ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರಿನ ಜಯನಗರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ರಾಜ್ಯಾಧ್ಯಕ್ಷ ಸಾಧಿಕ್ ಪಾಷ ಅವರ ನೇತೃತ್ವದಲ್ಲಿ ಸಂಘಟನೆಯ ಹಲವು ಕಾರ್ಯಕರ್ತರು ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.ಜಯನಗರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸಪ್ತಗಿರಿ ಬಡಾವಣೆಯ ಮಂಜೂರಾದ ಸಿಎ ನಿವೇಶನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸ ಲಾಗಿದೆ. ಈ ವೇಳೆ ಮಾತನಾಡಿದ ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ರಾಜ್ಯಾಧ್ಯಕ್ಷ ಸಾಧಿಕ್ ಪಾಷ, ತುಮಕೂರು ನಗರದ ಜಯನಗರ ಪೊಲೀಸ್ ಠಾಣೆ 2015ರಲ್ಲಿ ಜಯನಗರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಉದ್ಘಾಟನೆಗೊಂಡಿದ್ದು, ಇದುವ ರೆಗೂ ಸ್ವಂತ ಕಟ್ಟಡವಿಲ್ಲ. ಇರುವ ಕಟ್ಟಡ ಶಿಥಿಲಗೊಂಡಿದ್ದು, ಸಣ್ಣ ಮಳೆ ಬಂದರೂ ನೀರು ಸೋರುತ್ತಿದೆ. ಜೀವಭಯದಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಟೂಡಾದಿಂದ ಮಂಜೂರಾಗಿರುವ ನಿವೇಶನದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರ್ಕಾರ ಒಳಾಡಳಿತ ಇಲಾಖೆ ಮತ್ತು ಪೊಲೀಸ್ ಇಲಾಖೆಯ ವಸತಿಗೃಹ ಮತ್ತು ಮೂಲಭೂತ ಸೌಕರ್ಯ ವಿಭಾಗದಿಂದ ಅನುದಾನ ನೀಡಬೇಕಾಗಿದೆ ಎಂದರು.
ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿ ದೊಡ್ಡದಿದ್ದು, ಎಸ್.ಎಸ್.ಐಟಿಯಿಂದ ಬಡ್ಡಿಹಳ್ಳಿಯವರೆಗೆ ವಿಸ್ತರಿಸಿದೆ. ನಗರದ ಹೊರವಲಯವನ್ನೇ ಹೆಚ್ಚಾಗಿ ಹೊಂದಿದ್ದು, ಮನೆಗಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಹಾಲಿ ಇರುವ ಪೊಲೀಸ್ ಠಾಣೆಯನ್ನು ಅಂದು ಗೃಹ ಸಚಿವರಾ ಗಿದ್ದ, ಹಾಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದ್ದರು. ನಿವೇಶನ ಮಂಜೂರಾಗಿ ಸುಮಾರು 6 ವರ್ಷ ಕಳೆಯುತ್ತಾ ಬಂದಿದ್ದರೂ ಇದುವರೆಗೂ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಇದರಿಂದ ಸಿಬ್ಬಂದಿ ಶಿಥಿಲಗೊಂಡ ಕಟ್ಟಡದಲ್ಲಿಯೇ ಜೀವ ಭಯದಿಂದ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕನಿಷ್ಠ ೫೦ ಲಕ್ಷ ರು. ಅನುದಾನ ನೀಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಸಾಧಿಕ್ ಪಾಷ ತಿಳಿಸಿದರು.ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ಕೃಷ್ಣಮೂರ್ತಿ, ಹನುಮಂತರಾಜು, ತಬರೇಜ್, ಮಹಬೂಬ್, ವಾಸಿಮ್, ಮೋಹನ್, ಜಾಕಿರ್, ಅಜ್ಗರ್ ಆಲಿ, ಅಯಾಜ್, ಇರ್ಫಾನ್ ಅಹಮದ್,ಸೈಯದ್ ಇಸ್ತಾಕ್,ಖಾದರ್ ಸೇರಿದಂತೆ ಹಲವರು ಭಾಗವಹಿಸಿದ್ದರು.