ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತಸಂಘ ಪ್ರತಿಭಟನೆ

KannadaprabhaNewsNetwork |  
Published : Feb 24, 2026, 03:30 AM IST
ಪ್ರತಿಭಟನಾ ಸ್ಥಳದಲ್ಲಿ ರೈತ ಸಂಘದ ಮುಖಂಡರು ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ಸಡೆದ ಸಂದರ್ಭ | Kannada Prabha

ಸಾರಾಂಶ

ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸೋಮವಾರ ಇಲ್ಲಿಯ ಮಹಾತ್ಮಾಗಾಂಧಿ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ನೇತೃತ್ವದಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರಗಳೊಂದಿಗೆ ಪ್ರತಿಭಟನೆ ನಡೆಸಿದರು.

ಹಾನಗಲ್ಲ: ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸೋಮವಾರ ಇಲ್ಲಿಯ ಮಹಾತ್ಮಾಗಾಂಧಿ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ನೇತೃತ್ವದಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರಗಳೊಂದಿಗೆ ಪ್ರತಿಭಟನೆ ನಡೆಸಿದರು.

ತಹಸೀಲ್ದಾರ್ ಎಸ್. ರೇಣುಕಾ ಮಹಾತ್ಮಾ ಗಾಂಧಿ ವೃತ್ತದ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವ ಮೂಲಕ ಮುಂದಾಗುವ ದಟ್ಟಣೆ ತಪ್ಪಿಸಿದರು.

ವಿದ್ಯುತ್ ಖಾಸಗೀಕರಣ ಬೇಡ. ಅಕ್ರಮ ಸಕ್ರಮ ಯೋಜನೆ ನಿಲ್ಲಿಸಿ. ಎಲ್ಲ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಕರಾರಿಲ್ಲದೆ ವಿದ್ಯುತ್ ನೀಡಿರಿ. 33 ಕೆವಿ ಸ್ಟೇಶನ್ ಅಪ್‌ಗ್ರೇಡ್ ಮಾಡಿರಿ. ಮುಂಡಗೋಡ ತಾಲೂಕಿಗೆ ವಿದ್ಯುತ್ ನೀಡುವುದನ್ನ ನಿಲ್ಲಿಸಿ. ಸೋಲಾರ ನಮಗೆ ಬೇಡ. ಗ್ರಿಡ್‌ಗಳಿಂದ ವಿದ್ಯುತ್ ಕೊಡಿ. ಲೈನ್‌ಮನ್‌ಗಳ ಕೊರತೆ ನೀಗಿಸಿ, ಡೆಂಜರ್ ಲೈನಗಳ ಸ್ಥಳಾಂತರ ಮಾಡಿ, ಕೂಡಲೇ ಹಾನಗಲ್ಲ ತಾಲೂಕಿಗೆ ಟಿಸಿ ಒದಗಿಸಲು ಲಾರಿ ವಾಹನ ನೀಡಿ, ಸುಟ್ಟ ಟಿಸಿಗಳನ್ನು 24 ಗಂಟೆಗಳಲ್ಲಿ ಮರಳಿ ಕೊಡಿ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.

ಜಾಗಾ ಖಾಲಿ ಮಾಡ್ರಿ: ಸರ್ಕಾರಕ್ಕೆ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರೈತರು ಆಕ್ರಮ ಕೆಲಸ ಮಾಡಲ್ಲ, ಪಂಪಸೆಟ್‌ಗೆ ವಿದ್ಯುತ್ ನೀಡುವುದು ಸರ್ಕಾರದ ಕೆಲಸವಾಗಿದೆ. ಆರ್. ಆರ್. ನಂಬರಾದ್ರು ಕೊಡಿ, ಏಳೇಳು ನಂಬರ್ ಆದ್ರೂ ಕೊಡ್ರಿ, ಒಟ್ ನಮ್ಮ ಪಂಪಸೆಟ್ಟಿಗೆ ವಿದ್ಯುತ್ ಕೊಡ್ರಿ, ಇಲ್ಲಾಂದ್ರ ಕೆಲಸ ಮಾಡಲಾಗದ ಅಧಿಕಾರಿ ಜನಪ್ರತಿನಿಧಿಗಳು ಜಾಗಾ ಖಾಲಿ ಮಾಡ್ರಿ, ರೈತನ ಸಹಾಯಕ್ಕೆ ನಿಲ್ಲದ ವೊಲ್ಟೇಜ್ ಫಾಲ್ಟ ಇಲಾಖೆ ಎಂದು ಗುಡುಗಿದರು.

ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೆಳ್ಳರ ಮಾತನಾಡಿ, ರೈತರ ಸಂಘಟನೆಗಳನ್ನು ನಿರ್ಲಕ್ಷ್ಯ ಮಾಡಿದವರಿಗೆ ಸರಿಯಾದ ಉತ್ತರ ಕೊಡಲು ಸಿದ್ಧರಾಗಿ. ಈಗಾಗಲೇ ಇಂತಹ ಹಲವು ಪಾಠಗಳನ್ನು ಕಲಿಸಿದ್ದೇವೆ. ಹಾನಗಲ್ಲ ತಾಲೂಕಿನಲ್ಲಿ ಇದರ ಬಗ್ಗೆ ಎಚ್ಚರಿಕೆ ಇರಲಿ. ರೈತರ ಬೇಡಿಕೆ ಈಡೇರದಿದ್ದರೆ ಬೀದಿಗೆ ಇಳಿಯುವುದು ಮಾತ್ರವಲ್ಲ ಅದಕ್ಕೆ ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಪಾಠ ಕಲಿಸುತ್ತೇವೆ. ರೈತರೇ ಎದೆಗುಂದಬೇಡಿ. ಹೋರಾಟದ ಒಗ್ಗಟ್ಟಿನಿಂದ ಎಲ್ಲವನ್ನೂ ಪಡೆಯಲು ಸಾಧ್ಯ ಎಂಬ ವಿಶ್ವಾಸ ನಿಮ್ಮಲ್ಲಿರಲಿ. ರೈತರ ಹೋರಾಟಗಳನ್ನು ಸರ್ಕಾರ ಹಗುರವಾಗಿ ಪರಿಗಣಿಸದಿರಲಿ. ಸಂಘಟನೆ ಹತ್ತಿಕ್ಕಲು ಬಿಡಬೇಡಿ ಎಂದು ಎಚ್ಚರಿಸಿದರು.ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿನ ರೈತರ ಸಮಸ್ಯೆಗಳ ಬಗೆಗೆ ಇಲಾಖೆಗಳಿಗೆ ನೀಡಿದ ಬೇಡಿಕೆಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ವಿದ್ಯುತ್ ಸಮಸ್ಯೆ ಬಗೆಗೆ ನಾಲ್ಕಾರು ತಿಂಗಳಿನಿಂದಲೇ ಇಲಾಖೆಯ ಗಮನ ಸೆಳೆದಿದ್ದೇವೆ. ಮೇಲಿಂದ ಮೇಲೆ ಎಚ್ಚರಿಸುತ್ತಲೇ ಇದ್ದರೂ ಈಗ ವಿದ್ಯುತ್ ಖೋತಾ, ವೋಲ್ಟೇಜ್ ಫಾಲ್ಟ, ಟಿಸಿ ಸುಡುವುದು, ಒಟ್ಟಿನಲ್ಲಿ ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಇಲ್ಲದ ದುಸ್ಥಿತಿ ಒದಗಿದೆ. ಇದನ್ನು ಬಗೆಹರಿಸಲು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಅಧಿಕಾರಿಗಳು ಕಕ್ಕಾಬಿಕ್ಕಿ: ಹೆಸ್ಕಾಂ ಜಿಲ್ಲಾ ಅಧೀಕ್ಷಕ ನಾರಾಯಣ ಕಳ್ಳೀಮನಿ, ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ. ಹೊಸಮನಿ, ಎಇಇ ವಾಗೀಶ ಕಡತಿ, ಹಾನಗಲ್ಲ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್. ಮರಿಗೌಡರ, ಕೆಪಿಟಿಸಿಎಲ್ ಅಧಿಕಾರಿ ವಿಜಯ ಜೋಶಿ ಸಭೆಯಲ್ಲಿದ್ದು ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅಸಹಾಯಕತೆ ವ್ಯಕ್ತಪಡಿಸಿದರು.

ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಎಚ್.ಎಚ್.ಮುಲ್ಲಾ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ವಾಸುದೇವ ಕಮಾಟಿ, ರುದ್ರಪ್ದ ಹಣ್ಣಿ, ಮಹೇಶ ವಿರುಪಣ್ಣನವರ, ಸೋಮಪ್ಪ ಜಡೆಗೊಂಡರ್, ಶ್ರೀಕಾಂತ ದುಂಡಣ್ಣನವರ, ಉಮೇಶ ಮೂಡಿ, ಶ್ರೀಧರ ಮಲಗುಂದ, ಎಂ.ಎಂ.ಬಡಗಿ, ಶಂಕರಗೌಡ ಪಾಟೀಲ, ಮಹಲಿಂಗಪ್ಪ ಅಕ್ಕಿವಳ್ಳಿ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಪ್ರತಿಭಟನಾ ಮೆರವಣೆಗೆ ನಡೆಯಿತು.

ಕೆಡಿಪಿ ಮುಂದಕ್ಕೆ: ರೈತರ ಪ್ರತಿಭಟನೆ ಪರಿಣಾಮ ಹಾನಗಲ್ಲ ಶಾಸಕರ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಫೆ.23ರ ಸಭೆ ಮುಂದೂಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಕ್ತರ ಮನಸ್ಸಿನಲ್ಲಿ ಸಿದ್ದಲಿಂಗ ಶ್ರೀಗಳು ಶಾಶ್ವತ: ಗವಿಮಠದ ಬಸವಲಿಂಗ ಶ್ರೀಗಳು
ಅಬಕಾರಿ ಇಲಾಖೆ ಕಾರ್ಯಾಚರಣೆ: 2 ಟ್ಯಾಂಕರ್ ಸೇರಿ ₹90 ಲಕ್ಷ ಮೌಲ್ಯದ ಸ್ವತ್ತು ಜಪ್ತಿ