ಕೊಪ್ಪಳ: ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ದಿನದಿಂದ ದಿನಕ್ಕೆ ಸಂಕಷ್ಟದ ಸ್ಥಿತಿಗೆ ತಲುಪುತ್ತಿದ್ದು, ಪತ್ರಕರ್ತರು ಅನೇಕ ಒತ್ತಡ, ಸವಾಲು ಹಾಗೂ ಅಭದ್ರತೆಯ ನಡುವೆ ವೃತ್ತಿ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಕಳವಳ ವ್ಯಕ್ತಪಡಿಸಿದರು.
ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತನಿಖಾ ಪತ್ರಿಕೋದ್ಯಮ ಬಹುತೇಕ ನಶಿಸುತ್ತಿದ್ದು, ಯುವ ಪತ್ರಕರ್ತರು ಮೌಲ್ಯಾಧಾರಿತ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ ಉಳಿಸುವ ಸಂಕಲ್ಪ ಮಾಡಬೇಕು. ಪತ್ರಕರ್ತರು ನಿರ್ಭೀತಿಯಿಂದ ಪ್ರಶ್ನಿಸಿದರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದರು.
ವಾರ್ಷಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಆನಂದ ಬೈದನಮನೆ, ಪತ್ರಿಕೋದ್ಯಮದಲ್ಲಿ 25 ವರ್ಷಗಳ ಸೇವೆಗೆ ದೊರೆತ ಗೌರವ ಸಂತಸ ತಂದಿದೆ ಎಂದರು.ವೃತ್ತಿ ಬದುಕಿನಲ್ಲಿ ವೈಯಕ್ತಿಕ ಸಂತೋಷ ತ್ಯಾಗ ಮಾಡಿ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ಮಾಧ್ಯಮ ಕ್ಷೇತ್ರ ಇಂದು ಉದ್ಯಮವಾಗಿ ರೂಪಾಂತರಗೊಂಡಿರುವುದರಿಂದ ಹಲವು ಸವಾಲುಗಳು ಎದುರಾಗುತ್ತಿವೆ. ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳಿಗೆ ಸರ್ಕಾರ ಸ್ಪಂದಿಸುತ್ತಿದ್ದರೆ ಈಗ ಆ ಗಂಭೀರತೆ ಕಾಣುತ್ತಿಲ್ಲ ಎಂದು ವಿಷಾದಿಸಿದರು.
ಹಿರಿಯ ಪತ್ರಕರ್ತ ಶರಣಬಸವ ಹುಲಿಹೈದರ, ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಹಾಗೂ ನಾಭಿರಾಜ ದಸ್ತೇನವರ ಅವರನ್ನು ಸನ್ಮಾನಿಸಲಾಯಿತು. ಅನುಪಸ್ಥಿತರಾಗಿದ್ದ ಭರತ್ ಕಂದಕೂರ ಪರವಾಗಿ ಅವರ ಪತ್ನಿ ಸುಧಾ ಕಂದಕೂರ ಗೌರವ ಸ್ವೀಕರಿಸಿದರು. ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲು ಸಹಕರಿಸಿದ ಕೆ.ಎಸ್. ಆಸ್ಪತ್ರೆಯ ಮುಖ್ಯಸ್ಥ ಡಾ. ಬಸವರಾಜ ಕ್ಯಾವಟರ್ ಅವರನ್ನು ಅಭಿನಂದಿಸಲಾಯಿತು.
ಮೀಡಿಯಾ ಕ್ಲಬ್ ಅಧ್ಯಕ್ಷ ದೇವು ನಾಗನೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್ ಪದಾಧಿಕಾರಿಗಳು, ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಇದ್ದರು.