾರರ ಸೌಹಾರ್ಧ ಸಹಕಾರ ಸಂಘದ ಸಮಾವೇಶದಲ್ಲಿ ಅವರು ಮಾತನಾಡಿದರು.ಇಡೀ ರಾಜ್ಯದಲ್ಲಿ ಶಿವಮೊಗ್ಗ, ಚಿಕ್ಕಮಂಗಳೂರು, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಅಡಕೆಯನ್ನು ಬೆಳೆಯಲಾಗುತ್ತಿದೆ. ಈ ಪ್ರದೇಶಗಳಲ್ಲಿ ಖೇಣಿದಾರರ ಸಂಖ್ಯೆಯೂ ಹೆಚ್ಚಾಗಿದೆ. ಇದರ ನಡುವೆ ತಾನು ಹೆಚ್ಚು ಖೇಣಿಯನ್ನು ಮಾಡಬೇಕೆಂಬ ಹಠದಿಂದ ಪ್ರತಿಯೊಬ್ಬರೂ ಪೈಪೋಟಿಗೆ ಬಿದ್ದವರಂತೆ ಹೆಚ್ಚು ಬೆಲೆ, ಹೆಚ್ಚು ಒಣ ರಾಶಿ ಅಡಕೆಯನ್ನು ರೈತರಿಗೆ ನೀಡುವಂತೆ ಒಪ್ಪಂದ ಮಾಡಿಕೊಂಡು ಖೇಣಿಯನ್ನು ಮಾಡಿದ್ದಾರೆ. ಅದರೆಂತೆ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ವಿವಿಧ ಕಾರಣಗಳಿಂದ ನಷ್ಟವನ್ನು ಅನುಭವಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿಯ ನಷ್ಟ ಎಲ್ಲಾ ಖೇಣಿದಾರರ ನಿದ್ದೆಗೆಡಿಸಿದೆ ಎಂದರು.
ರಾಜ್ಯದಾದ್ಯಂತ ಅಡಕೆ ಒಕ್ಕಣೆದಾರರ (ಖೇಣಿದಾರರು) ಸೌಹಾರ್ದ ಸಹಕಾರ ಸಂಘವನ್ನು ಸಂಘಟಿಸುವ ಪ್ರಯತ್ನ ಮಾಡಲಾಗುವುದು. ಇನ್ನು ಮುಂದೆ ಖೇಣಿದಾರರು 1 ಎಕರೆ ಅಡಿಕೆ ತೋಟಕ್ಕೆ 25 ಸಾವಿರ ಹಣವನ್ನು ಮಾತ್ರ ಮುಂಗಡ ನೀಡಬೇಕು, ಹಸಿ ಅಡಿಕೆಯನ್ನು ಹೊಸ ಅಡಿಕೆ ಧಾರಣೆಗೆ ಪಟ್ಟಿ ಮಾಡಬೇಕು, 75 ಕೆಜಿ ಹಸಿ ಅಡಕೆಗೆ 1 ಕೆಜಿ ಪೆಚ್ಚು ತೆಗಿಯಬೇಕು ಸೇರಿದಂತೆ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ತಟ್ಟೆಹಳ್ಳಿ ಮಲ್ಲೇಶಪ್ಪ, ರಾಮಚಂದ್ರಪ್ಪ ಮತ್ತು ಅತಾವುಲ್ಲಾ ಮಾತನಾಡಿದರು. ಅರಕೆರೆ ಬಸವರಾಜ್, ಸಂಘದ ಉಪಾಧ್ಯಕ್ಷ ಗುಟ್ಟಳ್ಳಿ ಸಂತೋಷ್, ನಿರ್ದೇಶಕ ಜಂಬೂರು ಆನಂದ್, ಮಾರಶೆಟ್ಟಿಹಳ್ಳಿ ಶ್ರೀನಿವಾಸ್, ಅರಕೆರೆ ಅಮರ್ ಮತ್ತು ಎಸ್.ಎಲ್.ರವಿ, ಎಮ್.ಎಸ್.ಬಸವರಾಜ್, ಅರಬಿಳಚಿಯ ಬೀಮಣ್ಣ, ತಿಮ್ಮಣ್ಣ, ಮಂಜಣ್ಣ, ಬಷೀರ್, ಕೂಡ್ಲಿಗೆರೆ ಮಹೇಶ್, ರುದ್ರೋಜಿರಾವ್, ಅಶೋಕ್ ರಾವ್, ನವೀನ್, ಖೇಣಿದಾರರು ಭಾಗವಹಿಸಿದ್ದರು.