ರಾಣಿಬೆನ್ನೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಸಹಸ್ರಾರು ಕಾರ್ಯಕರ್ತರು ಫೆ.14ರಂದು ಹಾವೇರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಟ್ಟೆ ಧರಿಸಿಕೊಂಡು ಪ್ರತಿಭಟನೆ ಮಾಡಲಾಗುವುದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸುರೇಶ್ ಹೊನ್ನಪ್ಪಳವರ ತಿಳಿಸಿದರು.ನಗರದಲ್ಲಿ ಮಂಗಳವಾರ ನಡೆದ ರೈತರ, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈಗಾಗಲೇ ಮುಖ್ಯಮಂತ್ರಿಗಳಿಗೆ ಕಳೆದ ಎರಡೂವರೆ ವರ್ಷಗಳಿಂದ ಅನೇಕ ಬಾರಿ ಮನವಿ ಪತ್ರ ಹಾಗೂ ಮಾಧ್ಯಮಗಳ ಮೂಲಕ ಆಗ್ರಹ ಮಾಡುತ್ತಾ ಬಂದಿದ್ದು, ಈವರೆಗೂ ಬೇಡಿಕೆಗಳು ಈಡೇರಿಲ್ಲ, ಈ ಕಾರಣಕ್ಕೆ ಕಪ್ಪು ಬಟ್ಟೆ ಮೂಲಕ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದರು.ಫೆ.13ರಂದು ಬ್ಯಾಡಗಿಯಲ್ಲಿ ನಂಜುಂಡಸ್ವಾಮಿ ಹುಟ್ಟು ಹಬ್ಬವನ್ನು ರೈತರ ಸಮಾವೇಶ ನಡೆಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪೊಲೀಸ್ ವರದಿಯ ಆಧಾರದ ಮೇಲೆ ಪರಿಹಾರ ನೀಡಬೇಕು. ದುಃಖದಲ್ಲಿರುವ ಮೃತರ ಕುಟುಂಬದವರಿಂದ ಅರ್ಜಿ ಪಡೆಯುವುದು ಸರಿಯಲ್ಲ. ಗೋವಿನಜೋಳಕ್ಕೆ ಬೆಂಬಲ ಬೆಲೆ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಹುಣಸಿಕಟ್ಟಿ ಬಳಿ ಜಂಗಲ್ ಕಟಾವು ಮಾಡುತ್ತಿದ್ದಾರೆ, ಇದರಿಂದ ಅರಣ್ಯ ಹಾಳಾಗುವುದರಿಂದ ಪ್ರಾಣಿಗಳು ರೈತರ ಹೊಲಗಳಿಗೆ ಬರುತ್ತಿವೆ. ಇದರಿಂದ ಫಸಲು ನಾಶ ಮಾಡುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು. ಪ್ರಾಣಿಗಳನ್ನು ಸ್ಥಳಾಂತರಿಸಿ ಅಮೇಲೆ ಕಟಾವು ಮಾಡಬೇಕು ಎಂದು ವಿವರಿಸಿದರು.ಸಭೆಯಲ್ಲಿ ಲೋಕೇಶ್ ಸುತಾರ, ಸಿದ್ದಪ್ಪ ಕುಪ್ಪೇಲೂರ, ಬಸವರಾಜ್ ಕೋಣನವರ, ರಮೇಶ್ ಕರಬಸಣ್ಣವರ, ಯಲ್ಲಪ್ಪ ಎಲಿಗಾರ, ಫಕೀರಗೌಡ ಬೂದಗಟ್ಟಿ, ವೀರಭದ್ರಪ್ಪ ಕೋಟಿಹಾಳ, ಮಾರುತಿ ಮೀನಕಟ್ಟಿ, ಹುಚ್ಚಪ್ಪ ಮತ್ತಿತರರು ಇದ್ದರು