
ಸಾಗರ: ರೈತ ಹೋರಾಟಗಳು ಬತ್ತದ ಗಂಗೆ ಇದ್ದಂತೆ. ರೈತಪರವಾದ ಕಾಳಜಿಗಳು ಒಂದಿಲ್ಲೊಂದು ಹಂತದಲ್ಲಿ ಹೋರಾಟದ ರೂಪದಲ್ಲಿ ಚಿಮ್ಮುತ್ತದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ದೇಶದಲ್ಲಿ ರೈತರು ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ರೈತ ಸಂಘದ ನಾಯಕತ್ವ ವಹಿಸಿಕೊಂಡವರು ಫಲಾಪೇಕ್ಷೆ ಇಲ್ಲದೆ ಹೋರಾಟದಲ್ಲಿ ತೊಡಗಿಕೊಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ದಿನೇಶ್ ಶಿರವಾಳ ನೇತೃತ್ವದಲ್ಲಿ ರೈತ ಸಂಘ ಅನೇಕ ಹೋರಾಟಗಳಲ್ಲಿ ಗುರುತಿಸಿಕೊಂಡಿದೆ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ನಿಟ್ಟಿನಲ್ಲಿ ಇನ್ನಷ್ಟು ಹೋರಾಟಗಳು ನಡೆಯಬೇಕು ಎಂದರು.ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ದಿನೇಶ್ ಶಿರವಾಳ ಪ್ರಚಾರ ಬಯಸದೆ ರೈತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳು ಹತ್ತು ಹಲವು ಇದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕಾಗಿದೆ. ರೈತ ಸಂಘಟನೆಗಳಿಂದ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವಿದೆ ಎಂದರು.ಮೊದಲು ಶಾಂತಾವೇರಿ ಗೋಪಾಲಗೌಡರು ಸದನದಲ್ಲಿ ರೈತರ ಧ್ವನಿಯಾಗಿ ಕೆಲಸ ಮಾಡಿದ್ದರು. ನಂತರ ಕಾಗೋಡು ತಿಮ್ಮಪ್ಪನವರು ಶಾಸಕರಾಗಿ ಉಳುವವನೇ ಭೂಒಡೆಯ ಕಾಯ್ದೆ ಜಾರಿಗೆ ತರಲು ಹೆಚ್ಚು ಶ್ರಮಿಸಿದರು. ನಂತರ ರೈತರನ್ನು ಪ್ರತಿನಿಧಿಸುವ ಸಮರ್ಥ ನಾಯಕತ್ವ ನಮಗೆ ಸಿಗುತ್ತಿಲ್ಲ. ರೈತಪರ ಹೋರಾಟಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಅಧ್ಯಕ್ಷತೆ ವಹಿಸಿದ್ದರು.ಜಗದೀಶ್ ಒಡೆಯರ್, ಗಣಪತಿ ಶಿರಳಗಿ, ಡಾ.ರಾಮಚಂದ್ರ ಮನೆಘಟ್ಟ, ಭದ್ರೇಶ್ ಬಾಳಗೋಡು, ಜೀನೇಶ್ ಕುಮಾರ್, ಕುಮಾರ ಗೌಡ್ರು, ಶಿವು ಮೈಲಾರಿಕೊಪ್ಪ, ಚಂದ್ರು ಸಿರಿವಂತೆ ಇದ್ದರು.