ಮುಂಡರಗಿ: ಪಟ್ಟಣದಲ್ಲಿನ ಕೈಗಾರಿಕಾ ವಸಾಹತು ಪ್ರದೇಶ ಸೇರಿದಂತೆ ಸಾರ್ವಜನಿಕರು ನಿವೇಶನ ಮಾಡಿ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ನಾಗರಿಕ ಸೌಲಭ್ಯ ಹಾಗೂ ಉದ್ಯಾನವನ ನಿರ್ಮಾಣಕ್ಕಾಗಿ ಬಿಟ್ಟಿರುವ ಖಾಲಿ ಜಾಗೆಗಳನ್ನು ಅನೇಕರು ನಿಯಮ ಬಾಹಿರವಾಗಿ ಬಳಸಿಕೊಳ್ಳುತ್ತಿದ್ದು, ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಆ ಜಾಗೆ ಗುರುತಿಸಿ ತಂತಿ ಬೇಲಿ ಹಾಕಿಸಬೇಕು ಎಂದು ಸದಸ್ಯ ಲಿಂಗರಾಜಗೌಡ ಪಾಟೀಲ ಒತ್ತಾಯಿಸಿದರು. ಅವರು ಮಂಗಳವಾರ ಪುರಸಭೆ ಸಭಾಭವನದಲ್ಲಿ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನ್ನವರ, ಈ ಕೂಡಲೇ ನಾಗರಿಕ ಸೌಲಭ್ಯ ಹಾಗೂ ಉದ್ಯಾನವನದ ನಿವೇಶನಗಳಿಗೆ ಸದಸ್ಯರು ಹೇಳುವ ಪ್ರಕಾರ ತಂತಿಬೇಲಿ ಅಳವಡಿಸುವುದಾಗಿ ಭರವಸೆ ನೀಡಿದರು.
ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಪಟ್ಟಣದ ಗದಗ ರಸ್ತೆಯಲ್ಲಿರುವ ಅನ್ನದಾನೀಶ್ವರ ರುದ್ರಭೂಮಿಯಲ್ಲಿ ನಿತ್ಯವೂ ಸಾರ್ವಜನಿಕರು ಬಹಿರ್ದೆಸೆಗೆ ತೆರಳುತ್ತಿದ್ದು, ಪಟ್ಟಣದ ಜನತೆ ಶವಸಂಸ್ಕಾರಕ್ಕೆ ಬಂದಾಗ ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆಯೇ ಅದಕ್ಕಾಗಿ ಅಂದಾಜು ಪತ್ರಿಕೆ ತಯಾರಿಸಲು ತಿಳಿಸಲಾಗಿತ್ತು. ಅಲ್ಲಿ ತಕ್ಷಣವೇ ಗೇಟು ಅಳವಡಿಸುವ ಕಾರ್ಯ ಮಾಡಬೇಕು ಎಂದರು. ಇದಕ್ಕೆ ಪುರಸಭೆ ಅಭಿಯಂತರ ಉತ್ತರಿಸಿ ಈಗಾಗಲೇ ಅಂದಾಜು ಪತ್ರಿಕೆ ತಯಾರಿಸಿದ್ದು, ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.