ಕಸಾಪುರ ಕೆರೆ ಒಡೆಯುವ ಭೀತಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

KannadaprabhaNewsNetwork |  
Published : Oct 28, 2024, 12:46 AM ISTUpdated : Oct 28, 2024, 12:47 AM IST
ಕೂಡ್ಲಿಗಿ  ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ   ಎಇಇ ಮಲ್ಲಿರ್ಜುನ ನೇತೃತ್ವದಲ್ಲಿ 20 ನುರಿತ ಕೆಲಸಗಾರರ ಸಹಕಾರದಿಂದ ಕೆರೆ ಏರಿ ದುರಸ್ಥಿ ಕಾರ್ಯ ಸಾಗಿರುವುದು. | Kannada Prabha

ಸಾರಾಂಶ

ಜಮೀನಿನಲ್ಲಿರುವ ಕೊಳವೆಬಾವಿಗಳಿಗೆ ಅಂತರ್ಜಲ ಹೆಚ್ಚಳವಾಗುತ್ತದೆ.

ಕೂಡ್ಲಿಗಿ: ಭಾರಿ ಮಳೆ ಸುರಿದ ಕಾರಣ ಗುಡೇಕೋಟೆ ಸಮೀಪದ ಕಸಾಪುರ ಕೆರೆಯಲ್ಲಿ ನೀರು ತುಂಬಿ ಕೆರೆಯ ಏರಿ ಮಧ್ಯಭಾಗದಲ್ಲಿ ಹಠಾತ್ ಮಣ್ಣು ಕುಸಿದು ನೀರು ಸೋರಿಕೆಯಾಗಿರುವುದರಿಂದ ಕೆರೆ ಒಡೆಯುವ ಭೀತಿ ಎದುರಾಗಿದೆ.

ಹಲವು ದಶಕಗಳ ನಂತರ ಕೆರೆಗೆ ಅಪಾರ ಪ್ರಮಾಣ ನೀರು ಸಂಗ್ರಹವಾಗಿದೆ. ಇದರಿಂದ ಈ ಭಾಗದಲ್ಲಿನ ರೈತರು ತಮ್ಮ ಜಮೀನಿನಲ್ಲಿರುವ ಕೊಳವೆಬಾವಿಗಳಿಗೆ ಅಂತರ್ಜಲ ಹೆಚ್ಚಳವಾಗುತ್ತದೆ ಎಂದು ರೈತರು ನಂಬಿರುವಾಗ ಸದ್ಯ ಕೆರೆ ಏರಿಯಲ್ಲಿನ ಮಧ್ಯ ಭಾಗದಲ್ಲಿ ಮಣ್ಣು ಕುಸಿದು ನೀರು ಸೋರಿಕೆಯಾಗುತ್ತಿದೆ.

ಜಿಪಂ ಎಇಇ ಮಲ್ಲಿಕಾರ್ಜುನ ಕೂಡಲೇ ಬೆಳಿಗ್ಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು. ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ನೀರು ಸೋರಿಕೆ ತಡೆಗೆ ಮರಳು ಚೀಲ ಅಡ್ಡಲಾಗಿ ಹಾಕಿದರೂ ನೀರು ಸೋರುವುದು ನಿಂತಿಲ್ಲ. ಹೀಗಾಗಿ ನೀರಾವರಿ ತಜ್ಞರ ಸಲಹೆಯಂತೆ ತಡೆ ನಿಯಂತ್ರಣ ಕೆಲಸ ಭರದಿಂದ ಮುಂದುವರಿದಿದೆ. ಕಸಾಪುರ ಗ್ರಾಮಸ್ಥರು ಚಾತಕ ಪಕ್ಷಿಯಂತೆ ಕೆರೆ ಬಳಿ ಕಾಯುತ್ತಾ ಕುಳಿತ್ತಿದ್ದಾರೆ. ಯಾವುದೇ ವಾಹನಗಳು ಏರಿ ಮೇಲೆ ಬರುವುದನ್ನು ತಡೆಯುವ ಪ್ರಯತ್ನ ಗ್ರಾಮಸ್ಥರು ಮಾಡುತ್ತಾರೆ.

