ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ರೈತರು ಸಹಕಾರ ಸಂಘ ಸಂಸ್ಥೆಗಳಲ್ಲಿ ತಮ್ಮ ವ್ಯವಹಾರ ನಡೆಸಬೇಕು ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದರು.ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ನೂತನ ಶಾಖಾ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಹಕಾರ ಸಂಘದಲ್ಲಿ ನಡೆಯುವ ವ್ಯವಹಾರ ಅತ್ಯಂತ ಸುರಕ್ಷತೆ ಹಾಗೂ ಪಾರದರ್ಶಕತೆಯಿಂದ ಕೂಡಿರುತ್ತದೆ. ರೈತರಿಂದ ರೈತರಿಗಾಗಿ ಸ್ಥಾಪನೆಗೊಂಡಿರುವ ರ್ಯಾಂಮ್ಕೋಸ್ ಸಂಘದಲ್ಲಿ ರೈತರು ಹೆಚ್ಚು ಒಡನಾಟ ಇಟ್ಟುಕೊಂಡು ಸಂಘದ ಏಳಿಗೆಗೆ ಸಹಕಾರ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಂಗಳೂರಿನ ದಿ ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ ಕುಮಾರ ಕೋಡ್ಗಿ, ಬಿ.ಕೆ.ಮೋಹನ್ ಮಾತನಾಡಿದರು.
ಈ ಸಂದರ್ಭ ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕ ಹಾಗೂ ತಾಲೂಕು ಬೋರ್ಡ್ ಮಾಜಿ ಸದಸ್ಯ ಎಚ್.ಆರ್.ತಿಮ್ಮಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ತಹಸೀಲ್ದಾರ್ ಕೆ.ಆರ್.ನಾಗರಾಜ್, ಕೆನರಾ ಬ್ಯಾಂಕ ವಿಭಾಗೀಯ ಕಚೇರಿಯ ಡಿಜಿಎಂ ಆರ್.ದೇವರಾಜ್, ರ್ಯಾಂಮ್ಕೋಸ್ ಉಪಾಧ್ಯಕ್ಷ ಎಸ್.ಮಹೇಶ್ವರಪ್ಪ, ನಿರ್ದೇಶಕರಾದ ಸಿ.ಹನುಮಂತು, ಎಚ್.ಟಿ.ಉಮೇಶ್, ಮಹೇಶ್, ಸುಲೋಚನಾ, ಜಿ.ಇ.ಲೋಕೇಶಪ್ಪ, ಬಿ.ಆರ್.ದಶರಥಗಿರಿ, ಎಂ.ಎಸ್.ಬಸವರಾಜ್, ಎಚ್.ಎಸ್.ಸಂಜೀವಕುಮಾರ್, ಲಲಿತಮ್ಮ, ಗಂಗನಗೌಡ, ಸಿ.ಮಲ್ಲೇಶಪ್ಪ, ಆಡಳಿತ ಮಂಡಳಿ ಮಾಜಿ ಸದಸ್ಯರು ಹಾಗೂ ನೂರಾರು ರೈತರು ಹಾಜರಿದ್ದರು.
ಭದ್ರಾವತಿಯ ರ್ಯಾಂಮ್ಕೋಸ್ ಅಧ್ಯಕ್ಷ ಬಿ.ಜಿ.ಜಗದೀಶ್ಗೌಡ ಅಧ್ಯಕ್ಷತೆ ವಹಿಸಿದ್ದರು. ರ್ಯಾಂಮ್ಕೋಸ್ ಸಿಇಒ ಎಂ.ವಿರೂಪಾಕ್ಷಪ್ಪ ಪ್ರಾಸ್ತಾವಿಕ ಮಾತನಾಡಿದರು.ಪ್ರಕೃತಿ ಪ್ರಾರ್ಥಿಸಿ, ರ್ಯಾಂಮ್ಕೊಸ್ ನಿರ್ದೇಶಕ ಎಚ್.ಎಲ್.ಷಡಾಕ್ಷರಿ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕರ ಶಂಕರಮೂರ್ತಿ ನಿರೂಪಿಸಿ ವಂದಿಸಿದರು.
ರೈತ ಸಂಘ-ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ರೈತರು ಹೆಚ್ಚಾಗಿ ಅಡಕೆ ಬೆಳೆಯ ಪರಿಷ್ಕರಣೆ ಮಾಡುವಾಗ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಎಡವುತ್ತಿದ್ದಾರೆ. ಇದರಿಂದ ಉತ್ತರ ಭಾರತದಲ್ಲಿರುವ ಅಡಕೆ ಕಂಪನಿ ಹಾಗೂ ಕಾರ್ಖಾನೆಗಳಲ್ಲಿ ತಿರಸ್ಕಾರಗೊಂಡು ವಾಪಾಸ್ಸು ಬರುತ್ತದೆ. ಹೀಗಾದರೆ ಖರೀದಿದಾರರಿಗೆ ನಷ್ಟ ಉಂಟಾಗುತ್ತದೆ. ಕ್ರಮೇಣ ಇದರ ಪರಿಣಾಮ ಬೆಳೆಗಾರರ ಮೇಲೆ ಬೀರುತ್ತದೆ ಎಂದರು.