ಪಟ್ಟಣದಲ್ಲಿ ಕಳೆದ ವರ್ಷದಿಂದ ನಗರೋತ್ಥಾನ ಕಾಮಗಾರಿ ನಡೆಯುತ್ತಿದ್ದು, ವಿವಿಧ ವಾರ್ಡ್ಗಳಲ್ಲಿ ಕಾಮಗಾರಿ ವಿಳಂಬವಾಗುತ್ತಿವೆ. ಇದುವರೆಗೂ ಯಾವೊಬ್ಬ ಸದಸ್ಯರೂ ಟೆಂಡರ್ ಪಡೆದ ಗುತ್ತಿಗೆದಾರರ ಮುಖ ನೋಡಿಲ್ಲ. ಪಟ್ಟಣದಲ್ಲಿ ಕಾಮಗಾರಿ ನಡೆಯುತ್ತಿರುವ ವಾರ್ಡ್ನ ಜನತೆ ನಮಗೆ ಛೀಮಾರಿ ಹಾಕುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದರೆ ಸೌಜನ್ಯಕ್ಕೂ ಸರಿಯಾಗಿ ಮಾತನಾಡುವುದಿಲ್ಲ ಎಂದು ಬಹುತೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನಮ್ಮಲ್ಲಿ ಅಭಿಯಂತರರ ಹುದ್ದೆ ಖಾಲಿ ಇದ್ದು, ಬೇರೆಡೆಯಿಂದ ನಿಯೋಜನೆ ಮಾಡಿದ್ದರಿಂದ ಅವರು ಸರಿಯಾಗಿ ಸಮಯ ಕೊಡಲು ಆಗುತ್ತಿಲ್ಲವಾದ್ದರಿಂದ ಕಾಮಗಾರಿಗಳ ಪ್ರಾರಂಭಕ್ಕೆ ವಿಳಂಬವಾಗುತ್ತಿದೆ ಎಂದು ಸಮಜಾಯಿಸಿದರು. ಆದರೆ ಸದಸ್ಯರು ಶೀಘ್ರವೇ ಎಲ್ಲರೂ ಜಿಲ್ಲಾಧಿಕಾರಿಗೆ ಭೇಟಿ ಮಾಡಿ ನಮ್ಮ ಪುರಸಭೆಗೆ ಕಾಯಂ ಅಭಿಯಂತರರನ್ನು ನೇಮಿಸುವಂತೆ ಒತ್ತಾಯಿಸೋಣ ಎಂದರು.
ಪಟ್ಟಣದ ಬಹುತೇಕ ಎಲ್ಲ ವಾರ್ಡ್ಗಳಲ್ಲಿಯೂ ಬಯಲು ಬಹಿರ್ದೇಸೆ ಬಹಿರಂಗವಾಗಿಯೇ ನಡೆಯುತ್ತಿದ್ದು, ಪುರಸಭೆ ಅಧಿಕಾರಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಗಮನಹರಿಸುತ್ತಿಲ್ಲ. ಮೇಲಾಗಿ ಅವರು ಕೇಂದ್ರ ಸರ್ಕಾರಕ್ಕೆ ಬಯಲು ಬಹುರ್ದೇಸೆ ಮುಕ್ತ ಪಟ್ಟಣ ಎಂದು ತಿಳಿಸುವುದ್ಕಾಗಿ ಇತ್ತೀಚೆಗೆ ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು,ಅದು ಸರಿಯಲ್ಲ. ಮೊದಲು ನಿಜವಾದ ಬಯಲು ಬಹಿರ್ದೇಸೆ ಮುಕ್ತ ಪಟ್ಟಣ ಮಾಡೋಣ ಎಂದು ಸದಸ್ಯ ಪ್ರಹ್ತಾದ ಹೊಸಮನಿ ತಿಳಿಸಿದರು. ತಕ್ಷಣವೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಅಂಬೇಡ್ಕರ್ ನಗರದಲ್ಲಿನ ಬಹುತೇಕ ನಿವಾಸಿಗಳಿಗೆ ಉತಾರವಿರುವುದಿಲ್ಲ. ಆದ್ದರಿಂದ ಎಲ್ಲರಿಗೂ ತಕ್ಷಣವೇ ಉತಾರ ನೀಡುವ ವ್ಯವಸ್ಥೆಯಾಗಬೇಕು ಎಂದು ಸದಸ್ಯರಾದ ಪವನ್ ಮೇಟಿ ಹಾಗೂ ಸಂತೋಷ ಹಿರೇಮನಿ ಒತ್ತಾಯಿಸಿದರು.