ಕೆರೆ ಏರಿ ಒಡೆಯಲು ತಾಲೂಕಿನಾದ್ಯಂತ ಸದ್ದು ಮಾಡುತ್ತಿರುವ ವಿಂಡ್ ಫ್ಯಾನ್‌ಗಳ ಹೊತ್ತ ಬೃಹತ್ ಲಾರಿಗಳ ಸಂಚಾರವೇ ಕಾರಣವಾಗಿದೆ. ಬೃಹತ್ ಯಂತ್ರಗಳನ್ನು ಕೆರೆ ಏರಿ ಮೇಲೆ ಸಾಗಿಸುವ ಮೂಲಕ ಭಾರಿ ಗಾತ್ರದ ವಾಹನಗಳು ಕೆರೆ ಏರಿಗೆ ದಕ್ಕೆಯಾಗಲು ಕಾರಣವೆಂದು ಗ್ರಾಮಸ್ಥರ ಆರೋಪವಾಗಿದೆ.

ನೀರಾವರಿ ಇಲಾಖೆ ನಿರ್ಲಕ್ಷ್ಯ:

ಕಳೆದ ನಾಲ್ಕು ದಿನಗಳ ಹಿಂದೆ ಸಮೀಪದ ಮಹಾದೇಪುರದ ಹೊರವಲಯದ ಗೋಕಟ್ಟೆ ಹೊಡೆದು ಹೋಗಿ ಇಡೀ ಗ್ರಾಮಕ್ಕೆ ನೀರು ನುಗ್ಗಿ ಅಪಾರ ಪ್ರಮಾಣದ ನೀರು ಪೋಲ್ ಆಗಿದೆ. ಅಲ್ಲದೇ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಹುಲಿಕೆರೆ ಕೆರೆಯು ಸಹ ಏರಿಯ ಮಣ್ಣು ಜರುಗಿದೆ. ಹೊಸಹಟ್ಟಿ ಸಮೀಪದ ಬೃಹತ್ ಚೆಕ್ ಡ್ಯಾಂ ನೀರು ಗುಂಡುಮುಣಗು ಕೆರೆಗೆ ಹೋಗಲು ಇದ್ದ ಕಾಲುವೆ ದುರಸ್ತಿ ಮಾಡಿಸದ ಕಾರಣ ಕಳೆದೊಂದು ತಿಂಗಳಿಂದ ರಂಗಯ್ಯನದುರ್ಗ ಜಲಾಶಯಕ್ಕೆ ನಿರಂತರವಾಗಿ ನೀರು ಪೋಲಾಗಿ ಹರಿಯುತ್ತಿದ್ದರೂ ಇತ್ತ ಯಾವ ಅಧಿಕಾರಿ ಮುಖ ಮಾಡಿಲ್ಲ. ಗಂಡಬೊಮ್ಮನಹಳ್ಳಿ ಕೆರೆಯ ಎಡದಂಡೆ ಕಾಲುವೆ ಕೊಚ್ಚಿ ಹೋಗಿ ಎರಡು ವಾರ ಕಳೆದರೂ ಸಹ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಕ್ಯಾರೇ ಅನ್ನುತ್ತಿಲ್ಲ. ಹೀಗಾಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯ ಜನರು ಹಿಡಿಶಾಪ ಹಾಕುತ್ತಾರೆ.

ಬೆಳಗಿನಿಂದಲೇ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ₹6 ಕೋಟಿ ವೆಚ್ಚದಲ್ಲಿ ಗಂಡಬೊಮ್ಮನಹಳ್ಳಿ ಎಡ, ಬಲದಂಡೆ ಕಾಲುವೆ ಮತ್ತು ಹೊಸಹಟ್ಟಿ ಬಳಿಯ ಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳಲಾಗಿದೆ. ಹಲವು ದಶಕಗಳ ನಂತರ ಉತ್ತಮ ಮಳೆಯಾಗಿ ಕೆರೆ, ಕಟ್ಟೆ ಭರ್ತಿಯಾಗಿರುವುದು ಸಂತಸದ ಸಂಗತಿ. ಈ ನಡುವೆ ಇಂತಹ ಘಟನೆಗಳು ಜರುಗುತ್ತಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