ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪಟ್ಟಣ ಪಂಚಾಯತಿಗೆ ಬಿಡುಗಡೆಯಾದ ಪೂರ್ಣ ಅನುದಾನವನ್ನು ಫೆಬ್ರವರಿ ಮಾಹೆಯ ಅಂತ್ಯದೊಳಗೆ ಖರ್ಚು ಮಾಡಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಿದ್ದು ಫೆಬ್ರವರಿ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ತಿ ಮಾಡಬೇಕು ಎಂದರು.ಗುತ್ತಿಗೆದಾರರಿಗೆ ಒತ್ತಡ ಹೇರಿ
ಸಭೆಯಲ್ಲಿದ್ದ ಸದಸ್ಯರು, ಪಟ್ಟಣದ ಮುಖ್ಯಭಾಗದಲ್ಲಿರುವ ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿದ್ದು ಸಂಚಾರಕ್ಕೆ ತುಂಬಾನೆ ಕಷ್ಟಕರವಾಗಿದೆ. ಜೊತೆಗೆ ಈ ರಸ್ತೆಯಲ್ಲಿ ಶಾಲೆಗಳು, ಎರಡು ಕಾಲೇಜುಗಳಿದ್ದು ಶಾಲಾ ಸಮಯದಲ್ಲಿ ಓಡಾಡಲು ಕಷ್ಟಕರವಾಗಿದೆ. ಆದ್ದರಿಂದ ರಸ್ತೆ ಅಗಲೀಕರಣ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಆದರೆ 11 ನೇ ವಾರ್ಡಿನ ಸದಸ್ಯೆ ಮಂಜುಳಮ್ಮ ರಸ್ತೆ ಅಗಲೀಕರಣವನ್ನು ಮುಂದೂಡುವಂತೆ ಒತ್ತಾಯಿಸಿದರು.
ರಸ್ತೆ ಅಗಲೀಕರಣಕ್ಕೆ ನಡಾವಳಿ ರೂಪಿಸಿಶಾಸಕ ಸುಬ್ಬಾರೆಡ್ಡಿ ಉತ್ತರಿಸಿ, ರಸ್ತೆ ಅಗಲೀಕರಣದ ಬಗ್ಗೆ ಪ.ಪಂ. ಸದಸ್ಯರು ನಡಾವಳಿ ನಮೂದಿಸಬೇಕು. ಬಳಿಕ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು. ಅಲ್ಲದೆ ಈ ಹಿಂದೆ ಪಟ್ಟಣದ ರಸ್ತೆ ಅಗಲೀಕರಣದ ವೇಳೆ ನಿವೇಶನ ಕಳೆದುಕೊಂಡವರಿಗೆ ನಿವೇಶನ ನೀಡುವ ಸಲುವಾಗಿ ಬ್ರಾಹ್ಮಣರಹಳ್ಳಿ ಸ.ನಂ 88 ಹಾಗೂ ಪಲ್ಲೈಗಾರಹಳ್ಳಿ ಸ.ನಂ 7 ರಲ್ಲಿ ಜಮೀನು ಗುರ್ತಿಸಿದ್ದು, ಅಧಿಕಾರಿಗಳು ಅತಿ ಜರೂರಾಗಿ ಲೇಔಟ್ ಮಾಡಿ ನಿವೇಶನಗಳನ್ನು ಸಿದ್ದಪಡಿಸುವಂತೆ ಸೂಚಿಸಿದರು.
ಈ ಹಿಂದೆ ಸರ್ಕಾರಕ್ಕೆ ವಾಪಸ್ಸು ಹೋಗಿದ್ದಂತಹ ಸುಮಾರು 2 ಕೋಟಿ ಅನುದಾನ ಮತ್ತೆ ವಾಪಸ್ಸು ತರಲಾಗಿದೆ. ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಎಲ್ಲಾ ಸದಸ್ಯರು ಸೇರಿ ಒಂದು ಕ್ರಿಯಾಯೋಜನೆ ಸಿದ್ದಪಡಿಸಿ ನನಗೆ ಸಲ್ಲಿಸಿ 2 ಕೋಟಿ ಪೈಕಿ 1.5 ಕೋಟಿ ಅನುದಾನ ಬಿಡುಗಡೆ ಮಾಡಿಸುತ್ತೇನೆ. ಉಳಿದ 50 ಲಕ್ಷದಲ್ಲಿ ಬೇರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಜೊತೆಗೆ ಪಟ್ಟಣದ ಹೊರವಲಯದ ಅಮಾನಿಬೈರಸಾಗರ ಕೆರೆ ಕಟ್ಟೆಯ ಮೇಲೆ ಹುಲ್ಲು ಹಾಸು ಹಾಕಿಸಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.ಪುರಸಭೆಯಾಗಿ ಮೇಲ್ದರ್ಜೆಗೇರಿಸಿ
ಉಳಿದಂತೆ ಪಟ್ಟಣ ಪಂಚಾಯತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವುದು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚೆ ಮಾಡಲಾಯಿತು. ಈ ವೇಳೆ ಪ.ಪಂ ಅಧ್ಯಕ್ಷೆ ನಗೀನ್ ತಾಜ್, ಉಪಾಧ್ಯಕ್ಷ ವಿಕಾಸ್, ಮುಖ್ಯಾಧಿಕಾರಿ ಸಭಾ ಶಿರೀನ್, ರಾಜೇಶ್, ಅನುಷಾ, ವೀನಾನಿತೀನ್, ಬಷೀರಾ ಅಹಮದ್, ಗಂಗರಾಜು, ಮಂಜುಳ, ಜಿ.ರಾಜೇಶ್, ಇಸ್ಮಾಯಿಲ್ ಅಜಾದ್, ಬಷೀರಾ ಸೇರಿದಂತೆ ಪ.ಪಂ ಅಧಿಕಾರಿಗಳು ಹಾಜರಿದ್ದರು.18ಜಿಯುಡಿ1: ಗುಡಿಬಂಡೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತನಾಡಿದರು.