ಎಸ್.ಜಿ. ತೆಗ್ಗಿನಮನಿ ನರಗುಂದ
ತಾಲೂಕಿನ ರೈತ ಸಮುದಾಯ ಹೆಚ್ಚು ಕೃಷಿ ಮೇಲೆ ಅವಲಂಬಿತವಾಗಿದೆ. ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಅಲ್ಪಸ್ವಲ್ಪ ಮಳೆಯಲ್ಲಿ ಹೆಸರು, ಗೋವಿನ ಜೋಳ ಬೆಳೆ ಬೆಳೆದು ಕಟಾವು ಮಾಡಿ ಹಿಂಗಾರು ಬಿತ್ತನೆ ಮಾಡಲು ರೈತ ಸಮುದಾಯ ಸಜ್ಜಾಗಿದೆ. ಆದರೆ ಹಿಂಗಾರು ಬಿತ್ತನೆಗೆ ಬೇಕಾಗಿರುವ ಡಿಎಪಿ, 10.26.26. 20.20.20 ಗೊಬ್ಬರ ಸದ್ಯ ತಾಲೂಕಿನಲ್ಲಿ ಸಿಗುತ್ತಿಲ್ಲ. ರೈತರು ಕೆಲಸ ಬಿಟ್ಟು ಗೊಬ್ಬರಕ್ಕಾಗಿ ಅಲೆಯುವಂತಾಗಿದೆ. ಹಣ ಹಿಡಿದುಕೊಂಡು ಖಾಸಗಿ ವ್ಯಾಪಾರಸ್ಥರ ಬಳಿ ಹೋದರೂ ಗೊಬ್ಬರ ಇಲ್ಲ ಎಂಬ ಉತ್ತರ ಬರುತ್ತಿದೆ.
ಬಿತ್ತನೆಗೆ ತೊಂದರೆ: 16.16.32, 17.17.17 ಗೊಬ್ಬರ ಸದ್ಯ ಸಿಗುತ್ತಿದೆ. ಆದರೆ ಈ ಗೊಬ್ಬರದಲ್ಲಿ ಯೂರಿಯಾ ಮತ್ತು ಪೋಟಸ್ ಗೊಬ್ಬರ ಮಿಶ್ರಣ ಇರುವುದರಿಂದ ಬಿತ್ತುವ ಕೂರಿಗೆಯಲ್ಲಿ ಸರಿಯಾಗಿ ಇಳಿಯುವುದಿಲ್ಲ. ಹೀಗಾಗಿ ಈ ಗೊಬ್ಬರ ಖರೀದಿಗೆ ರೈತರು ಮುಂದಾಗುತ್ತಿಲ್ಲ.ಹೆಚ್ಚಿಗೆ ಹಣ ನೀಡಿ ಗೊಬ್ಬರ ಖರೀದಿ: ತಾಲೂಕಿನಲ್ಲಿ ಡಿಎಪಿ, 10.26.26, 20.20.20 ಗೊಬ್ಬರ ಸಿಗದ ಹಿನ್ನೆಲೆಯಲ್ಲಿ ರೈತರು ಪಕ್ಕದ ತಾಲೂಕುಗಳಿಗೆ ಹೋಗುತ್ತಿದ್ದಾರೆ. ಬದಾಮಿ, ರಾಮದುರ್ಗ, ನವಲಗುಂದದಿಂದ ತರಬೇಕಾದ ಸ್ಥಿತಿ ಇಲ್ಲಿಯ ರೈತರಿಗೆ ಈ ವರ್ಷ ಬಂದಿದೆ.
ಈಗಾಗಲೇ ತಾಲೂಕಿನ ಎಲ್ಲ ವ್ಯಾಪಾರಸ್ಥರ ಸಭೆ ಕರೆದು, ಹಿಂಗಾರು ಬಿತ್ತನೆಗೆ ಗೊಬ್ಬರವನ್ನು ಬೇಗ ತರಿಸಿ ಕೊಡಬೇಕೆಂದು ಖಾಸಗಿ ಗೊಬ್ಬರ ಅಂಗಡಿ ಮಾಲೀಕರಿಗೆ ತಿಳಿಸಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ ತಿಳಿಸಿದ್ದಾರೆ.