ಬ್ಯಾಂಕ್, ಸರ್ಕಾರಿ ಕಚೇರಿಗೆ ರೈತರ ಮುತ್ತಿಗೆ

KannadaprabhaNewsNetwork | Published : Aug 30, 2024 1:02 AM

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದುಂಡಶಿ ಗ್ರಾಮದ ರೈತರು ಗುರುವಾರ ಹಾನಗಲ್ -ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಶಿಗ್ಗಾಂವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದುಂಡಶಿ ಗ್ರಾಮದ ರೈತರು ಗುರುವಾರ ಹಾನಗಲ್ -ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ತಾಲೂಕಿನ ದುಂಡಶಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ನಾಡ ಕಚೇರಿ ಕಂದಾಯ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಮುತ್ತಿಗೆ ಹಾಕಿ ಸಾಂಕೇತಿಕವಾಗಿ ಬಂದ್ ಮಾಡಿ, ಆನಂತರ ತಡಸ ಹಾನಗಲ್ ರಾಜ್ಯ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಾನಿಯಾದ ಬೆಳೆ ಪ್ರದರ್ಶಿಸಿದರು.

ರೈತ ಮುಖಂಡ ಈಶ್ವರ್‌ಗೌಡ (ಮುತ್ತಣ್ಣ) ಪಾಟೀಲ್ ಮಾತನಾಡಿ, ೨೦೨೪-೨೫ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಬೇಕು ಹಾಗೂ ಗೋವಿನಜೋಳ ಬೆಳೆಗೆ ವಿಮೆ ತುಂಬಿದ ರೈತರಿಗೆ ಶೇ. 25ರಷ್ಟು ಮಧ್ಯಂತರ ಪರಿಹಾರ ನೀಡಬೇಕು. ರೇಷ್ಮೆ, ಕಬ್ಬು ಬೆಳೆಯನ್ನು ಬೆಳೆ ಹಾನಿ ಹಾಗೂ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಆನಂತರ ಮಾತನಾಡಿದ ರೈತ ಸಂಘದ ಅಧ್ಯಕ್ಷ ಮುತ್ತಣ್ಣ ಗುಡಿಗೇರಿ, ಸ್ಪ್ರಿಂಕ್ಲರ್ ಪೈಪ್‌ಗಳನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಸಹಾಯಧನ ಯೋಜನೆಯಡಿ ಒದಗಿಸಬೇಕು. ಬೆಳೆ ವಿಮೆಗೆ ಸಂಬಂಧಿಸಿದ ಎಲ್ಲ ಬೆಳೆಗಳ ಕಟಾವು ಪ್ರಯೋಗವನ್ನು ಗ್ರಾಮಗಳಲ್ಲಿ ಡಂಗುರ ಸಾರಿ, ರೈತರ ಸಮೂಹದಲ್ಲಿ ಪರೀಕ್ಷೆ ನಡೆಸಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಮಾಡುವ ಮೂಲಕ ಅಭಿವೃದ್ಧಿ ಚಿಂತನೆ ಮಾಡಬೇಕು ಎಂದರು.

ಆನಂತರ ಮಾತನಾಡಿದ ಶಿವಾನಂದ ಜಡಿಮಠ, ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಹಾಗೂ ೨೦೨೩- ೨೪ನೇ ಸಾಲಿನಲ್ಲಿ ಮಾವು ಬೆಳೆಯ ವಿಮೆ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳಿಗೆ ಕೆಲವು ದಿನಗಳಲ್ಲಿ ಪರಿಹಾರ ನೀಡದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್‌ ಮಟ್ಟದ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಾಲೂಕು ದಂಡಾಧಿಕಾರಿ ಸಂತೋಷ ಹಿರೇಮಠ, ದುಂಡಶಿ ಹೋಬಳಿಯಲ್ಲಿ ಶೇ. ೮೦ರಷ್ಟು ಬೆಳೆಹಾನಿಯಾಗಿದೆ. ಸಮರ್ಪಕ ರೀತಿಯಲ್ಲಿ ಪ್ರತಿ ಪಂಚಾಯಿತಿ ಮಟ್ಟಕ್ಕೆ ಕಮಿಟಿ ರಚಿಸಿ, ಬೆಳೆ ಹಾನಿ ವೀಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ಕಟಾವು ಪ್ರಯೋಗವನ್ನು ಮಾಡುವಾಗ ಮುಂಚಿತವಾಗಿ ಗ್ರಾಮದಲ್ಲಿ ಡಂಗುರ ಸಾರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಕೋಟರ್ಸ್ ಜಗ್ಲಿ ಮಾತನಾಡಿ, ಕಬ್ಬು ಹಾಗೂ ರೈಷ್ಮೆ ಬೆಳೆ ಹಾನಿ ಮತ್ತು ಬೆಳೆ ವಿಮೆ ವ್ಯಾಪ್ತಿಗೆ ತರುವ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ. ಸ್ಪ್ರಿಂಕ್ಲರ್‌ ಪೈಪ್ ಅನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ರೈತರಿಗೆ ನೀಡುವ ಯೋಜನೆಯ ಪ್ರಸ್ತಾವನೆಯನ್ನು ನೀಡಿದ್ದು, ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದರು. ೧೫ ದಿನಗಳಿಗೊಮ್ಮೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಸಭೆಯನ್ನು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳ ಸೇರಿಸಿ ಮಾಡಲಾಗುತ್ತದೆ ಎಂದರು.

ಉಪ ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಸಹಾಯಕ ತೋಟಗಾರಿಕೆ ಉಪ ನಿರ್ದೇಶಕ ಕಿಶೋರ್ ನಾಯಕ, ರೈತರಾದ ವಿರೂಪಾಕ್ಷಗೌಡ ಪಾಟೀಲ್, ಕರಿಯಪ್ಪ, ಎಲ್ಲಪ್ಪ ನಡುವಿನಮನಿ, ವೀರಭದ್ರಪ್ಪ ವಾಲಿಶೆಟ್ಟರ, ಈರಣ್ಣ ಸಮಗೊಂಡ, ಬಾಬಣ್ಣ ಧರಣಿಪ್ಪನವರ, ಪ್ರಶಾಂತ ಮಹಾಜನ್ ಶೆಟ್ರೆ, ಸಂತೋಷ ಹುಣಸಿಹಾಳ, ಕೃಷ್ಣಪ್ಪ ಲಮಾಣಿ, ಹರ್ಜಪ್ಪ ಲಮಾಣಿ, ಸಂತೋಷ ಹುಣಶ್ಯಾಳ ಹಾಗೂ ಹಲವಾರು ರೈತರು ಪ್ರತಿಭಟನೆಯಲ್ಲಿ ಇದ್ದರು.