ಜೇನು ಕೃಷಿಯನ್ನು ರೈತರು ಉಪ ಕಸುಬು ಮಾಡಿಕೊಳ್ಳಬೇಕು

KannadaprabhaNewsNetwork |  
Published : Jun 18, 2025, 11:49 PM IST
ಚಿತ್ರ 3 | Kannada Prabha

ಸಾರಾಂಶ

ಕಡಿಮೆ ಬಂಡವಾಳದ ಪರಿಸರ ಸ್ನೇಹಿ ಜೇನು ಸಾಕಾಣಿಕೆಯನ್ನು ಸಮಗ್ರ ಕೃಷಿ ಅಥವಾ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ಪ್ರತಿಯೊಬ್ಬ ರೈತರು ಇದನ್ನು ಒಂದು ಉಪಕಸುಬಾಗಿ ಅಳವಡಿಸಿಕೊಳ್ಳಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.

ತರಬೇತಿ ಕಾರ್ಯಕ್ರಮ । ಆರ್.ರಜನೀಕಾಂತ ಸಲಹೆ । ಕೃಷಿ ಕೇಂದ್ರದಿಂದ ಮಹಿಳೆ, ಯುವ ರೈತರಿಗೆ ವಿಶೇಷ ಜೇನು ಕೃಷಿಯ ಬಗ್ಗೆ ಮಾಹಿತಿ

ಕನ್ನಡಪ್ರಭ ವಾರ್ತೆ ಹಿರಿಯೂರು

ಕಡಿಮೆ ಬಂಡವಾಳದ ಪರಿಸರ ಸ್ನೇಹಿ ಜೇನು ಸಾಕಾಣಿಕೆಯನ್ನು ಸಮಗ್ರ ಕೃಷಿ ಅಥವಾ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ಪ್ರತಿಯೊಬ್ಬ ರೈತರು ಇದನ್ನು ಒಂದು ಉಪಕಸುಬಾಗಿ ಅಳವಡಿಸಿಕೊಳ್ಳಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.

ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಮಹಿಳಾ ಮತ್ತು ಯುವ ರೈತರಿಗೆ ವಿಶೇಷ ಜೇನು ಕೃಷಿಯ ಕುರಿತು ಎರಡು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ಬೆಳೆ ವೈವಿದ್ಯ ಸ್ವಾಭಾವಿಕ ಸಸ್ಯವರ್ಗ ಹವಾಮಾನ ಮತ್ತು ಹೇರಳ ಮಾನವ ಸಂಪನ್ಮೂಲಗಳು ಜೇನು ಕೃಷಿಗೆ ಪೂರಕವಾಗಿವೆ. ಪ್ರಸಿದ್ದ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೈನ್ ಅವರು ಜೇನಿನ ಸಂತತಿ ನಾಶವಾದರೆ ಜೀವರಾಶಿಗಳಿಗೆ ಅಪಾಯವಿದೆ ಎಂದಿದ್ದರು. ಜೇನು ಸಾಕಾಣಿಕೆಯಿಂದ ನಮಗೆ ಉತ್ತಮ ಆರೋಗ್ಯ, ಆದಾಯ, ಉದ್ಯೋಗ ಸೃಜನೆ ಮತ್ತು ಉತ್ತಮ ಪರಿಸರ ಸಮತೋಲನೆಗೆ ಸಹಕಾರಿಯಾಗಲಿದೆ. ಸಕಲ ಪೋಶಕಾಂಷಭರಿತ ಜೇನು ಅತ್ಯುತ್ತಮ ಶಿಶು ಆಹಾರವಾಗಿದ್ದು ಮಕ್ಕಳ ಪೋಷಕಾಂಶ ಕೊರತೆ ನೀಗಿಸಲು ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆ ನೀಗಿಸಲು ಮತ್ತು ರಕ್ತದ ವೃದ್ದಿಗೆ ಪರಿಣಾಮಕಾರಿಯಾಗಿದೆ. ಉತ್ತಮ ಜೇನಿನ ಪ್ರಾಮುಖ್ಯತೆ ಮತ್ತು ಜೇನು ಸಾಕಾಣಿಕೆಯ ತಾಂತ್ರಿಕತೆಯ ಕುರಿತು ಅರಿವು ಮೂಡಿಸುವುದು ಈ ತರಬೇತಿಯ ಉದ್ದೇಶವಾಗಿದ್ದು ರೈತರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜೇನು ತಜ್ಞ ಶಾಂತವೀರಯ್ಯ ಮಾತನಾಡಿ, ಜೇನು ತಳಿಗಳಲ್ಲಿ ಹೆಜ್ಜೇನು ಮತ್ತು ಕೋಲ್ಜೇನುಗಳನ್ನು ಸಾಕಲು ಬರುವುದಿಲ್ಲ. ಆದರೆ ತುಡುವೆ ಜೇನು, ಮೆಲ್ಲಿಫೆರಾ ಮತ್ತು ಮುಝಂಟಿ (ನಸರಿ) ಜೇನು ಸಾಕಲು ಯೋಗ್ಯವಾಗಿವೆ. ಕೆಲಸಗಾರ ತುಡವೆ ಜೇನು ನೊಣಗಳ ಆಹಾರ ತರುವ ಕಾರ್ಯವ್ಯಾಪ್ತಿಯು ಗೂಡಿನಿಂದ 1 ರಿಂದ 1ವರೆ ಕಿಮೀ ಆಗಿರುತ್ತದೆ. ಮೆಲ್ಲಿಫೆರ ಜೇನು ನೊಣಗಳು ಗೂಡಿನಿಂದ 2-3 ಕಿಮೀ ವರೆಗೂ ಹೋಗಿ ಆಹಾರವನ್ನು ಹೊತ್ತು ತರುತ್ತವೆ. ಪರಕೀಯ ಪರಾಗ ಸ್ಪರ್ಶದ ಶೇ.90 ರಷ್ಟು ಕ್ರಿಯೆ ಕೀಟಗಳಿಂದಾದರೆ ಅದರ ಶೇ.90 ಭಾಗ ಕೇವಲ ಜೇನ್ನೊಣಗಳಿಂದ ಆಗುತ್ತದೆ. ಅಡಿಕೆ, ತೆಂಗು, ದಾಳಿಂಬೆ, ಲಿಂಬು, ಸೌತೆ, ಕಲ್ಲಂಗಡಿ ಇನ್ನು ಮುಂತಾದ 1 ಲಕ್ಷಕ್ಕೂ ಹೆಚ್ಚಿನ ಜಾತಿಯ ಸಸ್ಯ ಪ್ರಬೇಧಗಳಲ್ಲಿ ಜೇನ್ನೊಣಗಳ ಪರಾಗ ಸ್ವರ್ಶ ಅನಿವಾರ್ಯವಾಗಿದೆ ಎಂದರು.

ದಾವಣಗೆರೆಯ ಹಿರಿಯ ಪ್ರಸೂತಿ ತಜ್ಞೆ ಡಾ.ಶಾಂತ ಭಟ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ನಿತ್ಯ 15ರಿಂದ 25 ಗ್ರಾಂ ಪರಿಶುದ್ಧ ಜೇನುತುಪ್ಪ ಸೇವನೆ ಉತ್ತಮ. ಪರಿಶುದ್ದ ಜೇನುತುಪ್ಪ ಪಡೆಯಲು ಜೇನು ಸಾಕಾಣಿಕೆಯನ್ನು ರೈತರಲ್ಲದೇ ನಗರ ಪ್ರದೇಶದಲ್ಲೂ ಸಹ ಹವ್ಯಾಸದ ರೀತಿಯಲ್ಲಿ ಜೇನು ಸಾಕಾಣಿಕೆ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ಗುಡಿಹಳ್ಳಿ ರಂಗಣ್ಣ, ಹಲವಾರು ರೈತರು, ರೈತ ಮಹಿಳೆಯರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