ಕನ್ನಡಪ್ರಭ ವಾರ್ತೆ ಯಾದಗಿರಿಮಾಜಿ ಸಚಿವ ಬಾಬುರಾವ ಚಿಂಚನಸೂರು ಭ್ರಷ್ಟಾಚಾರದ ಪಿತಾಮಹ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ತರಾಟೆಗೆ ತೆಗೆದುಕೊಂಡರು. ತಮ್ಮ ವಿರುದ್ಧ ಭಾನುವಾರ ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ ನೀಡಿದ್ದ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಬಸರಡ್ಡಿ ಪಾಟೀಲ್ ಅನಪೂರ ಮೊದಲು ಬೋರವೆಲ್ ಗುತ್ತಿಗೆದಾರರಾಗಿ ಈ ಭಾಗದಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಎಲ್ಲರೂ ಗಮನಿಸಿದ್ದೀರಿ. ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಭ್ರಷ್ಟಾಚಾರ ನಡೆಸಿ, ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲವೇ ಎಂದು ಕಂದಕೂರು ಪ್ರಶ್ನಿಸಿದರು.
ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ನಾನು ಜಿಲ್ಲೆಗೆ ಅನೇಕ ಪ್ರಾಮಾಣಿಕ ಅಧಿಕಾರಿಗಳ ಪೋಸ್ಟಿಂಗ್ ಮಾಡಿಸಿದ್ದೇವೆ. ಆದರೆ, ಅವರಿಂದ ಜನರ ಕೆಲಸ ಮಾಡಿಸಿಕೊಂಡಿದ್ದೇವೆ ಹೊರತು ಹಣ ಪಡೆದಿಲ್ಲ. ಈ ವಿಷಯದಲ್ಲಿ ಯಾವುದೇ ಪ್ರಮಾಣಕ್ಕೂ ನಾನು ಸಿದ್ಧ ಎಂದು ಸವಾಲು ಹಾಕಿದರು.ಭ್ರಷ್ಟಾಚಾರ ಬಗ್ಗೆ ಮಾತನಾಡುವ ಚಿಂಚನಸೂರು ಹಾಗೂ ಬಸರೆಡ್ಡಿ ಬೇಕಿದ್ದರೆ ಲೋಕಾಯುಕ್ತಕ್ಕೆ ನನ್ನ ವಿರುದ್ಧ ದೂರು ಸಲ್ಲಿಸಿ, ತನಿಖೆ ಮಾಡಿಸಲಿ. ನನ್ನ ಆಸ್ತಿ ಎಷ್ಟಿದೆ ಹಾಗೂ ಸಾಲದ ವಿವರ ಸಮಗ್ರ ಮಾಹಿತಿ ಆಗ ಸಿಗಲಿದೆ ಎಂದು ಪ್ರತ್ಯುತ್ತರ ನೀಡಿದರು.